ನಾರಾಯಣ ಗುರುಗಳ ಆಪ್ತ ಡಾ. ಪದ್ಮನಾಭನ್ ಪಲ್ಪು
ಲೇ: ಲಕ್ಷ್ಮಣ ಕೊಡಸೆ
ಪ್ರ: ವಿಕ್ರಂ ಪ್ರಕಾಶನ
ಮೊ: 94484 84726
ಇಡೀ ಸಮಾಜ ಸದಾ ಕೃತಜ್ಞತೆಯಿಂದ ಸ್ಮರಿಸಬೇಕಾದಂತಹ ಎಷ್ಟೋ ಮಹನೀಯರು ನೇಪಥ್ಯದಲ್ಲೇ ಉಳಿದ ಉದಾಹರಣೆಗಳು ಚರಿತ್ರೆಯಲ್ಲಿ ಬೇಕಾದಷ್ಟು ಸಿಕ್ಕುತ್ತವೆ. ಪದ್ಮನಾಭನ್ ಪಲ್ಪು ಅವರೂ ಹಾಗೆ ಸಮಾಜದ ಮರೆವಿಗೆ ಸಂದ ಗಣ್ಯ ಸಾಧಕರಲ್ಲೊಬ್ಬರು. ಅವರ ಸಾಧಕ ಬದುಕಿನ ಪುಟಗಳ ಮೇಲಿನ ದೂಳನ್ನು ಕೊಡವಿ, ಅವರ ಹೊಳೆಯುವ ವ್ಯಕ್ತಿತ್ವವನ್ನು ಪರಿಚಯಿಸುವ ಕೃತಿಯೇ ಲಕ್ಷ್ಮಣ ಕೊಡಸೆ ಅವರ ‘ನಾರಾಯಣ ಗುರುಗಳ ಆಪ್ತ ಡಾ. ಪದ್ಮನಾಭನ್ ಪಲ್ಪು’. ಕೇರಳದಲ್ಲಿ ಜನಿಸಿದರೂ ಕರ್ನಾಟಕವನ್ನೇ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡ ಪಲ್ಪು ಅವರು ಒಬ್ಬ ದಕ್ಷ ಆರೋಗ್ಯಾಧಿಕಾರಿಯಾಗಿ ಬೆಂಗಳೂರಿಗೆ ನೀಡಿದ ಕೊಡುಗೆ ಅನನ್ಯವಾದುದು. ಬೆಂಗಳೂರು ನಗರದ ವಿನ್ಯಾಸದಲ್ಲೂ ಅವರು ಮಹತ್ತರ ಪಾತ್ರವನ್ನು ವಹಿಸಿದ್ದರು.
ಈಳವ ಸಮುದಾಯಕ್ಕೆ ಸೇರಿದ ಅವರು, ಹುಟ್ಟಿ ಬೆಳೆದ ಸಮಾಜದ ಏಳಿಗೆಗಾಗಿ ಬದುಕನ್ನೇ ಸಮರ್ಪಿಸಿಕೊಂಡಿದ್ದರು. ನಾರಾಯಣ ಗುರುಗಳ ಜತೆ ಸೇರಿಕೊಂಡು ಪಲ್ಪು ಅವರು ನಡೆಸಿದ ಸಾಮಾಜಿಕ ಹೋರಾಟ ದಲಿತ ಸಮುದಾಯಕ್ಕೆ ಹೊಸ ಶಕ್ತಿಯನ್ನು ತಂದು ಕೊಟ್ಟಿತ್ತು. ದಲಿತೋದ್ಧಾರಕ್ಕೆ ಮರೆಯಲಾಗದಂತಹ ಕಾಣಿಕೆ ನೀಡಿದ ಮರೆಯಬಾರದ ವ್ಯಕ್ತಿತ್ವವೊಂದರ ನೆನಪನ್ನು ಸದಾ ಹಸಿರಾಗಿ ಉಳಿಸುವ ಪ್ರಯತ್ನವಾಗಿ ಈ ಕೃತಿ ಕಾಣುತ್ತದೆ. ಬಿಟ್ಟುಹೋದ ಚರಿತ್ರೆಯ ಪುಟಗಳನ್ನು ಮರು ಜೋಡಿಸುವ ಯತ್ನವನ್ನಾಗಿಯೂ ನಾವು ಇಲ್ಲಿನ ಅಧ್ಯಾಯಗಳನ್ನು ನೋಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.