ವೃತ್ತಿಯಲ್ಲಿ ಎಂಜಿನಿಯರ್, ಆದರೆ ಪ್ರವೃತ್ತಿಯಿಂದ ಯಕ್ಷ ಅಧ್ಯಯನಕಾರರಾದಲೇಖಕ ರವಿ ಮಡೋಡಿ ಅವರ ಅಕ್ಷರ ಸಾಹಸ ‘ಮಲೆನಾಡಿನ ಯಕ್ಷಚೇತನಗಳು’. ಕರಾವಳಿ ಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನ, ಮಲೆನಾಡಿನಲ್ಲೂ ಅಷ್ಟೇ ಪ್ರಸಿದ್ಧಿಯಲ್ಲಿತ್ತು ಎನ್ನುವುದಕ್ಕೆ ಈ ಕೃತಿಯನ್ನು ಸಾಕ್ಷ್ಯವಾಗಿ ಮುಂದಿಡಬಹುದು.
ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕಲಾವಿದರನ್ನು ರವಿ ಅವರು ಇಲ್ಲಿ ಪರಿಚಯಿಸಿದ್ದಾರೆ. ‘ಮಲೆನಾಡಿನಲ್ಲಿ ಹಿಂದೆ ಸೀಮೆಗೊಂದೊಂದು ಮೇಳವಿದ್ದ ದಾಖಲೆ ಇದೆ. ಈಗ ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಕಳೆದು ಹೋದುದು ಸಿಗದಾದರೂ ಅಲ್ಲಿಯ ನೆನಪು ಉಳಿಯಬೇಕು’ ಎಂದು ಮುನ್ನುಡಿಯಲ್ಲಿ ಶ್ರೀಧರ ಡಿ.ಎಸ್. ತಾಳಿಪಾಡಿ ಅವರು ಉಲ್ಲೇಖಿಸಿದ್ದಾರೆ. ಕೃತಿಯಲ್ಲಿ ಇಪ್ಪತ್ತಾರು ಕಲಾವಿದರ ಜೀವನ ಹಾಗೂ ಕಲಾಬದುಕಿನ ಹೆಜ್ಜೆಗಳಿವೆ. ಇವುಗಳ ಜೊತೆಗೆ ಆ ಕಲಾವಿದರಿದ್ದ ಮೇಳದ ಹಿನ್ನೆಲೆ ಹಾಗೂ ಅವುಗಳ ಸ್ಥಿತಿಗತಿ, ಪ್ರಸಂಗದ ವೇಳೆ ನಡೆದ ಸ್ವಾರಸ್ಯಕರ ಘಟನೆಗಳ ಮಾಹಿತಿಯೂ ಇಲ್ಲಿ ಅಡಕವಾಗಿದೆ. ತಾಳಮದ್ದಲೆ, ಯಕ್ಷಗಾನ ಪ್ರಸಂಗದಲ್ಲಿ ಆಗಿರುವ ನಕಾರಾತ್ಮಕ ಬದಲಾವಣೆಗಳ ಸೂಕ್ಷ್ಮ ಉಲ್ಲೇಖವೂ ಇಲ್ಲಿದೆ.
‘ಕೇವಲ ಇಪ್ಪತ್ತಾರು ಕಲಾವಿದರಿಗೆ ಮಲೆನಾಡಿನ ಯಕ್ಷಚೇತನಗಳು ಮುಗಿಯುವುದಿಲ್ಲ’ ಎನ್ನುವ ಮೂಲಕ ಈ ಕೃತಿಯ ಸರಣಿಯ ಮುನ್ಸೂಚನೆಯನ್ನೂ ಲೇಖಕರು ನೀಡಿದ್ದಾರೆ.
ಕೃತಿ: ಮಲೆನಾಡಿನ ಯಕ್ಷಚೇತನಗಳು
ಲೇ: ರವಿ ಮಡೋಡಿ
ಪ್ರ: ಮಡಿಲು ಪ್ರಕಾಶನ
ಸಂ: 9844212231
ಪುಟ: 212
ದರ: 200
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.