ADVERTISEMENT

ಅವಳ ಹೊಕ್ಕುಳ: ಲಕ್ಷ್ಮಣ ಬಿ.ಎ. ಬರೆದ ಕವಿತೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 19:30 IST
Last Updated 21 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ವಪ್ನ ದೇವತೆಯ
ಶಿಲ್ಪದ ಕರಳುಬಳ್ಳಿಯಲಿ‌
ಸಿಕ್ಕಿಹಾಕಿಕೊಂಡ ಕಲಾವಿದನ ಉಳಿ
ಉಳಿದು ಹೋಗಿದೆ ಹಾಗೇ

ಯಾವ ಮಾಯಕದಲಿ
ಕಡಲಿನೆದೆಗೆ ತಾಗಿತೋ ಈ ಗಾಳಿ
ಅಲೆ ಅಲೆಯ ಸೆಳವಿಗೆ ಇಡೀ ಕಡಲೇ
ಬಲೆ
ಹಗಲಿರುಳು ಅಲೆಯುವ ಎಲ್ಲ ಅಲೆಗಳಿಗೆ
ದಡ ಮುಟ್ಟುವ ಖಾತ್ರಿ ಇಲ್ಲ

ನಿಲಯ ಕಲಾವಿದನ ಖಾಸಾ
ರಾಗವೊಂದು ತುಂಬಿದ ಮೆಹಫಿಲಿನಲಿ
ಗಂಟಲಿನಲೇ ಸಿಕ್ಕಿ ಹಾಕಿಕೊಂಡಂತೆ

ADVERTISEMENT

ಮೊದಲ ಬಾರಿ ಬಂಗುಡೆ
ಮೆಲ್ಲಲು ಹೋದ ಬಯಲು ಸೀಮೆಯ
ಪ್ರವಾಸೀ ಬಾಲಕನ ಗಂಟಲಿನೊಳು ಮೀನು ಮುಳ್ಳು ಸಿಕ್ಕಂತೆ

ಮೊದಲ ಬಾರಿ ಕಡಲತಡಿಗೆ
ಬಂದ ಜೋಡಿಗಳ ಫಜೀತಿ
ಹೇಳ - ತೀರ ದು.

ಹೋದ ವರ್ಷ ಇದೇ ಮಳೆಯ ವೇಳೆ ಇಲ್ಲಿ ಬೇರೆ ಬೇರೆ
ಯಾದ ಪ್ರೇಮಿಗಳು
ಹೊಸ ವಿರಹ ಕವಿತೆ ಹೊಸೆದು
ಮತ್ತೆ
ಎದಿರು ಬದಿರಾಗಿ ನಿಂತಿದ್ದಾರೆ
ಯುಗಾದಿಯ ಹೊಸ ಸಂಚಿಕೆಯಲಿ

ಯಾವುದೋ ಒಂದು ಅಲೆ
ನೆಲ ಕಾಣುತ್ತದೆ ಎಂದೋ
ಮಂಗಳಾರತಿಯ ಸುಟ್ಟ ತಟ್ಟೆಯ ಕಾಸಿಗೂ
ಒಂದು ತುಂಡು ಬೆಲ್ಲ ಸಿಕ್ಕೇ ಸಿಗುತ್ತದೆ
ಎಂದೋ

ಸ್ವಪ್ನ ದೇವತೆಯ ಒಡಲಿಗೆ ನೋವಾಗದಂತೆ
ಉಳಿ ತೆಗೆಯೋ ಹುಡುಗಾ
ಇನ್ನೇನು ಮಳೆ ಮಾಯಿಸುತ್ತದೆ ಅವಳ ಹೊಕ್ಕಳ ಗಾಯ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.