ADVERTISEMENT

‘ಪ್ರಭಂಜನ ಚರಿತಂ’ ನೃತ್ಯರೂಪಕ

Prabhanjana charitam- Dance

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 15:10 IST
Last Updated 15 ಮಾರ್ಚ್ 2019, 15:10 IST
ಸೀತಾ ಗುರುಪ್ರಸಾದ್
ಸೀತಾ ಗುರುಪ್ರಸಾದ್   

ನಗರದಲ್ಲಿ ಇಪ್ಪತ್ತೈದು ವರ್ಷಗಳಿಂದ ಸಕ್ರಿಯವಾಗಿರುವ ಭರತಾಂಜಲಿ ನಾಟ್ಯ ಶಾಲೆ, ಮಾರ್ಚ್ 17ರಂದು ಬೆಳಿಗ್ಗೆ 10.15ಕ್ಕೆ ಮಲ್ಲೇಶ್ವರದ ಸೇವಾಸದನದಲ್ಲಿ ‘ಪ್ರಭಂಜನ ಚರಿತಂ’ ನೃತ್ಯರೂಪಕ ಆಯೋಜಿಸಿದೆ.

ಭರತಾಂಜಲಿ ನಾಟ್ಯ ಶಾಲೆಯನ್ನು ನಡೆಸುತ್ತಿರುವ ಕಲಾವಿದೆ ಸೀತಾ ಗುರುಪ್ರಸಾದ್ ಅವರ ನಿರ್ದೇಶನದಲ್ಲಿ, ಭುವನಾ ಜಿ. ಪ್ರಸಾದ್ ‘ಪ್ರಭಂಜನಂ ಚರಿತಂ’ ನೃತ್ಯರೂಪಕವನ್ನು ಪ್ರಸ್ತುತಪಡಿಸುವರು. ವಾಯುವಿನ ಮೂರು ಅವತಾರಗಳನ್ನು ಈ ನೃತ್ಯರೂಪಕದಲ್ಲಿ ತೋರಿಸಲಾಗುವುದು.

25 ವರ್ಷಗಳಿಂದ ನೃತ್ಯಕ್ಷೇತ್ರದಲ್ಲಿರುವ ಕಲಾವಿದೆ ಸೀತಾ ಗುರುಪ್ರಸಾದ್, ‘ಪಂಚಭೂತ’, ‘ಹರಿದಾಸ ಆಂಜನೇಯ’, ‘ಮಹೇಶ್ವರ ಪಂಚಕೃತ್ಯಾನನಂ’, ಜಾನಪದ ಜಾತ್ರೆ, ‘ಕೃಷ್ಣಾವತಾರಂ’ ಮೊದಲಾದ ಹತ್ತಾರು ನೃತ್ಯರೂಪಕಗಳನ್ನು ನಿರ್ದೇಶಿಸಿದ್ದಾರೆ. ಮಾರ್ಗ ಶೈಲಿಯಲ್ಲಿರುವ ನೃತ್ಯರೂಪಕಗಳಿಗಿಂತ ಭಿನ್ನ ಶೈಲಿಯ ನೃತ್ಯರೂಪಕಗಳನ್ನು ಮಾಡುವ ಹಂಬಲ ಸೀತಾ ಅವರದ್ದು.

ADVERTISEMENT

ಪ್ರಭಂಜನ ಅಂದರೆ ಹನುಮ. ‘ಪ್ರಭಂಜನ ಚರಿತಂ’ನಲ್ಲಿ ಹನುಮಂತನ ಮೂರು ಅವತಾರಗಳಾದ ಹನುಮ, ಭೀಮ, ಮಧ್ವಾಚಾರ್ಯರ ಕುರಿತು ತೋರಿಸಲಾಗುವುದು. ರಾಮಾಯಣದಲ್ಲಿ ಹನುಮಂತನಾಗಿ, ಮಹಾಭಾರತದಲ್ಲಿ ಭೀಮನಾಗಿ, ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಹನುಮಂತನೇ ಅವತರಿಸಿದ್ದು. ಹನುಮಂತ, ಭೀಮನ ಪಾತ್ರಗಳು ಒಂದು ರೀತಿಯದ್ದಾಗಿದ್ದರೆ, ಮಧ್ವಾಚಾರ್ಯರದ್ದು ಭಿನ್ನ ಪಾತ್ರ. ಮಧ್ವಾಚಾರ್ಯರ ಮಹತ್ವವಾದ ಚರಿತ್ರೆ, ವೀರತ್ವ, ಜ್ಞಾನ, ಅವರ ಸಿದ್ಧಾಂತಗಳನ್ನು ನೃತ್ಯರೂಪಕದಲ್ಲಿ ಪ್ರಸ್ತುತಪಡಿಸಲಾಗುವುದು. ಇದು ಏಕವ್ಯಕ್ತಿ ಪ್ರದರ್ಶನವಾಗಿದ್ದು, ಭುವನಾ ಜಿ. ಪ್ರಸಾದ್ ಸುಮಾರು 30ಕ್ಕೂ ಹೆಚ್ಚು ಪಾತ್ರಗಳನ್ನು ಮಾಡಲಿದ್ದಾರೆ. ಹನುಮ, ಭೀಮ, ಮಧ್ವರನ್ನು ನೆನೆದರೆ ಎಲ್ಲಾ ಕಷ್ಟಗಳು ನೀಗುತ್ತವೆ ಅನ್ನುವ ಪುರಂದರ ದಾಸ ವಾಣಿಯ ಮೂಲಕ ನೃತ್ಯರೂಪಕ ಮುಕ್ತಾಯವಾಗಲಿದೆ.

ಪ್ರಭಂಜನ ಚರಿತಂ’ ನೃತ್ಯರೂಪಕ: ಪ್ರಸ್ತುತಿ– ಭುವನಾ ಜಿ. ಪ್ರಸಾದ್. ಪರಿಕಲ್ಪನೆ, ನಿರ್ದೇಶನ– ಸೀತಾ ಗುರುಪ್ರಸಾದ್. ಆಯೋಜನೆ–ಭರತಾಂಜಲಿ ನೃತ್ಯಶಾಲೆ. ಸ್ಥಳ– ಸೇವಾಸದನ, ಮಲ್ಲೇಶ್ವರಂ. ಮಾರ್ಚ್ 17 ಬೆಳಿಗ್ಗೆ 10.15

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.