ADVERTISEMENT

ಪುಸ್ತಕ ವಿಮರ್ಶೆ: ಭಾಷೆಯೇ ಶಕ್ತಿಯಾದಾಗ...

ಅವಲೋಕನ

ಸುರೇಶ ನಾಗಲಮಡಿಕೆ
Published 9 ಜನವರಿ 2021, 19:30 IST
Last Updated 9 ಜನವರಿ 2021, 19:30 IST
ಭಾಷೆಯೇ ಶಕ್ತಿಯಾದಾಗ...
ಭಾಷೆಯೇ ಶಕ್ತಿಯಾದಾಗ...   

ಧಣೇರ ಬಾವಿ
ಲೇ: ಶರಣಬಸವ ಕೆ.ಗುಡದಿನ್ನಿ
ಪ್ರ: ಸುಗಮ ಪುಸ್ತಕ
ಮೊ: 99808 45630
ಪುಟಗಳು: 84, ಬೆಲೆ: 90

ರಾಯಚೂರು ಪ್ರದೇಶದ ಶರಣಬಸವ ಕೆ.ಗುಡದಿನ್ನಿಯವರು ‘ಧಣೇರ ಬಾವಿ’ ಎಂಬ ಮೊದಲ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಈ ಭಾಗದ ಹಿರಿಯ ಕಥನಕಾರರ ಪ್ರಭಾವ ದೊಡ್ಡದು. ಇದೇ ಭಾಗದ ಮೊದಲ ಸಂಕಲನಗಳನ್ನು ಪ್ರಕಟಿಸಿರುವ ಮುದಿರಾಜ್, ಅಮರೇಶ ಗಿಣಿವಾರ ಮತ್ತು ಶರಣಬಸವ ಇವರ ಕತೆಗಳನ್ನು ಓದಿದಾಗ ಕಲಾತ್ಮಕ ದೃಷ್ಟಿಯಿಂದ ಸಾಕಷ್ಟು ಬಗೆಯ ಬಿರುಕುಗಳು ಕಂಡುಬರುತ್ತವೆ. ಹಿರಿಯ ಕತೆಗಾರರ ಕಲಾತ್ಮಕತೆಯ ವಿವೇಕ, ತಾಳ್ಮೆ, ಕತೆಯ ಕುತೂಹಲಗಳನ್ನು ಹೊಸಬರು ದೊಡ್ಡಪ್ರಮಾಣದಲ್ಲಿ ಸ್ವೀಕರಿಸಿದಂತೆ ಕಾಣುವುದಿಲ್ಲ. ಇದಕ್ಕೆ ಬಹುದೊಡ್ಡ ಕಾರಣ ಅವಸರದ ನಿರೂಪಣೆ.

ಯಾವುದೇ ಕತೆಯನ್ನು ಮತ್ತು ಅದರ ಸೀಮಿತ ಬದುಕಿನ ಚೌಕಟ್ಟುಗಳನ್ನು ಗೆಲ್ಲಿಸುವುದು ಕಥನದ ಆದಿ, ನಡು ಮತ್ತು ಅಂತ್ಯವೆಂದು ನಂಬಲಾಗಿದೆ. ಶರಣಬಸವರನ್ನು ಒಳಗೊಂಡಂತೆ ಅವರ ಸಮಕಾಲೀನರ ಕತೆಗಳನ್ನು ಗಮನವಿಟ್ಟು ಓದಿದಾಗ ಆದಿ, ನಡುಗಳನ್ನು ನಿರ್ವಹಣೆ ಮಾಡುವಷ್ಟು ಅಂತ್ಯವನ್ನು ವಿವೇಕ ಮತ್ತು ಕುತೂಹಲ ತುಂಬಿದ ಬದುಕಿನಿಂದ ಕಟ್ಟುವುದಿಲ್ಲ. ಆದರೆ, ಇವರಿಗೆ ದಕ್ಕಿರುವ ಭಾಷೆ ಹೊಸತನದಿಂದ ಕೂಡಿದೆ. ಶರಣಬಸವ ಅವರು ಗೆಲ್ಲುವುದೇ ಭಾಷೆಯನ್ನು ಬಳಸುವ ಎಚ್ಚರದಿಂದ ಮತ್ತು ಅದನ್ನು ಕಾವ್ಯಾತ್ಮಕಗೊಳಿಸುವ ವಿಧಾನದಿಂದ.

ADVERTISEMENT

ಹಾಗೆ ನೋಡಿದರೆ ವಸ್ತುವಿನ ಆಯಾಮಗಳಲ್ಲಿ ವೈವಿಧ್ಯವನ್ನು ಹೊತ್ತುತಂದಿರುವ ಇಲ್ಲಿನ ಕತೆಗಳು ಕೊಂಚಮಟ್ಟಿಗೆ ಮುದವನ್ನು ನೀಡುತ್ತವೆ. ಈಚೆಗೆ ಹೊಸ ಕತೆಗಳ ಪ್ರಯೋಗಶೀಲತೆಯ ಕುರಿತು ಸಾಕಷ್ಟು ಮಾತನಾಡುತ್ತೇವೆ. ಪ್ರಯೋಗಶೀಲತೆ ಎಂದರೆ ಕೇವಲ ದಕ್ಕಿರುವ ಅನುಭವಗಳನ್ನು ನೇರವಾಗಿ ಭಾಷೆಯ ಮೂಲಕ ಭಿನ್ನವಾಗಿ ಅಭಿವ್ಯಕ್ತಿಸುವುದು ಎಂದು ಭಾವಿಸಿದರೆ ಅದು ಕೂಡ ಏಕದಾರಿಯದೇ ಆಗುತ್ತದೆ. ಬದಲಿಗೆ ಕಥನಕಟ್ಟುವ ಕ್ರಿಯೆಯ ಗರ್ಭದಲ್ಲಿ ಅನುಭವಗಳು ಗಟ್ಟಿಯಾದ ಭಾಷಿಕ ನುಡಿಗಟ್ಟುಗಳಲ್ಲಿ ನಿರೂಪಣೆಯಾಗಬೇಕು. ಅಲ್ಲಿ ‘ತನ್ನತನ’ ತಾನಾಗಿ ಬರಬಹುದು.

ಶರಣಬಸವ ಅವರ ‘ಉದುರಿದ ಹೂವೊಂದರ ಕತೆ’, ‘ಧಣೇರ ಬಾವಿ’, ‘ಖಂಡದ ಸಾರು’ ಎಂಬ ಕತೆಗಳಲ್ಲಿ ಅನೇಕ ಮಿತಿಗಳ ನಡುವೆಯೂ ದೊಡ್ಡ ಪ್ರಯತ್ನವಿದೆ. ಈ ಕತೆಗಳು ಬದುಕಿನ ಭಾವನಾತ್ಮಕತೆ, ಮುಗ್ಧತೆ ಮತ್ತು ವ್ಯಕ್ತಿಗಳ ಮಾಗುವಿಕೆಯ ಕೋನದಿಂದ ತಾಜ ಅನಿಸುತ್ತವೆ. ಇದನ್ನು ಬಿಟ್ಟರೆ ಉಳಿದ ಕತೆಗಳ ಒಳಗೆ ಪ್ರೀತಿ, ಧರ್ಮದ ಸೌಹಾರ್ದ ಮತ್ತು ಸಂಘರ್ಷಗಳು, ಗ್ರಾಮಬದುಕಿನ ಹೊಸಬಗೆಯ ತಲ್ಲಣಗಳು ಇಲ್ಲಿನ ಮುಖ್ಯ ಕಾಳಜಿಗಳು.

ಓದುವಾಗ ವಿಶಿಷ್ಟ ಅನುಭವ ಮತ್ತು ಕಾಡುವ ಕತೆ ಎನಿಸುವುದು ‘ಉದುರಿದ ಹೂವೊಂದರ ಕತೆ’. ವಯೋಮಾನಕ್ಕೆ ತಕ್ಕಂತೆ ಋತುಮತಿಯಾಗದ ಹುಡುಗಿಯೊಬ್ಬಳ ಕಥನ ಇದಾದರೂ, ಸ್ವ ಅನುಭವಗಳ ದಿಕ್ಕಿನಿಂದ ನೋಡಿದರೆ ಬದುಕಿನ ಸಣ್ಣ ವಿಚಾರವನ್ನು ಅಗ್ನಿಕುಂಡದಂತೆ ಎದುರಿಸುವ ರೀತಿ ಇಲ್ಲಿನ ಪಾತ್ರಗಳಿಗೆ ಬಂದುಬಿಟ್ಟಿದೆ. ಬದುಕನ್ನು ಸರಾಗವಾಗಿ ಎದುರಿಸುವ ಬಗೆಯನ್ನು ನೋವು ತಿಂದ ಹುಡುಗಿಯಿಂದಲೇ ದೊಡ್ಡವರು ಕಲಿಯುವುದು ಇಲ್ಲಿ ಕಂಡುಬರುತ್ತದೆ.

‘ಖಂಡದ ಸಾರು’ ಕತೆಯ ಮುಕ್ತಂಬಿಯದು ಕೂಡ ಇದೇ ಬಗೆಯ ಹಾದಿಯದೇ ಬದುಕು. ಮಾಂಸವನ್ನು ಮಾರಿ ಜೀವನ ರೂಪಿಸಿಕೊಂಡಿರುವ ಮುಕ್ತಂಬಿ ಗ್ರಾಮ ಬದುಕಿನ ಸಜೀವ ರೂಪಕ. ಇದೇ ವೃತ್ತಿಯಿಂದ ಬೆಳೆದ ಮಗ ಅಕ್ಬರ್ ಅಂತಿಮವಾಗಿ ತಾಯಿಯು ಮಾಂಸ ಮಾರುವುದನ್ನು ಕೀಳರಿಮೆಯೆಂದು ಭಾವಿಸುವುದು ಅಕ್ಷರವಂತರ ಅವಿವೇಕಕ್ಕೆ ನಿದರ್ಶನವಾಗಿಯು ಕತೆಯೂ ಕಾಡುತ್ತದೆ.

ಎಲ್ಲಕ್ಕಿಂತ ಸಮಕಾಲೀನ ಕೃಷಿಯ ಬದುಕನ್ನು ಮತ್ತು ಅದರ ಬಿರುಕುಗೊಂಡ ಮಾದರಿಗಳನ್ನು ಗಟ್ಟಿಯಾದ ಭಾಷಿಕ ನುಡಿಗಟ್ಟಿನಲ್ಲಿ ‘ಕಟ್ಟಿರುವ’ ಕತೆ ‘ಧಣೇರಬಾವಿ’. ಈ ಮೂರು ಕತೆಗಳ ದೃಷ್ಟಿಯಿಂದ ಶರಣಬಸವ ಅವರು ಕಥನಕ್ಕೆ ಗೌರವ ಕೊಟ್ಟಿದ್ದಾರೆ. ಸಮರ್ಥ ಕತೆಗಾರರಾಗುವ ಲಕ್ಷಣಗಳು ಇಲ್ಲಿವೆ. ಉಳಿದ ಅನೇಕ ಕತೆಗಳಲ್ಲಿ ಕತೆಗಾರನೇ ಹೆಚ್ಚು ‘ಮಾತನಾಡುತ್ತಾನೆ’. ಮಟ್ಕಾ ದಂಧೆಯ ವಸ್ತುವಿರುವ ‘ದೇವರೇ ನಿನ್ನೆಸರ ಬದಲಿಸಿಕೋ’ ಕತೆ ಭಾವನಾತ್ಮಕತೆಯಿಂದ ತಟ್ಟಿದರೂ ಕೇವಲ ವ್ಯಕ್ತಿಗಳನ್ನು ಪರಿಚಯ ಮಾಡಿಕೊಡುವಲ್ಲಿ ಲೀನವಾಗುತ್ತದೆ. ಇದರಿಂದಾಗುವ ದೊಡ್ಡ ಅಪಾಯವೆಂದರೆ ವರದಿಗಾರನಿಗೂ ಕತೆಗಾರನಿಗೂ ವ್ಯತ್ಯಾಸವೇ ಇಲ್ಲದಿರುವುದು.

ಇಲ್ಲಿನ ಬಹುತೇಕ ಕತೆಗಳು ಆದಿಯನ್ನು ದೊಡ್ಡಮಟ್ಟದಲ್ಲಿ ಆರಂಭಿಸಿದರೂ ನಡು ಮತ್ತು ಅಂತ್ಯವನ್ನು ತೀರ ಸುಲಭದ ದಾರಿಯಲ್ಲಿ ಕೊನೆಗಾಣಿಸುತ್ತವೆ. ಅದರಿಂದಲೇ ಅಭಿವ್ಯಕ್ತಿಸುತ್ತಿರುವ ವಸ್ತುವಿನ ಕ್ರಮ, ವಿನ್ಯಾಸಗಳು ಸಡಿಲವಾಗುತ್ತವೆ. ಘಟನೆಗಳು ಕೇವಲ ವಾಚ್ಯವಾಗುತ್ತವೆ. ಅನೇಕ ನಿರೂಪಣೆಗಳು ‘ಹೇಳುವ’ ಧಾಟಿಯಲ್ಲಿವೆ ಹೊರತು ‘ಕಟ್ಟುವ’ ಹಾದಿಯನ್ನು ಪಡೆದುಕೊಂಡಿಲ್ಲ. ಹೀಗೆ ಹೇಳುವಾಗ ಆರಂಭದಲ್ಲಿ ಹೆಸರಿಸಿದ ಇವರ ಜತೆಗಾರರಿಗೂ ಅದು ಅನ್ವಯವಾಗುತ್ತದೆ. ಇವರಿಗೆ ದಕ್ಕಿರುವ ಭಾಷೆಯ ಸಮರ್ಥತೆ ಹಾಗೂ ಕಥನಧಾಟಿಗೆ ಒಗ್ಗುವ ಕಾವ್ಯಭಾಷೆ ಇವರನ್ನು ಭಿನ್ನವಾಗಿ ನೋಡುವಂತೆ ಮಾಡಿದೆಯಷ್ಟೆ. ಇದು ಈ ಭಾಗದ ಯುವ ಕಥನಕಾರರ ವೈಶಿಷ್ಟ್ಯ ಕೂಡ.

ವಸ್ತು, ಅನುಭವಗಳ ದೃಷ್ಟಿಯಿಂದ ಇಲ್ಲಿ ಸಾಕಷ್ಟು ಏಕತಾನತೆ ಇದೆ. ಈ ಖೆಡ್ಡಾದಿಂದ ಬಹುಬೇಗ ಹೊರಬರದಿದ್ದರೆ ಅಪಾಯ. ಈ ಕಾಲಮಾನದಲ್ಲಿ ಸಲೀಸಾಗಿ ದಕ್ಕುತ್ತಿರುವ ತಕ್ಷಣದ ಜನಪ್ರಿಯತೆ, ಮುನ್ನುಡಿ –ಬೆನ್ನುಡಿಗಳ ಪ್ರತಿಕ್ರಿಯೆಗಳನ್ನು ಹೊಸಬರು ತಮ್ಮ ಜವಾಬ್ದಾರಿ ಎಂದು ಸ್ವೀಕರಿಸದೆ ಅದನ್ನು ಆತ್ಮರತಿಯ ಚೌಕಟ್ಟಿಗೆ ಬಾಗಿಸಿಕೊಂಡರೆ ಕನ್ನಡಕ್ಕೆ ಗಟ್ಟಿಯಾದ ಬರಹಗಳನ್ನು ನೀಡುವುದು ಕಷ್ಟ. ಶರಣಬಸವ ಅವರಿಗೆ ಈ ಎಚ್ಚರವಿದೆ. ದಕ್ಕಿರುವ ಕಥನಲೋಕವನ್ನು ಅವರು ವಿವೇಕದಿಂದ ನಿರ್ಮಿಸಬಲ್ಲರೆಂಬ ಭರವಸೆಗಳು ದಟ್ಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.