ನೆನಪಿನ ಹಾದಿಯಲ್ಲಿ
ಲೇ: ಟಿ.ತಿಮ್ಮೇಗೌಡ
ಪ್ರ: ಜೀವನ್ಮುಖಿ ಪ್ರಕಾಶನ
ಮೊ: 80505 51305
ಅಧ್ಯಾಪಕನಾಗಿ, ಅಸಿಸ್ಟೆಂಟ್ ಕಮಿಷನರ್ ಆಗಿ, ಜಿಲ್ಲಾಧಿಕಾರಿಯಾಗಿ, ಸರ್ಕಾರದ ಕಾರ್ಯದರ್ಶಿಯಾಗಿ ವ್ಯಾಪಕವಾದ ಆಡಳಿತದ ಅನುಭವ ಹೊಂದಿದ ನಿವೃತ್ತ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡರ ಆತ್ಮಕಥೆ ‘ನೆನಪಿನ ಹಾದಿಯಲ್ಲಿ’. ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿ, ಸರ್ಕಾರದ ಉನ್ನತ ಹುದ್ದೆಗೆ ಏರುವವರೆಗಿನ ಯಾತ್ರೆಯನ್ನು ತಿಮ್ಮೇಗೌಡರು ದಾಖಲಿಸಿದ್ದಾರೆ.
ತಾವು ಕರ್ತವ್ಯ ನಿರ್ವಹಿಸಿದ ಎಲ್ಲ ಇಲಾಖೆಗಳಲ್ಲಿನ ಅನುಭವಗಳ ಬುತ್ತಿಯನ್ನು ಲೇಖಕರು ಇಲ್ಲಿ ಬಿಚ್ಚಿಟ್ಟಿದ್ದಾರೆ. ಆ ಬುತ್ತಿಯಲ್ಲಿ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಜತೆಗಿನ ಆಪ್ತ ಒಡನಾಟದ ನೆನಪುಗಳಿವೆ. ಹಾಗೆಯೇ ಆಡಳಿತದ ನೆನಪುಗಳೂ ಇವೆ. ಜಿಲ್ಲಾಧಿಕಾರಿಯಾಗಿ ಜನರೊಂದಿಗೆ ಹತ್ತಿರದಿಂದ ಬೆರೆತ ಅನುಭವಗಳನ್ನು ದಾಖಲಿಸಿದ್ದಾರೆ. ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿದ ತೃಪ್ತಭಾವದ ಬಗೆಗೂ ಹೇಳಿಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುವಾಗ ಒತ್ತುವರಿ ವಿರುದ್ಧ ಕ್ರಮಕೈಗೊಂಡ ವಿಷಯವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಹಲವು ಮುಖ್ಯಮಂತ್ರಿಗಳು ಹಾಗೂ ಸಚಿವರ ಜತೆ ಕೆಲಸ ಮಾಡಿರುವ ಅವರು, ತೋಟಗಾರಿಕೆ ಇಲಾಖೆಯಲ್ಲಿ ಮಾಡಿದ ಪ್ರಯೋಗಗಳ ಕುರಿತು ಚರ್ಚಿಸಿದ್ದಾರೆ. ಆಡಳಿತದ ಕುರಿತು ತಾವು ಹೊಂದಿರುವ ಪರಿಕಲ್ಪನೆಗಳನ್ನೂ ಇಲ್ಲಿ ವಿಷದವಾಗಿ ಹೇಳಿಕೊಂಡಿದ್ದಾರೆ. ಜನಪದ ಪರಿಷತ್ತು, ಹಣಕಾಸು ಆಯೋಗದ ಜತೆಗಿನ ಅವರ ಅನುಭವಗಳು ಶ್ರೀಮಂತವಾಗಿವೆ. ಬೆಂಗಳೂರಿನ ಕುರಿತು, ಕೊರೊನಾ ಕುರಿತೂ ಅವರು ಚರ್ಚಿಸದೇ ಬಿಟ್ಟಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.