ವಚನ ಸಾಹಿತ್ಯದ ಬಗ್ಗೆ ಕೃತಿಗಳು ಹೊಸದೇನಲ್ಲ. ಆದರೆ, ವಚನಗಳು ಹಾಗೂ ಅವುಗಳ ಸಾರವನ್ನು ವರ್ಷಪೂರ್ತಿ ಕೇಳಿಸಿ, ಅದ್ಭುತ ಪ್ರತಿಸ್ಪಂದನದ ಬಳಿಕ ಅವೆಲ್ಲವುಗಳ ಸಾರಸಂಗ್ರಹಿಸಿದ ಕೃತಿಯಿದು.
ಅಂದಹಾಗೆ ಇವು ಲೇಖಕರು ಪ್ರಜಾವಾಣಿಯ ‘ಕನ್ನಡ ಧ್ವನಿ’ ಪಾಡ್ಕಾಸ್ಟ್ನಲ್ಲಿ ಒಂದು ವರ್ಷ ನಿರಂತರವಾಗಿ ನಡೆಸಿಕೊಟ್ಟ ‘ವಚನವಾಣಿ’ ಧ್ವನಿಮಾಲಿಕೆಯ ಅಕ್ಷರರೂಪ. ಸರಿಸುಮಾರು ಎಲ್ಲ ಶರಣರ ಆಯ್ದ ವಚನಗಳನ್ನು ಈ ಕೃತಿ ಒಳಗೊಂಡಿದೆ. ಇಷ್ಟು ಶರಣರ ವಚನಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿ, ಧ್ವನಿ ಮತ್ತು ಅಕ್ಷರ ರೂಪಕ್ಕಿಳಿಸುವುದು ಸವಾಲಿನ ಸಂಗತಿಯೇ ಸರಿ.
ಬಹುಪಾಲು ಜನರಿಗೆ ಅಷ್ಟೊಂದು ಪರಿಚಿತವಲ್ಲದ ಅಪರೂಪದ ಶರಣರ ವಚನಗಳು ಕೃತಿಯಲ್ಲಿವೆ. ಸುಂಕದ ಬಂಕಣ್ಣ, ಹೊಡೆಹುಲ್ಲ ಬಂಕಣ್ಣ, ಸೊಡ್ಡಳ ಬಾಚರಸ.... ಹೀಗೆ ಅತ್ಯಪರೂಪದ ವಚನಕಾರರು ಈ ಕೃತಿಯಲ್ಲಿ ಬೆಳಕು ಕಂಡಿದ್ದಾರೆ. ಅವರ ಕಾವ್ಯನಾಮವೂ ಅಷ್ಟೇ ಭಿನ್ನ.
ಎಲ್ಲ ವಚನಗಳಿಗೆ ಕೊಟ್ಟ ಐದು ಸಾಲುಗಳ ವಿವರಣೆಯು ಅಪ್ಪಟ ಮಾತಿನ ಶೈಲಿಯಲ್ಲಿ ಇದೆ. ತ್ವರಿತವಾಗಿ ಓದಿಸಿಕೊಂಡು ಹೋಗುತ್ತವೆ. ಸರಳವಾಗಿ ವಚನಗಳನ್ನು ಅರಿಯಲು ಬಯಸುವವರಿಗೆ ಬೇಕಾದ ಕೃತಿ.ಅಂದಹಾಗೆ ತಾಳೆಗರಿಯ ಕಟ್ಟುಗಳನ್ನೇ ಜೋಡಿಸಿಟ್ಟಂತೆ ಮಾಡಿರುವ ಕೃತಿಯ ಆಕಾರ, ವಿನ್ಯಾಸ ತುಂಬಾ ಆಕರ್ಷಕವಾಗಿವೆ. ವಚನಾಸಕ್ತರಿಗೆ ಸಂಗ್ರಹಯೋಗ್ಯ ಕೃತಿ.
ಕೃತಿ: ವಚನ ವರ್ಷಾರ್ಥ
ಲೇ: ಡಾ.ಬಸವರಾಜ ಸಾದರ
ಪ್ರ: ಬಸವಧರ್ಮ ಪ್ರಸಾರ ಸಂಸ್ಥೆ ಹಿರೇಮಠ ಸಂಸ್ಥಾನ ಭಾಲ್ಕಿ, ಬೀದರ್ ಜಿಲ್ಲೆ
ಪುಟಗಳು: 414
ಬೆಲೆ: 300
ಸಂಪರ್ಕ: 9448947571, 9241978575
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.