ADVERTISEMENT

ಗ್ರಾಮಾಭಿವೃದ್ಧಿಯ ಪ್ರಗತಿಯ ತೇರು: ಇದೋ ಹೊಸ ಜೀವನ ದಾರಿ...

ಎಂ.ಎನ್.ಯೋಗೇಶ್‌
Published 19 ಸೆಪ್ಟೆಂಬರ್ 2021, 3:45 IST
Last Updated 19 ಸೆಪ್ಟೆಂಬರ್ 2021, 3:45 IST
ನೂಲಿಗೆ ಬಣ್ಣದ ಡೈ ಮಾಡುತ್ತಿರುವುದು
ನೂಲಿಗೆ ಬಣ್ಣದ ಡೈ ಮಾಡುತ್ತಿರುವುದು   

ಮೇಲುಕೋಟೆ ಎಂದೊಡನೆ ಪುಳಿಯೋಗರೆ ಬೆನ್ನಿಗೇ ನೆನಪಾಗುವುದು ಖಾದಿ ಬಟ್ಟೆ. ಸುರೇಂದ್ರ ಕೌಲಗಿ ಅವರು ಬಹುಹಿಂದೆಯೇ ತೋರಿಸಿದ ‘ಹೊಸ ಜೀವನ ದಾರಿ’ಯಲ್ಲಿ ಗ್ರಾಮಾಭಿವೃದ್ಧಿಯ ಪ್ರಗತಿಯ ತೇರು ಎಲ್ಲಿಯವರೆಗೆ ಉರುಳಿದೆ? ಮತ್ತೆ ಮುಂದೆ ಎತ್ತ ಹೊರಳಲಿದೆ?

***

ಒಂದು ಕಾಲಕ್ಕೆ ಮೇಲುಕೋಟೆಯು ಪುಳಿಯೋಗರೆಗೆ ಮಾತ್ರವಲ್ಲ, ಖಾದಿ ಪಂಚೆಗೂ ಪ್ರಸಿದ್ಧಿ ಪಡೆದಿತ್ತು. ಇಲ್ಲಿಯ ಪಂಚೆ, ಶಲ್ಯ, ಟವೆಲ್‌, ಸೀರೆ, ಕರವಸ್ತ್ರಗಳು ದಕ್ಷಿಣ ಭಾರತದಾದ್ಯಂತ ಹೆಸರುವಾಸಿಯಾಗಿದ್ದವು. ಮೇಲುಕೋಟೆ ಪಂಚೆ ಮಧುಮಕ್ಕಳ ನೆಚ್ಚಿನ ಆಯ್ಕೆಯಾಗಿತ್ತು. ದಕ್ಷಿಣ ಬದರಿಕಾಶ್ರಮ ಎಂದೇ ಪ್ರಸಿದ್ಧಿ ಪಡೆದಿರುವ ಈ ಪವಿತ್ರ ಕ್ಷೇತ್ರದಲ್ಲಿ ಗಂಟೆ, ಜಾಗಟೆಗಳ ಜೊತೆಗೆ ಕೈಮಗ್ಗಗಳ ಸದ್ದೂ ಕಿವಿಗಡಚುತ್ತಿತ್ತು. ಗುಡಿ ಕೈಗಾರಿಕೆ, ಕರಕುಶಲ ಚಟುವಟಿಕೆಗಳೂ ಇದ್ದವು.

60ರ ದಶಕದಲ್ಲಿ ಸುರೇಂದ್ರ ಕೌಲಗಿ– ಗಿರಿಜಾ ಕೌಲಗಿ ದಂಪತಿ ಗಾಂಧಿ ತತ್ವಾಧಾರಿತ ಚಟುವಟಿಕೆಗಳ ಮೂಲಕ ಮೇಲುಕೋಟೆಗೆ ಹೊಸ ಸ್ಪರ್ಶ ನೀಡಿದರು. ಜಯಪ್ರಕಾಶ ನಾರಾಯಣರ ಆಪ್ತ ಕಾರ್ಯದರ್ಶಿಯಾಗಿದ್ದ ಸುರೇಂದ್ರ ಕೌಲಗಿ ಅವರು ಮೇಲುಕೋಟೆಯಲ್ಲಿ ನೆಲೆ ನಿಂತರು. ‘ಜನಪದ ಸೇವಾ ಟ್ರಸ್ಟ್‌’ ಸ್ಥಾಪಿಸುವ ಮೂಲಕ ಸ್ವರಾಜ್ಯ ಕಲ್ಪನೆಗೆ ನೀರೆರೆದರು. ಆಧುನಿಕತೆಯ ಪ್ರಭಾವ, ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಯಿಂದಾಗಿ ಮೇಲುಕೋಟೆಯಲ್ಲಿ ಸದ್ಯ ಕೈಮಗ್ಗಗಳ ಸದ್ದಡಗಿದೆ, ಕರಕುಶಲ ಚಟುವಟಿಕೆಗಳು ಇನ್ನಿಲ್ಲವಾಗಿವೆ. ಆದರೆ, ಸುರೇಂದ್ರ ಕೌಲಗಿ ಅವರು ಸ್ಥಾಪಿಸಿದ ಗಾಂಧಿ ತತ್ವಾಧಾರಿತ ಚಟುವಟಿಕೆಗಳು ಈಗಲೂ ಜೀವಂತವಾಗಿವೆ.

1980ರಲ್ಲಿ ಅವರು ಆರಂಭಿಸಿದ ‘ಹೊಸ ಜೀವನ ದಾರಿ’ಯ ಚಟುವಟಿಕೆಗಳು ಈಗಲೂ ಸುಸ್ಥಿರ ಬದುಕಿನ ಹುಡುಕಾಟ ನಡೆಸುತ್ತಿವೆ. ಖಾದಿ, ಕೈಮಗ್ಗ, ಸಾವಯವ ಕೃಷಿ, ಪರಿಸರ ಅಭಿವೃದ್ಧಿಯ ಕೆಲಸಗಳು ಆರ್ಥಿಕ ಸ್ವಾವಲಂಬನೆಯ ಹಾದಿಯಲ್ಲಿ ಹೆಜ್ಜೆ ಇಟ್ಟಿವೆ. ಮೇಲುಕೋಟೆ ಬೆಟ್ಟದ ತಟದ ಭೂಮಿಯಲ್ಲಿ ಅರಳಿ ನಿಂತಿರುವ ‘ಹೊಸ ಜೀವನ ದಾರಿ’ಯು ಧಾವಂತದ ಬದುಕು, ಕೊಳ್ಳುಬಾಕ ಸಂಸ್ಕೃತಿ, ಲಾಭಕೋರತನ ಕುರಿತ ಪ್ರಶ್ನೆಗಳಿಗೆ ಉತ್ತರ ಒದಗಿಸುತ್ತದೆ.

‘ಹೊಸ ಜೀವನ ದಾರಿ’ಯಲ್ಲಿ 15 ಕುಟುಂಬಗಳು ಕೈಮಗ್ಗಗಳಿಂದ ಬದುಕು ಕಟ್ಟಿಕೊಂಡಿವೆ. 8 ಕೈಮಗ್ಗಗಳಿದ್ದು 20 ನೌಕರರು ಖಾದಿ ವಸ್ತ್ರ ನೇಯ್ಗೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ನೇಯ್ದ ಬಟ್ಟೆಗಳನ್ನು ಮೇಲುಕೋಟೆಯ ಜನಪದ ಟ್ರಸ್ಟ್‌ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ಸಂಪೂರ್ಣವಾಗಿ ಗಾಂಧಿ ತತ್ವ, ಜನಪದ ಖಾದಿ ತತ್ವದೊಂದಿಗೆ ನಡೆಯುತ್ತಿರುವ ನೇಯ್ಗೆ ಚಟುವಟಿಕೆಯ ಹಿಂದೆ ಲಾಭದಾಸೆ, ವಿಸ್ತರಣಾವಾದದ ಸೋಂಕಿಲ್ಲ.

ಕೈಮಗ್ಗಗಳಲ್ಲಿ ತೊಡಗಿಸಿಕೊಂಡವರು ಕಾರ್ಮಿಕರಲ್ಲ, ಮಾಲೀಕ–ಕಾರ್ಮಿಕ ಎನ್ನುವ ಶ್ರೇಣಿ ಇಲ್ಲ. ಎಲ್ಲರೂ ಮಾಲೀಕರೇ ಆಗಿದ್ದು ಇರುವ 20 ಮಂದಿಗೆ ಭದ್ರತೆಯ ಬದುಕು ಕಟ್ಟಿಕೊಡಲಾಗಿದೆ.

ಇಷ್ಟೇ ಬಟ್ಟೆ ನೇಯ್ಗೆ ಮಾಡಬೇಕು, ಇಷ್ಟು ಗಂಟೆ ಕೆಲಸ ಮಾಡಬೇಕು ಎಂಬ ಮಿತಿ ಇಲ್ಲ. ಯಾವುದೇ ಸಮಯದಲ್ಲಿ ಬಂದು ಕೆಲಸ ಮಾಡಬಹುದು. ನೇಕಾರಿಕೆ ಗೊತ್ತಿಲ್ಲದವರೂ ಇಲ್ಲಿ ಕೆಲಸ ಕಲಿತು ನೇಯ್ಗೆ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ಕೆಲಸ ಮಾಡಿದವರು, ಟೇಲರ್‌ ವೃತ್ತಿಯಲ್ಲಿದ್ದವರು ಖಾದಿ ಚಟುವಟಿಕೆಯಲ್ಲಿ ಹೊಸ ಬದುಕು ಕಂಡಿದ್ದಾರೆ.

‘ಹೊಸಜೀವನದಾರಿ’ ಆವರಣದಲ್ಲಿ ಖಾದಿ ವಸ್ತ್ರ ನೇಯ್ಗೆಯಲ್ಲಿ ತೊಡಗಿರುವ ಪುಷ್ಪಲತಾ

‘ನಾನು ಬೆಂಗಳೂರಿನ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ. ₹ 4 ಸಾವಿರಕ್ಕಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡಬೇಕಾಗಿತ್ತು. ಮನೆ, ಮಕ್ಕಳಿಂದ ಬದುಕು ದೂರವಾಗಿತ್ತು. 6 ವರ್ಷಗಳಿಂದ ಹೊಸಜೀವನ ದಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಹೊಸ ಬದುಕು ಕಂಡಿದ್ದೇನೆ’ ಎಂದು ನೇಯ್ಗೆ ಕೆಲಸ ಮಾಡುವ ಪುಷ್ಪಲತಾ ಹೇಳುತ್ತಾರೆ.

ಲಾಭದ ಹಂಚಿಕೆ:ದೇಶದ ಬಹುತೇಕ ಕಡೆ ಕೈಮಗ್ಗ ಚಟುವಟಿಕೆ, ಖಾದಿ ಗ್ರಾಮೋದ್ಯೋಗ ವಹಿವಾಟು ನಷ್ಟದಲ್ಲಿ ಮುಳುಗಿದೆ. ಆದರೆ ಹೊಸ ಜೀವನ ದಾರಿ ಚಟುವಟಿಕೆಗಳು ನಷ್ಟ ಕಂಡಿಲ್ಲ. ಬಂದ ಲಾಭವನ್ನು ಮೂರು ಹಂತದಲ್ಲಿ ಹಂಚಿಕೆ ಮಾಡಲಾಗುತ್ತದೆ. ಶೇ 60ರಷ್ಟು ಲಾಭವನ್ನು ಜನಪದ ಟ್ರಸ್ಟ್‌, ಕೆಲಸಗಾರರು ಹಾಗೂ ಸಂಯೋಜಕರಿಗೆ ಸಮನಾಗಿ ಹಂಚಿಕೆ ಮಾಡಲಾಗುತ್ತದೆ. ಉಳಿದ ಶೇ 40ರಷ್ಟನ್ನು ಸಾಮಾಜಿಕ ಭದ್ರತೆಗಾಗಿ ಮೀಸಲಿಡಲಾಗಿದೆ.

ಅದರಲ್ಲಿ ಶೇ 10ರಷ್ಟನ್ನು ಗುಂಪು ಅಭಿವೃದ್ಧಿ ಚಟುವಟಿಕೆ ಎತ್ತಿಡಲಾಗಿದ್ದು ಅದನ್ನು ಕೆಲಸಗಾರರ ಸಾಂಸ್ಕೃತಿಕ ಚಟುವಟಿಕೆ, ವ್ಯಕ್ತಿತ್ವ ವಿಕಸನ ಶಿಬಿರಗಳಿಗೆ ವಿನಿಯೋಗಿಸಲಾಗುತ್ತಿದೆ. ಶೇ 2ರಷ್ಟು ಹಣವನ್ನು ಆರೋಗ್ಯಕ್ಕಾಗಿ ತೆಗೆದಿರಿಸಲಾಗಿದೆ. ಶೇ 5ರಷ್ಟು ಹಣ ಭವಿಷ್ಯ ನಿಧಿಗೆ ಪಾವತಿಸಲಾಗುತ್ತದೆ. ದೇವರ ನಿಧಿ ವಿಶೇಷವಾಗಿದ್ದು ಶೇ 1ರಷ್ಟು ಹಣ ಮೀಸಲಿಡಲಾಗಿದೆ. ಆವರಣದಲ್ಲಿ ಒಂದು ಹಣದ ಡಬ್ಬಿ ಇದ್ದು ಯಾರಿಗೇ ತುರ್ತು ಅಗತ್ಯವಿದ್ದರೂ ಅದರಲ್ಲಿ ಹಣ ತೆಗೆದುಕೊಂಡು ಅಲ್ಪ ಬಡ್ಡಿಯೊಂದಿಗೆ ವಾಪಸ್‌ ಹಣ ತಂದಿಡಬಹುದು. ಇದನ್ನು ಯಾರು ಕೂಡ ನಿರ್ವಹಣೆ ಮಾಡುವುದಿಲ್ಲ. ಕೆಲಸಗಾರರ ನಡುವಿನ ವಿಶ್ವಾಸದ ಮೇಲೆ ಈ ನಿಧಿ ಸಹಾಯಕ್ಕೆ ಬರುತ್ತಿದೆ.

‘ಹೊಸ ಜೀವನ ದಾರಿ’ ಆವರಣದಲ್ಲಿ ಬಣ್ಣದ ಮನೆ (ಡೈಯಿಂಗ್ ಯೂನಿಟ್‌) ಇದ್ದು ಖಾದಿ ನೂಲಿಗೆ ನೈಸರ್ಗಿಕವಾಗಿ ಬಣ್ಣಗಟ್ಟಿಸಲಾಗುತ್ತಿದೆ. ಪರಿಣಿತ ಕುಶಲಕರ್ಮಿಗಳು ದೇಸಿ ಮಾದರಿಯಲ್ಲಿ ಡೈಯಿಂಗ್‌ ಮಾಡುತ್ತಾರೆ. ರಾಸಾಯನಿಕ ಮುಕ್ತವಾಗಿ ಸಸ್ಯ, ಹಣ್ಣು, ಬೇರು ಬಳಸಿ ಬಣ್ಣ ತುಂಬಲಾಗುತ್ತದೆ.

ಸಾವಯವ ಕೃಷಿ:ಹೊಸ ಜೀವನ ದಾರಿ ಆವರಣದ ಅರ್ಧ ಭಾಗದಲ್ಲಿ ಖಾದಿ ಚಟುವಟಿಕೆ, ತರಬೇತಿ ಕೊಠಡಿ, ಕುಟೀರಗಳಿವೆ. ಉಳಿದರ್ಧ ಭಾಗವನ್ನು ಸಾವಯವ ಕೃಷಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಕೃಷಿಯಿಂದ ಸಿಗುವ ಉತ್ಪನ್ನಗಳಿಗೆ ಜನಪದ ರುಜು ಆಹಾರ ಸಂಸ್ಕೃತಿ ರೂಪ ನೀಡಲಾಗಿದ್ದು ಮಾರುಕಟ್ಟೆಗೆ ಕೊಂಡೊಯ್ದು ಮಾರುವುದಿಲ್ಲ. ಬದಲಾಗಿ ನೇಯ್ದೆ, ಕೃಷಿ ಕೆಲಸಗಳಲ್ಲಿ ತೊಡಗಿರುವ ಕೆಲಸಗಾರರಿಗೆ ರಿಯಾಯ್ತಿ ದರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಏಳೆಂಟು ತರದ ತರಕಾರಿ, ಹಣ್ಣುಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ.

ನೆನೆ ಬನ:‘ಹೊಸ ಜೀವನ ದಾರಿ’ ಸಂಸ್ಥೆಯ ಎದುರಿನಲ್ಲಿ ಭೂಮಿಯಲ್ಲಿ ಜನಪದ ಸೇವಾ ಟ್ರಸ್ಟ್‌ ಜೀವವೈವಿದ್ಯ ಅರಣ್ಯ ನಿರ್ಮಿಸುತ್ತಿದೆ. ಇದಕ್ಕೆ ‘ನೆನೆ ಬನ’ ಎಂದು ನಾಮಕರಣ ಮಾಡಲಾಗಿದೆ. ಜನಪದ, ಖಾದಿ, ಸಾವಯವ ಕೃಷಿಯ ಜೊತೆಗೆ ಪರಿಸರ ಸಂರಕ್ಷಣೆಯೂ ಟ್ರಸ್ಟ್‌ನ ಉದ್ದೇಶವಾಗಿದ್ದು ನೆನೆಬನದಲ್ಲಿ 300 ಗಿಡಗಳು ಬೆಳೆಯುತ್ತಿವೆ. ಆಲ ಜಾತಿಯ ನೂರಾರು ಗಿಡಗಳನ್ನು ಬೆಳೆಸಲಾಗುತ್ತಿದೆ. ಬೆಟ್ಟದ ತಟದಲ್ಲೇ ನೆನೆಬನ ರೂಪಗೊಳ್ಳುತ್ತಿದ್ದು ಪಕ್ಷಿಕಾಶಿಯಾಗಿ ರೂಪಗೊಳ್ಳುವ ಲಕ್ಷಣ ಗೋಚರಿಸುತ್ತಿದೆ.

ಕರುಣಾ ಗೃಹ, ಕಸ್ತೂರಬಾ ಸಂಕ್ಷಿಪ್ತ ಶಿಕ್ಷಣ ಶಾಲೆ, ಜನಪದ ಮುದ್ರಣಾಲಯ, ಜನಪದ ವಿದ್ಯಾಲಯ, ಖಾದಿ, ಕೈಮಗ್ಗ, ಹೊಸ ಜೀವನ ದಾರಿ, ವಿಶೇಷ ದತ್ತು ಕೇಂದ್ರ, ನನೆಬನ ಚಟುವಟಿಕೆಗಳ ಮೂಲಕ ಸುಸ್ಥಿರ ಅಭಿವೃದ್ಧಿಯ ಮಾದರಿ ರೂಪಿಸಿರುವ ಜನಪದ ಸೇವಾ ಟ್ರಸ್ಟ್‌ ಹೊಸ ಕಾಲಘಟ್ಟದಲ್ಲೂ ಪ್ರೇರಕ ಶಕ್ತಿಯಾಗಿ ನಿಂತಿದೆ. ಸರ್ಕಾರಗಳಿಂದ ಯಾವುದೇ ರೀತಿಯಾದ ಸಹಾಯ ಪಡೆಯದೇ ಸಹಕಾರ ತತ್ವದ ಮೇಲೆ ನಡೆಯುತ್ತಿದೆ.

‘ಗಾಂಧಿ ಕನಸಿನ ಸಮಾಜ ನಿರ್ಮಾಣ ಕಾರ್ಯದಲ್ಲಿ ಜನಪದ ಸೇವಾ ಟ್ರಸ್ಟ್‌ ಮುನ್ನಡೆಯುತ್ತಿದೆ. ಸಹಕಾರ, ಸ್ವಾವಲಂಬನೆ, ಸುಮುದಾಯದ ಭಾಗಿದಾರಿಕೆಗೆ ಮನ್ನಣೆ ನೀಡಿ ಹೊಸ ತಲೆಮಾರಿನ ಯುವರಲ್ಲಿ ವೈಚಾರಿಕ ನಿಲುವು ಸೃಷ್ಟಿಸುತ್ತಿದೆ’ ಎಂದು ಜನಪದ ಸೇವಾ ಟ್ರಸ್ಟ್‌ ಕಾರ್ಯದರ್ಶಿ ಸಂತೋಷ್‌ ಕೌಲಗಿ ಹೇಳುತ್ತಾರೆ.

ಲಾಭದ ಹಂಚಿಕೆ
ದೇಶದ ಬಹುತೇಕ ಕಡೆ ಕೈಮಗ್ಗ ಚಟುವಟಿಕೆ, ಖಾದಿ ಗ್ರಾಮೋದ್ಯೋಗ ವಹಿವಾಟು ನಷ್ಟದಲ್ಲಿ ಮುಳುಗಿದೆ. ಆದರೆ ಹೊಸ ಜೀವನ ದಾರಿ ಚಟುವಟಿಕೆಗಳು ನಷ್ಟ ಕಂಡಿಲ್ಲ. ಬಂದ ಲಾಭವನ್ನು ಮೂರು ಹಂತದಲ್ಲಿ ಹಂಚಿಕೆ ಮಾಡಲಾಗುತ್ತದೆ. ಶೇ 60ರಷ್ಟು ಲಾಭವನ್ನು ಜನಪದ ಟ್ರಸ್ಟ್‌, ಕೆಲಸಗಾರರು ಹಾಗೂ ಸಂಯೋಜಕರಿಗೆ ಸಮನಾಗಿ ಹಂಚಿಕೆ ಮಾಡಲಾಗುತ್ತದೆ. ಉಳಿದ ಶೇ 40ರಷ್ಟನ್ನು ಸಾಮಾಜಿಕ ಭದ್ರತೆಗಾಗಿ ಮೀಸಲಿಡಲಾಗಿದೆ.

ಅದರಲ್ಲಿ ಶೇ 10ರಷ್ಟನ್ನು ಗುಂಪು ಅಭಿವೃದ್ಧಿ ಚಟುವಟಿಕೆಗೆ ಎತ್ತಿಡಲಾಗಿದ್ದು ಅದನ್ನು ಕೆಲಸಗಾರರ ಸಾಂಸ್ಕೃತಿಕ ಚಟುವಟಿಕೆ, ವ್ಯಕ್ತಿತ್ವ ವಿಕಸನ ಶಿಬಿರಗಳಿಗೆ ವಿನಿಯೋಗಿಸಲಾಗುತ್ತಿದೆ. ಶೇ 2ರಷ್ಟು ಹಣವನ್ನು ಆರೋಗ್ಯಕ್ಕಾಗಿ ತೆಗೆದಿರಿಸಲಾಗಿದೆ. ಶೇ 5ರಷ್ಟು ಹಣ ಭವಿಷ್ಯ ನಿಧಿಗೆ ಪಾವತಿಸಲಾಗುತ್ತದೆ. ದೇವರ ನಿಧಿ ವಿಶೇಷವಾಗಿದ್ದು ಶೇ 1ರಷ್ಟು ಹಣ ಮೀಸಲಿಡಲಾಗಿದೆ. ಆವರಣದಲ್ಲಿ ಒಂದು ಹಣದ ಡಬ್ಬಿ ಇದ್ದು ಯಾರಿಗೇ ತುರ್ತು ಅಗತ್ಯವಿದ್ದರೂ ಅದರಲ್ಲಿ ಹಣ ತೆಗೆದುಕೊಂಡು ಅಲ್ಪ ಬಡ್ಡಿಯೊಂದಿಗೆ ಹಣ ವಾಪಸ್‌ ತಂದಿಡಬಹುದು. ಇದನ್ನು ಯಾರು ಕೂಡ ನಿರ್ವಹಣೆ ಮಾಡುವುದಿಲ್ಲ. ಕೆಲಸಗಾರರ ನಡುವಿನ ವಿಶ್ವಾಸದ ಮೇಲೆ ಈ ನಿಧಿ ಸಹಾಯಕ್ಕೆ ಬರುತ್ತಿದೆ.

‘ಹೊಸಜೀವನದಾರಿ’ ಆವರಣದ ನೋಟ

‘ಹೊಸ ಜೀವನ ದಾರಿ’ ಆವರಣದಲ್ಲಿ ಬಣ್ಣದ ಮನೆ (ಡೈಯಿಂಗ್ ಯೂನಿಟ್‌) ಇದ್ದು ಖಾದಿ ನೂಲಿಗೆ ನೈಸರ್ಗಿಕವಾಗಿ ಬಣ್ಣಗಟ್ಟಿಸಲಾಗುತ್ತಿದೆ. ಪರಿಣತ ಕುಶಲಕರ್ಮಿಗಳು ದೇಸಿ ಮಾದರಿಯಲ್ಲಿ ಡೈಯಿಂಗ್‌ ಮಾಡುತ್ತಾರೆ. ರಾಸಾಯನಿಕಮುಕ್ತವಾಗಿ ಸಸ್ಯ, ಹಣ್ಣು, ಬೇರು ಬಳಸಿ ಬಣ್ಣ ತುಂಬಲಾಗುತ್ತದೆ.

ಸಾವಯವ ಕೃಷಿ
ಹೊಸ ಜೀವನ ದಾರಿ ಆವರಣದ ಅರ್ಧ ಭಾಗದಲ್ಲಿ ಖಾದಿ ಚಟುವಟಿಕೆ, ತರಬೇತಿ ಕೊಠಡಿ, ಕುಟೀರಗಳಿವೆ. ಉಳಿದರ್ಧ ಭಾಗವನ್ನು ಸಾವಯವ ಕೃಷಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಕೃಷಿಯಿಂದ ಸಿಗುವ ಉತ್ಪನ್ನಗಳಿಗೆ ಜನಪದ ರುಜು ಆಹಾರ ಸಂಸ್ಕೃತಿ ರೂಪ ನೀಡಲಾಗಿದ್ದು ಮಾರುಕಟ್ಟೆಗೆ ಕೊಂಡೊಯ್ದು ಮಾರುವುದಿಲ್ಲ. ಬದಲಾಗಿ ನೇಯ್ಗೆ, ಕೃಷಿ ಕೆಲಸಗಳಲ್ಲಿ ತೊಡಗಿರುವ ಕೆಲಸಗಾರರಿಗೆ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಏಳೆಂಟು ಥರದ ತರಕಾರಿ, ಹಣ್ಣುಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ.

ನೆನೆ ಬನ
‘ಹೊಸ ಜೀವನ ದಾರಿ’ ಸಂಸ್ಥೆಯ ಎದುರಿನ ಭೂಮಿಯಲ್ಲಿ ಜನಪದ ಸೇವಾ ಟ್ರಸ್ಟ್‌ ಜೀವವೈವಿಧ್ಯ ಅರಣ್ಯ ನಿರ್ಮಿಸುತ್ತಿದೆ. ಇದಕ್ಕೆ ‘ನೆನೆ ಬನ’ ಎಂದು ನಾಮಕರಣ ಮಾಡಲಾಗಿದೆ. ಜನಪದ, ಖಾದಿ, ಸಾವಯವ ಕೃಷಿಯ ಜೊತೆಗೆ ಪರಿಸರ ಸಂರಕ್ಷಣೆಯೂ ಟ್ರಸ್ಟ್‌ನ ಉದ್ದೇಶವಾಗಿದ್ದು ನೆನೆ ಬನದಲ್ಲಿ 300 ಗಿಡಗಳು ಬೆಳೆಯುತ್ತಿವೆ. ಆಲ ಜಾತಿಯ ನೂರಾರು ಗಿಡಗಳನ್ನು ಬೆಳೆಸಲಾಗುತ್ತಿದೆ. ಬೆಟ್ಟದ ತಟದಲ್ಲೇ ನೆನೆ ಬನ ರೂಪುಗೊಳ್ಳುತ್ತಿದ್ದು ಪಕ್ಷಿಕಾಶಿಯಾಗಿ ರೂಪುಗೊಳ್ಳುವ ಲಕ್ಷಣ ಗೋಚರಿಸುತ್ತಿದೆ.

ಕರುಣಾ ಗೃಹ, ಕಸ್ತೂರಬಾ ಸಂಕ್ಷಿಪ್ತ ಶಿಕ್ಷಣ ಶಾಲೆ, ಜನಪದ ಮುದ್ರಣಾಲಯ, ಜನಪದ ವಿದ್ಯಾಲಯ, ಖಾದಿ, ಕೈಮಗ್ಗ, ಹೊಸ ಜೀವನ ದಾರಿ, ವಿಶೇಷ ದತ್ತು ಕೇಂದ್ರ, ನನೆ ಬನ ಚಟುವಟಿಕೆಗಳ ಮೂಲಕ ಸುಸ್ಥಿರ ಅಭಿವೃದ್ಧಿಯ ಮಾದರಿ ರೂಪಿಸಿರುವ ಜನಪದ ಸೇವಾ ಟ್ರಸ್ಟ್‌ ಹೊಸ ಕಾಲಘಟ್ಟದಲ್ಲೂ ಪ್ರೇರಕಶಕ್ತಿಯಾಗಿ ನಿಂತಿದೆ. ಸರ್ಕಾರಗಳಿಂದ ಯಾವುದೇ ರೀತಿಯಾದ ಸಹಾಯ ಪಡೆಯದೆ ಸಹಕಾರ ತತ್ವದ ಮೇಲೆ ನಡೆಯುತ್ತಿದೆ.

‘ಗಾಂಧಿ ಕನಸಿನ ಸಮಾಜ ನಿರ್ಮಾಣ ಕಾರ್ಯದಲ್ಲಿ ಜನಪದ ಸೇವಾ ಟ್ರಸ್ಟ್‌ ಮುನ್ನಡೆಯುತ್ತಿದೆ. ಸಹಕಾರ, ಸ್ವಾವಲಂಬನೆ, ಸಮುದಾಯದ ಭಾಗಿದಾರಿಕೆಗೆ ಮನ್ನಣೆ ನೀಡಿ ಹೊಸ ತಲೆಮಾರಿನ ಯುವಕರಲ್ಲಿ ವೈಚಾರಿಕ ನಿಲುವು ಸೃಷ್ಟಿಸುತ್ತಿದೆ’ ಎಂದು ಜನಪದ ಸೇವಾ ಟ್ರಸ್ಟ್‌ ಕಾರ್ಯದರ್ಶಿ ಸಂತೋಷ್‌ ಕೌಲಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.