ADVERTISEMENT

ಪುಸ್ತಕ ವಿಮರ್ಶೆ: ‘ಅಜ್ಞಾತ’ದ ಮುಸುಕು ಸರಿಸುವ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 19:31 IST
Last Updated 23 ಜನವರಿ 2021, 19:31 IST
   

ಅಜ್ಞಾತ
ಲೇ: ವಿವೇಕಾನಂದ ಕಾಮತ್‌
ಪ್ರ: ವಂಶಿ ಪಬ್ಲಿಕೇಷನ್ಸ್‌

‘ಪ್ರಜಾವಾಣಿ’ ಬಳಗದ ‘ಸುಧಾ’ ಓದುಗರಿಗೆ ವಿವೇಕಾನಂದ ಕಾಮತ್‌ ಅವರ ‘ಅಜ್ಞಾತ’ ಕಾದಂಬರಿಯ ಸ್ಪಷ್ಟ ಪರಿಚಯ ಇದ್ದೇ ಇರುತ್ತದೆ. ಏಕೆಂದರೆ, ಈ ಕಾದಂಬರಿ ‘ಸುಧಾ’ದಲ್ಲಿ ಈಗಾಗಲೇ ಧಾರಾವಾಹಿಯಾಗಿ ಪ್ರಕಟವಾಗಿದೆ. ಮನುಷ್ಯನೊಬ್ಬ ಜೀವನದಲ್ಲಿ ಅತಿಯಾಗಿ ನೊಂದಾಗ ಮನಸ್ಸು ಆತ್ಮಶೋಧದತ್ತ ಎಳೆಯುವುದು ಸಾಮಾನ್ಯ. ವೈರಾಗ್ಯಭಾವ ಆವರಿಸಿ, ಅಧ್ಯಾತ್ಮದ ಕಡೆಗೆ ಒಲವೂ ಮೂಡುತ್ತದೆ. ಆ ಬಳಿಕ ನಾವು ಪಡೆಯುವುದಾದರೂ ಏನನ್ನು? ಕೊನೆಗೆ ಮನುಷ್ಯನ ಶಾಶ್ವತ ಆಯ್ಕೆಯಾದರೂ ಯಾವುದಿರಬೇಕು? ದೇಶ–ಕಾಲಾತೀತವಾಗಿ ಎಲ್ಲರನ್ನೂ ಕಾಡಿದ ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ‘ಅಜ್ಞಾತ’ದ ಕಾಯಕನಾಥನೂ ಬದುಕಿನ ಹುಡುಕಾಟ ನಡೆಸುತ್ತಾನೆ.

ಬಾಳಿನ ಸೆಳೆತದಲ್ಲಿ ಅಜ್ಞಾತವಾಗಿಯೇ ಉಳಿಯುವ ಹಲವು ಪ್ರಶ್ನೆಗಳನ್ನು ಕಾದಂಬರಿ ಎತ್ತುತ್ತದೆ. ಜತೆಗೆ ಕಾಯಕನಾಥನ ಸಂಯಮವೂ ಕಾಡುತ್ತದೆ. ಧಾರಾವಾಹಿ ರೂಪದಲ್ಲಿ ಕಾದಂಬರಿ ಪ್ರಕಟವಾಗಿದ್ದರಿಂದ ಓದುಗರನ್ನು ಸದಾ ಸೆಳೆಯುವಂತಹ, ಮುಂದಿನ ಭಾಗಕ್ಕಾಗಿ ಕುತೂಹಲದಿಂದ ಕಾಯುವಂತಹ ಅನಿರೀಕ್ಷಿತ ತಿರುವುಗಳನ್ನೂ ಇದು ಒಳಗೊಂಡಿದೆ. 40ಕ್ಕೂ ಹೆಚ್ಚು ಕಾದಂಬರಿಗಳನ್ನು ಕೊಟ್ಟಿರುವ ಕಾಮತ್‌ ಅವರು, ‘ಅಜ್ಞಾತ’ದಲ್ಲಿ ಬಳಸಿರುವ ಭಿನ್ನತಂತ್ರ, ನಿರೂಪಣಾಶೈಲಿ ಗಮನ ಸೆಳೆಯುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.