ADVERTISEMENT

ಕಾಡುತಾವ ನೆನಪುಗಳು: ಬೆಂಕಿಯಲ್ಲಿ ಅರಳಿದ ಬಹುಮುಖಿ ವ್ಯಕ್ತಿತ್ವ

ಸುಭಾಷ್ ರಾಜಮಾನೆ
Published 21 ಆಗಸ್ಟ್ 2021, 19:30 IST
Last Updated 21 ಆಗಸ್ಟ್ 2021, 19:30 IST
ಕಾಡುತಾವ ನೆನಪುಗಳು ಕೃತಿ
ಕಾಡುತಾವ ನೆನಪುಗಳು ಕೃತಿ   

ಈಚೆಗಷ್ಟೇ ನಿಧನರಾದ ಖ್ಯಾತ ವೈದ್ಯೆ ಹಾಗೂ ಲೇಖಕಿ ಡಾ.ಎಚ್. ಗಿರಿಜಮ್ಮನವರ ಆತ್ಮಕತೆ ‘ಕಾಡುತಾವ ನೆನಪುಗಳು’. ಬಹುಹಿಂದೆಯೇ ಪ್ರಕಟವಾದರೂ ಯಾಕೋ ಇದು ಓದುಗರ ಗಮನ ಸೆಳೆದಂತೆ ಕಾಣುವುದಿಲ್ಲ. ಹೀಗೆ ಎಷ್ಟೋ ಮಹಿಳಾ ಆತ್ಮಕಥನಗಳು ಅನಾದರಕ್ಕೆ ಒಳಗಾಗಿವೆ.

ಈ ಆತ್ಮಕತೆಯು ಗಿರಿಜಮ್ಮನವರ ಕತೆ ಕಾದಂಬರಿಗಳ ಕಥನದ ರೀತಿ ಅನಿರೀಕ್ಷಿತ ತಿರುವುಗಳಿಂದ ಬೆಚ್ಚಿ ಬೀಳಿಸುವಂತಿದೆ. ಇದು ತಮ್ಮ ‘ಮಾನಸ ಪುತ್ರಿ’ ಚಿನ್ನುಗೆ (ಚಿನ್ಮಯಿ, ಈಗ ವೈದ್ಯೆಯಾಗಿದ್ದಾರೆ) ಉದ್ದೇಶಿಸಿ ಬರೆದ ಆತ್ಮನಿವೇದನೆಯ ಧಾಟಿಯಲ್ಲಿದೆ. ತಮ್ಮ ನೆನಪುಗಳ ಮೂಲಕ ಗಿರಿಜಮ್ಮನವರು ತಮ್ಮ ಬದುಕನ್ನು ನಿಕಷಕ್ಕೆ ಒಡ್ಡಿಕೊಂಡಿದ್ದಾರೆ. ಅವರು ಪಟ್ಟ ಪಾಡೆಲ್ಲವೂ ಸವಿಗಾನವಾಗಿಲ್ಲ; ಬಹುತೇಕ ಶೋಕಗೀತವೇ ಆಗಿದೆ. ಬದುಕಿನ ಹಾದಿಯಲ್ಲಿ ಎದುರಾದ ಮುಳ್ಳುಗಳನ್ನು ಹಾಗೂ ಅವು ಚುಚ್ಚಿ ಗಾಯಗೊಳಿಸಿದ್ದನ್ನು ನಿರ್ಭಿಡೆಯಿಂದ ಹೇಳಿಕೊಂಡಿದ್ದಾರೆ. ಅವರು ಹಾದುಬಂದ ಹಾದಿಯಲ್ಲಿನ ಸಾಮಾಜಿಕ ವಿಕೃತಿಗಳನ್ನು ತೋರಿಸುತ್ತಲೇ ಅಂತಹವುಗಳನ್ನೆಲ್ಲ ಮೆಟ್ಟಿನಿಂತ ಬಗೆಯನ್ನು ಸಂಯಮದಿಂದ ನಿರೂಪಿಸಿದ್ದಾರೆ. ನಮ್ಮ ಸಮಾಜವು ಮಹಿಳೆಯರನ್ನು ಎಷ್ಟೊಂದು ಅಮಾನುಷವಾಗಿ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಈ ಕೃತಿಯು ಸಾಕ್ಷಿಗಲ್ಲಾಗಿದೆ.

ಗಿರಿಜಮ್ಮನವರು ತಮ್ಮ ಆತ್ಮಕತೆಯಲ್ಲಿ ಪ್ರಪಂಚದೊಳಗೆ ಮೂರು ಬಗೆಯ ನ್ಯಾಯಗಳಿರುವುದನ್ನು ಪ್ರಸ್ತಾಪಿಸುತ್ತಾರೆ. ಮೊದಲನೆಯದಾಗಿ, ಒಂದು ಬೆಕ್ಕು ತನ್ನ ಮರಿಗಳ ಸುರಕ್ಷತೆಗಾಗಿ ತನ್ನ ಬಾಯಿಂದಲೇ ಕಚ್ಚಿಕೊಂಡು ಸುರಕ್ಷಿತ ಜಾಗದಲ್ಲಿ ಇರಿಸುತ್ತದೆ. ಎರಡನೆಯದಾಗಿ, ಕೋತಿ ತನ್ನ ಮರಿಯನ್ನು ಬಿಗಿದಪ್ಪಿಕೋ ಎಂದು ಸೂಚಿಸುತ್ತದೆ; ಆದರೆ ಬಿದ್ದರೆ ತಾನು ಹೊಣೆಯಲ್ಲ ಎಂಬಂತೆ ಜಿಗಿಯುತ್ತದೆ. ಮೂರನೆಯದಾಗಿ, ನೀರು ಧುಮುಕಿ ಹರಿಯುವ ಜಾಗದಲ್ಲಿ ಕುರಿಮರಿಯು ನೀರು ಕುಡಿಯುತ್ತಿದ್ದಾಗ ತೋಳ ಕಾಲುಕೆರೆದು ಅದನ್ನು ಹರಿದು ತಿನ್ನಲು ಹೊಂಚು ಹಾಕಿರುತ್ತದೆ. ಈ ಹಿನ್ನೆಲೆಯಲ್ಲಿ ಅವರ ಬದುಕು ಮೂರನೆಯ ಪ್ರಕಾರದ ನ್ಯಾಯಕ್ಕೆ ಸೇರುತ್ತದೆ ಎಂದು ಹೇಳಿಕೊಂಡಿದ್ದಾರೆ. ತನ್ನಪಾಡಿಗೆ ತಾನಿದ್ದರೂ ಈ ಸಮಾಜ ಬಿಡಲಾರದು ಎಂದು ಗಿರಿಜಮ್ಮನವರು ನೋವು ಮತ್ತು ವಿಷಾದದಿಂದ ಬರೆಯುತ್ತಾರೆ. ಇಲ್ಲಿ ಸಮಾಜವೆಂದರೆ ಪುರುಷ ಪ್ರಾಧಾನ್ಯವನ್ನು ಪೋಷಿಸುತ್ತಿರುವ ಯಜಮಾನಿಕೆಯಾಗಿದೆ.

ADVERTISEMENT

ಗಿರಿಜಮ್ಮನವರು ತಮ್ಮ ವೃತ್ತಿಶಿಕ್ಷಣ ಹಾಗೂ ವೃತ್ತಿ ಜೀವನದಲ್ಲಿ ಅವಮಾನ, ನೋವು, ಅನ್ಯಾಯಗಳನ್ನು ಎದುರಿಸುವ ಸನ್ನಿವೇಶಗಳು ನಿರ್ಮಾಣವಾಗುತ್ತವೆ. ವೈದ್ಯಕೀಯ ಶಿಕ್ಷಣ ಪಡೆಯುವ ಹೊತ್ತಿನಲ್ಲಿಯೇ ತಾವು ಇಷ್ಟಪಟ್ಟ ಹಿರಿಯ ವೈದ್ಯರೊಬ್ಬರಿಂದ ತಿರಸ್ಕೃತರಾಗಿ ಪ್ರೇಮ ಭಂಗವಾಗುತ್ತದೆ. ಅದನ್ನು ಹೇಗೋ ಉನ್ನತ ವೈದ್ಯಕೀಯ ಶಿಕ್ಷಣ ಪಡೆಯುವಾಗ ಮರೆಯಲು ಪ್ರಯತ್ನಿಸಿದರೆ ಅಲ್ಲಿ ವೈದ್ಯರಿಂದ ಕಿರುಕುಳ ಶುರುವಾಗುತ್ತದೆ. ಓದಿನಲ್ಲಿ ಜಾಣೆಯಾಗಿದ್ದ ಮತ್ತು ಹಗಲಿರುಳು ಶ್ರಮಿಸುತ್ತಿದ್ದ ಗಿರಿಜಮ್ಮರ ಮನಸ್ಸು ಕುಗ್ಗಿ ಹೋಗುತ್ತದೆ. ಅಸೈನ್‍ಮೆಂಟ್‌ಗಳೆಲ್ಲವೂ ಸರಿಯಾಗಿದ್ದರೂ ಸಹಿ ಹಾಕದೇ ವೈದ್ಯರೊಬ್ಬರು ಲೈಂಗಿಕವಾಗಿ ಪೀಡಿಸುತ್ತಾರೆ. ಇವುಗಳಿಂದ ನೊಂದುಕೊಳ್ಳುವ ಗಿರಿಜಮ್ಮ ಅಸೈನ್‍ಮೆಂಟ್‍ ಅನ್ನು ಆ ವೈದ್ಯನ ಮೇಜಿನ ಮೇಲೆ ಬಿಸಾಕುವಷ್ಟು ಎದೆಗಾರಿಕೆ ತೋರಿಸುತ್ತಾರೆ.

ಗಿರಿಜಮ್ಮನವರು ಯಾವುದೇ ಬಗೆಯ ತಾರತಮ್ಯ ಹಾಗೂ ಅನ್ಯಾಯವನ್ನು ಸಹಿಸದ ನೇರಾನೇರ ಖಡಕ್ ಮಾತಿನವರಾಗಿದ್ದರು. ಆದರೆ ಎಷ್ಟೋ ಅಪಮಾನಗಳಿಂದ ವಿಚಲಿತರಾಗಿದ್ದೂ ಇದೆ. ಉನ್ನತ ವೈದ್ಯಕೀಯ ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆದ ನಿದರ್ಶನವೂ ಇದೆ. ಸರ್ಕಾರಿ ವೈದ್ಯಾಧಿಕಾರಿಯಾಗಿ ಹಳ್ಳಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಾಗಲೂ ಅವರಿಗೆ ಅಭದ್ರತೆಯೇ ಕಾಡುತ್ತದೆ. ಆದರೂ ರೋಗಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದವರು. ಎಷ್ಟೇ ದಕ್ಷತೆಯಿಂದ ಮತ್ತು ಪಾರದರ್ಶಕತೆಯಿಂದ ದುಡಿದರೂ ಅವರು ಹಿಂಸೆ ಅನುಭವಿಸುವುದು ತಪ್ಪುವುದಿಲ್ಲ. ಸಲ್ಲದ ಅಪಪ್ರಚಾರಗಳಿಂದ ಅವರ ಮಾನಸಿಕ ನೆಮ್ಮದಿಯನ್ನು ಕದಡಿಸಲಾಗುತ್ತದೆ. ಇಂತಹ ಅಡಚಣೆಗಳ ನಡುವೆಯೂ ಗಿರಿಜಮ್ಮನವರು ಧೃತಿಗೆಡದೆ ಏಕಾಂಗಿಯಾಗಿ ಸಂಘರ್ಷ ನಡೆಸುತ್ತಾರೆ. ಆದರೆ ಕೌಟುಂಬಿಕ ಹಿಂಸೆ ಮತ್ತು ಸಾರ್ವಜನಿಕ ಹಿಂಸೆಗಳಿಂದ ಅವರ ಬದುಕು ಮುಕ್ತವಾಗಿರಲಿಲ್ಲ.

ಎಷ್ಟೇ ನೋವು ಅನುಭವಿಸಿದರೂ ಗಿರಿಜಮ್ಮನವರು ತಮ್ಮ ಅಂತರಂಗದಲ್ಲಿ ಪ್ರೀತಿಯನ್ನು ತುಂಬಿಕೊಂಡಿದ್ದರು. ನಿಷ್ಕಪಟ ಮನಸ್ಸಿನಿಂದ ಯುವಕನೊಬ್ಬನನ್ನು ಪ್ರೀತಿಸುತ್ತಾರೆ. ಆದರೆ ಮದುವೆಯಾಗಲು ಆತ ನಿರಾಕರಿಸುತ್ತಾನೆ. ಆ ಯುವಕ ಮಾತ್ರ ತನ್ನದೇನೂ ತಪ್ಪಿಲ್ಲವೆಂಬಂತೆ ಬೇರೆ ಮದುವೆಯಾಗುತ್ತಾನೆ. ಪ್ರಶ್ನಿಸಿದರೆ ಗಿರಿಜಮ್ಮನವರಿಗೆ ಸಿಕ್ಕಿದ್ದು ಹಾದರದ ಹಣೆಪಟ್ಟಿ; ಊರ ತುಂಬ ವದಂತಿಗಳನ್ನು ಹಬ್ಬಿಸಿ ಅವರ ತೇಜೋವಧೆ ಮಾಡಲಾಗುತ್ತದೆ. ಇದರಿಂದ ನೊಂದುಕೊಳ್ಳುವ ಅವರ ಸಂಬಂಧಿಕರು ದೂರವಾಗುತ್ತಾರೆ. ಆದರೆ ಗಿರಿಜಮ್ಮನವರ ಸಂಪಾದನೆಯ ದುಡ್ಡು ಮಾತ್ರ ಅವರಿಗೆ ಬೇಕಿರುತ್ತದೆ; ಗಿರಿಜಮ್ಮನವರ ನೋವು, ಸಂಕಟಗಳಿಗೆ ಸ್ಪಂದಿಸದಷ್ಟು ಅನಾಮಿಕರಾಗುತ್ತಾರೆ. ಇದರ ಪರಿಣಾಮವೆಂದರೆ ಗಿರಿಜಮ್ಮ ಒಂಟಿಯಾಗಿ ಖಿನ್ನತೆಯಿಂದ ಆಮೆಯಂತೆ ಚಿಪ್ಪಿನೊಳಗೆ ಸೇರಿಕೊಳ್ಳುತ್ತಾರೆ.

ಗಿರಿಜಮ್ಮನವರದ್ದು ವರ್ಣರಂಜಿತ ಮತ್ತು ಕ್ರಿಯಾಶೀಲ ವ್ಯಕ್ತಿತ್ವವಾಗಿತ್ತು. ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಮೊದಲಾದ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆಧುನಿಕ ಸೌಕರ್ಯಗಳಿಲ್ಲದ ದಾವಣಗೆರೆಯ ಹಳ್ಳಿಗಾಡಿನ ಸರ್ಕಾರಿ ಶಾಲೆಯಲ್ಲಿ ಓದಿ, ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಪದವಿ ಪಡೆದವರು. ಕನ್ನಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದುಕೊಂಡಿದ್ದು ಅವರ ಅಭಿರುಚಿಯ ಹರವನ್ನು ತೋರಿಸುತ್ತದೆ.

ಗಿರಿಜಮ್ಮನವರು ಪರಿಶುದ್ಧ ಮನಸ್ಸಿನ, ಅಂತಃಕರಣ ತುಂಬಿದ, ಮಾನವೀಯ ಮೌಲ್ಯಗಳ ವೈದ್ಯರಾಗಿದ್ದರು. ಕನ್ನಡದ ಲೇಖಕಿಯಾಗಿ ಜನಪ್ರಿಯರಾಗಿದ್ದರು. ಆದರೆ ತಮ್ಮ ವೈಯಕ್ತಿಕ ಬಾಳಿನಲ್ಲಿ ಬಹಳಷ್ಟು ಹಿಂಸೆ, ನೋವು, ವೇದನೆ, ಕ್ರೌರ್ಯಗಳನ್ನು ಅನುಭವಿಸಿದ್ದು ಎಂತಹವರನ್ನು ಕೂಡ ಕಂಗಾಲಾಗುವಂತೆ ಮಾಡುತ್ತದೆ.

‘ಕಾಡತಾವ ನೆನಪುಗಳು’ ಆತ್ಮಕತೆಯು ಗಿರಿಜಮ್ಮನವರ ಸಾರ್ವಜನಿಕ ಸಾಧನೆ ಹಾಗೂ ಅವರ ಖಾಸಗಿ ಬದುಕಿನ ತೊಳಲಾಟದ ವೈರುಧ್ಯಗಳನ್ನು ದಾಖಲಿಸುತ್ತದೆ. ಮಹಿಳೆಯೊಬ್ಬಳು ತನ್ನ ನನಸಾಗದ ಕನಸುಗಳನ್ನು ದಿಟ್ಟತನದಿಂದ ಆತ್ಮಾವಲೋಕನ ಮಾಡಿಕೊಂಡಿರುವುದರಿಂದ ಈ ಕೃತಿಯು ಮುಖ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.