ADVERTISEMENT

ಪುಸ್ತಕ ವಿಮರ್ಶೆ: ವಿಜ್ಞಾನದ ಜ್ಞಾನ ಪರಿಧಿ ವಿಸ್ತಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 19:30 IST
Last Updated 18 ಮಾರ್ಚ್ 2023, 19:30 IST
ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು
ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು   

ವಿಜ್ಞಾನದ ವಿಷಯವನ್ನು ಸರಳವಾಗಿ, ಕುತೂಹಲ ಹುಟ್ಟಿಸುವ ರೀತಿಯಲ್ಲಿ ಅಕ್ಷರಗಳಲ್ಲಿ ಕಟ್ಟಿಕೊಡುವ ಸಾಮರ್ಥ್ಯ ಸಿದ್ಧಿಸುವುದು ಅಪರೂಪ. ಇಂತಹ ಬರಹಗಳು ಎಳೆಯ ಮನಸ್ಸುಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯ ಕಿಡಿಯನ್ನು ಹೊತ್ತಿಸಬಲ್ಲವು. ವಿಜ್ಞಾನದ ಜ್ಞಾನ ಪರಿಧಿಯನ್ನು ವಿಸ್ತರಿಸಲು ಇವುಗಳಿಂದ ಸಾಧ್ಯವಾಗುತ್ತದೆ. ಪ್ರೊ. ಅಡ್ಯನಡ್ಕ ಕೃಷ್ಣಭಟ್‌ ಅವರಿಗೆ ಅಂತಹ ಶೈಲಿಯ ಬರವಣಿಗೆ ಸಿದ್ಧಿಸಿತ್ತು. ಆ ಶೈಲಿ ಹಲವು ಬರಹಗಾರಿಗೆ ಪ್ರೇರಣದಾಯಕವೂ ಆಗಿತ್ತು. ಇವರ ಆಯ್ದ ಬರಹಗಳ ಕೃತಿಯನ್ನು (ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು) ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ‘ವಿಜ್ಞಾನ್ ಪ್ರಸಾರ್‌’ ಹೊರತಂದಿದೆ. ಭಟ್ಟರ ಲೇಖನಗಳಿಗೆ ಬಾಲವಿಜ್ಞಾನ, ನವ ವಿಜ್ಞಾನದ ಉದಯ, ಗಗನಯುಗ ಮುಂತಾದ ಪತ್ರಿಕೆ, ಮ್ಯಾಗಝೀನ್‌ಗಳಲ್ಲಿ ಹುಡುಕಾಟ ನಡೆಸಿ, ಸಂಗ್ರಹಿಸಿ ಸಂಪಾದಿಸಿ ಕನ್ನಡದ ಓದುಗರಿಗೆ ನೀಡಿದ್ದಾರೆ ಲೇಖಕ ಟಿ.ಜಿ.ಶ್ರೀನಿಧಿ.

‘ಗಗನಯುಗ’, ‘ಆಕಾಶದಲ್ಲಿ ತೇಲಿ ಹೋದ ಅಜ್ಜನ ಗಡ್ಡ’, ‘ಫಿಸಿಕ್ಸ್‌ ಅಂದರೆ ಪ್ರಕೃತಿಯ ದರ್ಶನ’, ‘ವಿಶ್ವ, ಜೀವಿ, ಮಾನವ ಮನಸ್ಸುಗಳ ಆದಿ’, ‘ಮುಪ್ಪು’, ಎಲ್ಲಿ ಹೋಗುವಿರಿ...ನಿಲ್ಲಿ ಕೀಟಗಳೇ’ ಹೀಗೆ ಒಟ್ಟು 16 ಲೇಖನಗಳು (ಸಂಕಥನ, ಸಂವಹನ ಮತ್ತು ಸಂಪಾದನೆ) ಮೂರು ಭಾಗದಲ್ಲಿವೆ.

ಗೂಗಲ್‌ನಂತಹ ಮಾಹಿತಿಯ ವೇದಿಕೆ ಇಲ್ಲದ ಕಾಲದಲ್ಲಿ ಆ ಬಗ್ಗೆ ಲಭ್ಯವಿದ್ದ ಪುಸ್ತಕ, ಪತ್ರಿಕೆಗಳಿಂದ ಮಾಹಿತಿ ಸಂಗ್ರಹಿಸಿ ಕನ್ನಡದ ಓದುಗರಿಗೆ ಅಡ್ಯನಡ್ಕ ಕೃಷ್ಣಭಟ್ಟರು ಉಣಬಡಿಸುತ್ತಿದ್ದರು. ವಿಜ್ಞಾನ ಕುರಿತ ರಸವತ್ತಾದ ಮಾಹಿತಿಗಳ ಹೂರಣವೇ ಇಲ್ಲಿದೆ. ವಿಜ್ಞಾನದ ಬರೆಹಗಳ ಓದುಗರಿಗೆ ಮತ್ತು ವಿಜ್ಞಾನ ಸಂವಹನಕಾರಾಗಲು ಬಯಸುವವರಿಗೆ ಉತ್ತಮ ಕೃತಿ. ವಿಜ್ಞಾನದ ಲೇಖಕ ಕೊಳ್ಳೆಗಾಲ ಶರ್ಮ ಮತ್ತು ಶ್ರೀನಿಧಿ ಜಂಟಿ ಪ್ರಯತ್ನದಲ್ಲಿ ಈ ಕೃತಿ ಸಿದ್ಧವಾಗಿದೆ.

ADVERTISEMENT

ಕೃತಿ: ಅಡ್ಯನಡ್ಕ ಕೃಷ್ಣ ಭಟ್‌
ಆಯ್ದ ಬರಹಗಳು
ಸಂಪಾದಕ:ಟಿ.ಜಿ. ಶ್ರೀನಿಧಿ
ಪ್ರ: ವಿಜ್ಞಾನ್ ಪ್ರಸಾರ್
ಸಂ: 0120–2404430/31

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.