ADVERTISEMENT

ಪುಸ್ತಕ ವಿಮರ್ಶೆ | ಸುಸ್ಥಿರ ಕೃಷಿಯ ಮಾರ್ಗದರ್ಶಿ

ಗಾಣಧಾಳು ಶ್ರೀಕಂಠ
Published 28 ಆಗಸ್ಟ್ 2021, 19:30 IST
Last Updated 28 ಆಗಸ್ಟ್ 2021, 19:30 IST
ಪರ್ಮಾಕಲ್ಚರ್‌ ಕೃತಿ
ಪರ್ಮಾಕಲ್ಚರ್‌ ಕೃತಿ   

ಎರಡು ದಶಕಗಳ ಹಿಂದೆಯೇ ಸಾವಯವ ಕೃಷಿ ಕುರಿತ ಚರ್ಚೆಗಳಲ್ಲಿ ‘ಪರ್ಮಾಕಲ್ಚರ್’ ಎಂಬ ಶಬ್ದ ಹರಿದಾಡುತ್ತಿತ್ತು. ಅದಾದ ನಂತರ ‘ಪರ್ಮಾಕಲ್ಚರ್’ ಬಗ್ಗೆ ಕೈಪಿಡಿಗಳು, ಬಿಡಿ ಲೇಖನಗಳು ಪ್ರಕಟಗೊಳ್ಳುತ್ತಿದ್ದವು. ಆದರೆ ಈ ವಿಷಯದ ಕುರಿತು ಒಂದು ಸಮಗ್ರ ಚಿತ್ರಣ ಹಾಗೂ ಮಾಹಿತಿ ನೀಡುವ ಕೃತಿ ಅಗತ್ಯವಿತ್ತು. ಆ ಕೊರತೆ ಈಗ ನಿವಾರಣೆಯಾಗಿದ್ದು, ‘ಪರ್ಮಾಕಲ್ಚರ್‌– ಶಾಶ್ವತ ಕೃಷಿ ಕಲೆ ಮತ್ತು ವಿಜ್ಞಾನ’ ಎಂಬ ಪುಸ್ತಕ ಪ್ರಕಟಗೊಂಡಿದೆ.

‘ಪರ್ಮಾಕಲ್ಚರ್‌’ ಎಂಬ ಈ ವಿಶಿಷ್ಟ ಕೃಷಿ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು ಆಸ್ಟ್ರೇಲಿಯಾದ ಬಿಲ್‌ ಮಾಲಿಸನ್‌. ಇದನ್ನು ಭಾರತಕ್ಕೆ ಪರಿಚಯಿಸಿದವರಲ್ಲಿ ಪಶ್ಚಿಮ ಬಂಗಾಳದ ಅರ್ಧೇಂದು ಎಸ್. ಚಟರ್ಜಿ ಪ್ರಮುಖರು. ಚಟರ್ಜಿಯವರು, ದಶಕಗಳ ಹಿಂದೆ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಪದ್ಧತಿ ಕುರಿತು ರೈತರಿಗೆ ತರಬೇತಿ ನೀಡಿದ್ದಾರೆ. ಹಲವು ಪುಸ್ತಕಗಳನ್ನು ಬರೆದಿದ್ದಾರೆ. ತರಬೇತಿಗಳಲ್ಲಿನ ಮಾಹಿತಿ ಹಾಗೂ ಪುಸ್ತಕಗಳಿಂದ ಸಂಗ್ರಹಿಸಿದ ವಿವರಗಳನ್ನು ವಿ.ಗಾಯತ್ರಿಯವರು ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

‘ಪರ್ಮಾಕಲ್ಚರ್‌’ ತತ್ವಗಳು ಅರ್ಥವಾಗುವುದೇ ವಿವಿಧ ವಿನ್ಯಾಸಗಳ ಮೂಲಕ. ಇಡೀ ಪುಸ್ತಕ ಇಂಥ ಹತ್ತು ಹಲವು ವಿನ್ಯಾಸಗಳನ್ನು ತೆರೆದಿಡುತ್ತದೆ. ಕೃಷಿ ಮತ್ತು ನಮ್ಮ ಪರಿಸರ ಹೇಗೆ ಹೊಂದಿಕೊಂಡಿವೆ ಮತ್ತು ಅದರ ವಿನ್ಯಾಸ ಜೋಡಣೆ, ಹೊಲದ ವಿನ್ಯಾಸವನ್ನು ಯಾವ ರೀತಿ ಸಿದ್ಧಪಡಿಸಿಕೊಳ್ಳಬೇಕು, ಕೃಷಿ ಭೂಮಿಯಲ್ಲಿ ಗಿಡ-ಮರಗಳ ಹೊಂದಾಣಿಕೆ ಹೇಗೆ, ಕೈತೋಟದ ಪರಿಕಲ್ಪನೆ ಮತ್ತು ವಿನ್ಯಾಸ, ಕೃಷಿ ಹೊಂಡಗಳ ನಿರ್ಮಾಣ, ಕಾಂಪೋಸ್ಟ್ ತಯಾರಿಸುವ ವಿಧಾನ, ನರ್ಸರಿ ನಿರ್ವಹಣೆ, ಬೀಜ ಸಂರಕ್ಷಣೆ ಸ್ವಾಭಾವಿಕ ವಿಧಾನದಲ್ಲಿ ಕೀಟ ಮತ್ತು ರೋಗ ನಿರ್ವಹಣೆ ಮಾಹಿತಿ... ಹೀಗೆ ಈ ಪುಸ್ತಕ ‘ಸುಸ್ಥಿರ ಕೃಷಿ’ಯ ಸಮಗ್ರ ಚಿತ್ರಣವನ್ನು ಒದಗಿಸುತ್ತದೆ.ಮಾತ್ರವಲ್ಲ, ಸುಸ್ಥಿರ ಮತ್ತು ಸಾವಯವ ಕೃಷಿಯಲ್ಲಿ ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.