ADVERTISEMENT

ಇದೇ 5ರಿಂದ ವಕೀಲರ ಉಪವಾಸ ಸತ್ಯಾಗ್ರಹ

ನ್ಯಾಯಮೂರ್ತಿ ಹುದ್ದೆಗಳ ಭರ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 19:36 IST
Last Updated 2 ಫೆಬ್ರುವರಿ 2018, 19:36 IST

ಬೆಂಗಳೂರು: ಹೈಕೋರ್ಟ್‌ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ವಕೀಲರು ಇದೇ 5ರಿಂದ ಒಂದು ವಾರ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.

‘ಈ ಕುರಿತಂತೆ ಬೆಂಗಳೂರು ವಕೀಲರ ಸಂಘ ಹಾಗೂ ರಾಜ್ಯ ವಕೀಲರ ಪರಿಷತ್‌ನ ಹಿರಿಯ ವಕೀಲರು ಶುಕ್ರವಾರ ಸಭೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರುವ ದಿಸೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರ ನಮ್ಮ ಉಪವಾಸ ಸತ್ಯಾಗ್ರಹಕ್ಕೆ ಮಣಿಯದೇ ಹೋದರೆ ನಂತರ ರಾಜ್ಯದಾದ್ಯಂತ ವಕೀಲರು ಒಂದು ದಿನದ ಮಟ್ಟಿಗೆ ನ್ಯಾಯಾಲಯಗಳ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಲಿದ್ದಾರೆ’ ಎಂದರು.

ADVERTISEMENT

‘ರಾಜ್ಯ ಹೈಕೋರ್ಟ್‌ಗೆ ಮಂಜೂರಾಗಿರುವ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 65. ಆದರೆ, ಇವುಗಳಲ್ಲಿ 38 ಹುದ್ದೆ ಖಾಲಿ ಇವೆ. ತಕ್ಷಣವೇ ಇವುಗಳನ್ನು ಭರ್ತಿ ಮಾಡದೇ ಹೋದರೆ ಸಂಸತ್ ಭವನದ ಮುಂದೆ ವಕೀಲರ ನಿಯೋಗವು ಸಾಂಕೇತಿವಾಗಿ ಪ್ರತಿಭಟನೆ ನಡೆಸಲೂ ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ರಂಗನಾಥ್ ತಿಳಿಸಿದ್ದಾರೆ.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ, ಅಡ್ವೊಕೇಟ್‌ ಜನರಲ್‌ ಎಂ.ಆರ್.ನಾಯಕ್, ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎ.ಎಸ್.ಪೊನ್ನಣ್ಣ, ಹಿರಿಯ ವಕೀಲರಾದ ಬಿ.ವಿ.ಆಚಾರ್ಯ, ಕೆ.ಕಸ್ತೂರಿ, ಪ್ರೊ.ರವಿವರ್ಮ ಕುಮಾರ್, ಉದಯ್‌ ಹೊಳ್ಳ, ಶಿವಪ್ಪ, ವೈ.ಆರ್.ಸದಾಶಿವ ರೆಡ್ಡಿ, ಡಿ.ಎನ್.ನಂಜುಂಡ ರೆಡ್ಡಿ, ಎಸ್‌.ಎನ್‌.ಮೂರ್ತಿ, ಡಿ.ಎಲ್‌.ಎನ್‌.ರಾವ್, ದೇವದಾಸ್, ಎಂ.ಟಿ.ನಾಣಯ್ಯ, ಎಚ್‌.ಸಿ.ಶಿವರಾಮು, ಕೆ.ಎನ್‌.ಪುಟ್ಟೇಗೌಡ ಸೇರಿದಂತೆ 20ಕ್ಕೂ ಹೆಚ್ಚು ಹಿರಿಯ ವಕೀಲರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.