ADVERTISEMENT

ಅನಿತಾ ಪಿ.ತಾಕೊಡೆ ಬರೆದ ಕವಿತೆ: ಕಲ್ಲಾದವರು

ಅನಿತಾ ಪಿ.ತಾಕೊಡೆ
Published 19 ಜೂನ್ 2021, 19:30 IST
Last Updated 19 ಜೂನ್ 2021, 19:30 IST
ಕಲೆ: ರೂಪಶ್ರೀ ಕಲ್ಲಿಗನೂರ
ಕಲೆ: ರೂಪಶ್ರೀ ಕಲ್ಲಿಗನೂರ   

ಋತುಮಾನದ ಅದಲು ಬದಲಿಗೂ
ಸುಳಿ ಸುಳಿದು ಹರಿವ ನೀರಿನ ಸೆಲೆಗೂ
ಒಡ್ಡಿಕೊಂಡು ಹಿಗ್ಗಾಮುಗ್ಗ ಥಳಿಸಿಕೊಂಡರೂ
ಅಳುಕದೆ ಎದೆಯೊಡ್ಡಿ ನಿಂತ ಕಲ್ಲುಗಳನ್ನು ಕಂಡಾಗಲೆಲ್ಲ
ಕೆಲವೊಮ್ಮೆ ಹೀಗೂ ಅನಿಸಿದ್ದುಂಟು
ಇಲ್ಲೂ ಇರಬಹುದೇ...? ಅಹಲ್ಯೆಯಂತೆ ಇನ್ಯಾರೋ!

ಅದೇ ಚಿಂತನೆಯಲೆಗಳು ಭಾರವಾದಾಗಲೆಲ್ಲ
ಕಲ್ಲಿನ ದೊರಗು ಮೈಯಿಂದ ಸರಿದು
ಸವೆದು ನುಣ್ಣಗಾಗಿರುವಲ್ಲಿ ಕೂತು
ಒಂದೊಂದು ಕಲ್ಲಿನ ಬಿರುಕಿನಲಿರುವ
ನೋವಿನ ತೀವ್ರತೆಯ ಆಳವನ್ನು ಅರಿಯುತಿದ್ದೆ

ಅಲ್ಲಿ ಕ್ಷೀಣದನಿಯಲ್ಲಿ ಕೇಳಿ ಬರುವ
ನಿಟ್ಟುಸಿರಿನ ಬಿಸುಪಿನ ಏರಿಳಿತವನು ಆಲಿಸಿದಾಗ
ಇಲ್ಲ, ಇಲ್ಲಿ ಕಲ್ಲಾದವರ ಪಾಡು ಅಹಲ್ಯೆಯಂತಿಲ್ಲ
ಇರಬಹುದು ಅವಳಂತೆಯೇ ಇನ್ಯಾರೋ ನೊಂದವರು

ADVERTISEMENT

ಹಾಗೆ ನೋಡಿದರೆ
ಯಾವ ಕಲ್ಲೂ ಖಾಲಿಯಾಗಿಲ್ಲ ಇಲ್ಲಿ
ಪ್ರೇಮ ಬರಹದ ಕೈಗೆ ಸಿಲುಕಿ ಗೀಚಿಸಿಕೊಂಡವುಗಳು
ವಿರಹದ ಬೇಗೆಯಿಂದ ನಲುಗಿದವುಗಳು
ನೆತ್ತರಿನ ಹನಿಗಳನ್ನು ತನ್ನ ಬಣ್ಣಕ್ಕೆ ಹೊಂದಿಸಿಕೊಂಡವುಗಳು
ಯಾರದೋ ಆತ್ಮಾಹುತಿಗೆ ಪಾದವೂರಲು
ಕೊಟ್ಟ ಅವಕಾಶದ ಸಲುವಾಗಿ ಪರಿತಪಿಸುತಿರುವ ಕೆಲವೊಂದು

ಇಲ್ಲಿ ಇರುವುದೆಲ್ಲವೂ ಹೀಗೆಯೇ
ಯಾರ ವ್ಯಾಮೋಹಕೋ ಕಡು ನಿಂದನೆಗೋ
ಒಳಗಾಗಿರಬೇಕು
ಮೋಸದ ಅಂತರಂಗವನ್ನು ಅರಿಯಲಾಗದೆ
ಅಹಲ್ಯೆಯಂತೆ ಕಳೆದು ಹೋಗಿರಬೇಕು
ಕಲ್ಲಾಗಿಸುವವರ ಮುಂದೆ
ರಾಮನಂಥವರ ಸೌಮ್ಯಭಾವ ಸ್ಪರ್ಶವಿಲ್ಲದೆ
ಮತ್ತೆದ್ದು ಬಾರದಂತೆ ಕಲ್ಲಾಗಿರಬೇಕು

ಕಲ್ಲಾಗಿದ್ದು ಅಹಲ್ಯೆಯೋ ಅವಳ ಮನಸ್ಸೋ...!
ನಾನೂ ಬರುತ್ತೇನೆ ಎಂದಿನಂತೆ
ಬಂದು ಖಾಲಿ ಕಲ್ಲುಗಳ ಹುಡುಕುತ್ತೇನೆ
ಕಲ್ಲಾಗುವುದಕ್ಕಲ್ಲ...!
ಎಲ್ಲಿಗೂ ಸಲ್ಲದ ಮನಸ್ಸಿಗೆ ಒಲ್ಲದವುಗಳನು
ಮತ್ತೆ ಕಾಣಿಸದಂತೆ
ಹಗಲು ಮುಗಿಯುವ ಮೊದಲು ಅಳಿಸಿಬಿಡಲು

ಸಾವಿರಾರು ವರ್ಷ ಕಲ್ಲಾಗಿ ಕಾದಿರುವ ಅಹಲ್ಯೆಯಂತೆ
ಕಲ್ಲಾಗಬಾರದು ಎಂದೂ
ಹೊರಗಿನ ಊನವನು ಗೆದ್ದುಕೊಂಡು
ನೋವು ನಲಿವುಗಳ ಹಾದಿಯನು ಇದ್ದಂತೆ ಒಪ್ಪಿಕೊಂಡು
ಪ್ರೀತಿಯ ಜೋಕಾಲಿಯನು ಜೀಕಬೇಕು
ಒಳಗಿನ ಕಶ್ಮಲಗಳನು ಅಂದಂದಿಗೆ ತೊಳೆದು
ನಿತ್ಯ ನಿರ್ಮಲವಾಗಬೇಕು ಹರಿವ ತೊರೆಯಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.