ADVERTISEMENT

ಅವ್ವ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 19:30 IST
Last Updated 5 ಅಕ್ಟೋಬರ್ 2019, 19:30 IST
ಕಲೆ: ಶಶಿಧರ ಹಳೇಮನಿ
ಕಲೆ: ಶಶಿಧರ ಹಳೇಮನಿ   

ಕಸವೆದ್ದು ಕುಣಿಯುವಾಗ
ಕರೆದು ಮಣಿಸಿ ಬಾಗಿನಿಂದು
ತಣಿಸಿ ಗುಡಿಸಿ ಹಾಕಿದವಳು
ಕೆಮ್ಮುತ್ತಲೇ ಕಾಡಿಬಿಡುವ
ಮಣ್ಣಹುಡಿಯ ಗಂಧವನೇ
ಉಸಿರಾಗಿಸಿಕೊಂಡವಳು

ನಿದ್ದೆಯಿಂದ ಕಣ್ಣುಜ್ಜಿ ಎದ್ದ
ಮಣ್ಣ ಕಣ ಕಣಗಳಿಂದ
ಮೊದಲ ದರ್ಶನಕಾಗಿ
ಹುಡುಕಾಡಿಸಿಕೊಂಡವಳು
ಉದುರಿ ಬಿದ್ದ ಎಲೆಗಳಂತೆ
ಬಸಿರು ಬಸಿದು ಎದೆಯುಸಿರು
ಹೊಸೆದು ಮುಪ್ಪಾಗಿ ಹೆಪ್ಪಾದವಳು

ಮನೆಯಂಗಳದ ತೆಂಗುಮರ
ಕ್ಷಯದ ಕಾಯಿಲೆಯಲಿ ನರಳಿ
ಕೃಶವಾಗಿ ಜೀವ ಬಿಟ್ಟಾಗ
ಮುಂದೆ ಕುಳಿತು ಅತ್ತವಳು

ADVERTISEMENT

ಅರಳಿದಾಗ ದಾಸವಾಳ
ನಗು ಚೆಲ್ಲಿದಾಗ ಮೊಲ್ಲೆ ಹೂ
ದೇವನಡಿಗೆ ತಂದು ಇಟ್ಟು
ಅರ್ಪಿಸಿಕೊಂಡವಳು

ಸುಗಂಧ ಬೀರುವ ಹಣ್ಣು
ಕಾಯಿ ಚಲ್ಲವರಿಯುವಾಗ
ನಗು ಬೀರಿ ಕನಸು ಕಟ್ಟಿ
ಕಾಣದಂತೆ ದೃಷ್ಟಿ ತೆಗೆದವಳು

ಮಾಳಿಗೆಯ ಮಣ್ಣು ಸೋರಿ
ಮನೆಯೊಳಗೆ ಕೆಸರಾದಾಗ
ಮತ್ತೆ ಬಂದೆಯಾ ಎಂದು
ಬಳಿದು ಹೊರಗೆ ಅಟ್ಟಿದವಳು

ಹೊಂಚು ಹಾಕಿ ಮನೆಯೊಳಗೆ
ಇಣುಕಿ ಬಂದು ದಾಳಿಯಿಡುವ
ಮಳೆ ಹನಿಗಳ ಚೆಲ್ಲಾಟಕೆ
ಬೇಸತ್ತು ನಿದ್ದೆ ಕಳೆದುಕೊಂಡವಳು

ತೊಟ್ಟಿಕ್ಕುವ ಮಾಳಿಗೆಯನೇರಿ
ನಂಟು ಬಿಡದ ಮಣ್ಣು ಹಳಿದು
ಬೇವಿನೆಲೆ ಕೊಂಬೆ ಹರಿದು
ಮನೆಯ ಗುದ್ದಿಗೆ ಬಂಧಿಯಾದವಳು

ಚಂದ್ರ ಚಂದ್ರ ನೆಂದು ಕೂಗಿ
ಮುಗಿಲ ಕಡೆಗೆ ಮುಖ ಮಾಡಿ
ಹಡೆದ ಮಗನ ಮೊಗದಿ
ಚಂದಿರನ ಕಂಡವಳು

ಪಾತ್ರೆಗಳ ತಿಕ್ಕಿ ತೊಳೆದು
ಹೊಳಪಿನಲ್ಲಿ ಮುಖವ ಕಂಡು
ಬೆಳಗಿ ನಲಿಯುತ ಹೊಳೆದು
ಕತ್ತಲೆಗಿಂತ ಕಪ್ಪಾದವಳು

ಮನೆಯ ಸ್ನಾನ ಮಾಡಿಸಿ
ಜೀವಗಳ ಮಲಿನ ತೊಳೆದು
ತನ್ನ ತಾನೇ ಬೆಂದು ನೊಂದು
ಮಲಿನ ಗಂಧಿಯಾದವಳು

ಅರ್ಥ ಕೂಡಿ ಅರ್ಥ ಕಳೆದು
ನಲಿವು ಕೊಟ್ಟು ನೋವು ಮೆಟ್ಟಿ
ಪಾಲು ಪಂಚಾಮೃತ ಕುಡಿದು
ಬದುಕಿಗೈಸಿರಿಯಾದವಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.