ಸ್ವಪ್ನ ದೇವತೆಯ
ಶಿಲ್ಪದ ಕರಳುಬಳ್ಳಿಯಲಿ
ಸಿಕ್ಕಿಹಾಕಿಕೊಂಡ ಕಲಾವಿದನ ಉಳಿ
ಉಳಿದು ಹೋಗಿದೆ ಹಾಗೇ
ಯಾವ ಮಾಯಕದಲಿ
ಕಡಲಿನೆದೆಗೆ ತಾಗಿತೋ ಈ ಗಾಳಿ
ಅಲೆ ಅಲೆಯ ಸೆಳವಿಗೆ ಇಡೀ ಕಡಲೇ
ಬಲೆ
ಹಗಲಿರುಳು ಅಲೆಯುವ ಎಲ್ಲ ಅಲೆಗಳಿಗೆ
ದಡ ಮುಟ್ಟುವ ಖಾತ್ರಿ ಇಲ್ಲ
ನಿಲಯ ಕಲಾವಿದನ ಖಾಸಾ
ರಾಗವೊಂದು ತುಂಬಿದ ಮೆಹಫಿಲಿನಲಿ
ಗಂಟಲಿನಲೇ ಸಿಕ್ಕಿ ಹಾಕಿಕೊಂಡಂತೆ
ಮೊದಲ ಬಾರಿ ಬಂಗುಡೆ
ಮೆಲ್ಲಲು ಹೋದ ಬಯಲು ಸೀಮೆಯ
ಪ್ರವಾಸೀ ಬಾಲಕನ ಗಂಟಲಿನೊಳು ಮೀನು ಮುಳ್ಳು ಸಿಕ್ಕಂತೆ
ಮೊದಲ ಬಾರಿ ಕಡಲತಡಿಗೆ
ಬಂದ ಜೋಡಿಗಳ ಫಜೀತಿ
ಹೇಳ - ತೀರ ದು.
ಹೋದ ವರ್ಷ ಇದೇ ಮಳೆಯ ವೇಳೆ ಇಲ್ಲಿ ಬೇರೆ ಬೇರೆ
ಯಾದ ಪ್ರೇಮಿಗಳು
ಹೊಸ ವಿರಹ ಕವಿತೆ ಹೊಸೆದು
ಮತ್ತೆ
ಎದಿರು ಬದಿರಾಗಿ ನಿಂತಿದ್ದಾರೆ
ಯುಗಾದಿಯ ಹೊಸ ಸಂಚಿಕೆಯಲಿ
ಯಾವುದೋ ಒಂದು ಅಲೆ
ನೆಲ ಕಾಣುತ್ತದೆ ಎಂದೋ
ಮಂಗಳಾರತಿಯ ಸುಟ್ಟ ತಟ್ಟೆಯ ಕಾಸಿಗೂ
ಒಂದು ತುಂಡು ಬೆಲ್ಲ ಸಿಕ್ಕೇ ಸಿಗುತ್ತದೆ
ಎಂದೋ
ಸ್ವಪ್ನ ದೇವತೆಯ ಒಡಲಿಗೆ ನೋವಾಗದಂತೆ
ಉಳಿ ತೆಗೆಯೋ ಹುಡುಗಾ
ಇನ್ನೇನು ಮಳೆ ಮಾಯಿಸುತ್ತದೆ ಅವಳ ಹೊಕ್ಕಳ ಗಾಯ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.