ADVERTISEMENT

ಕವನ: ಪ್ರಮಾದವಿಲ್ಲ

ಶ್ರೀದೇವಿ ಕಳಸದ
Published 10 ಅಕ್ಟೋಬರ್ 2020, 19:30 IST
Last Updated 10 ಅಕ್ಟೋಬರ್ 2020, 19:30 IST
ಕಲೆ: ನಾಗಲಿಂಗ ಬಡಿಗೇರ್‌
ಕಲೆ: ನಾಗಲಿಂಗ ಬಡಿಗೇರ್‌   

ಅಲ್ಲಿ ನಿನ್ನ ಪದತಲದಲ್ಲಿ ಬಿದ್ದು ಹೊರಳಾಡುತ್ತಿರುವ
ನನ್ನ ಮನಸಿನ ಬಗ್ಗೆ
ನನಗೇ ಮರುಕವಿಲ್ಲ, ಇನ್ನು ಸಂಕೋಚವೆಲ್ಲಿ?
ಅಂತೆಯೇ ಈ ಅರ್ಧರಾತ್ರಿಯಲ್ಲೇ
ದೇಹವನ್ನೂ ಹೊತ್ತು ಬಂದಿದ್ದೇನೆ.

ಮರುಳಾ,
ಕೊಟ್ಟರೆ ತುಂಬಿ ತುಂಬಿ ಕೊಡಬೇಕು
ಕಟ್ಟಿಕಟ್ಟಿ ಉರುಳಿಸಬೇಕು
ನೋವಿನ ಹೆಡಿಗೆಯನ್ನು, ಸಾವಿನ ಸರಪಳಿಯನ್ನು
ಮುಟ್ಟಲು ಬಂದವರೆಲ್ಲ ನಿಂತಲ್ಲೇ ಭಸ್ಮವಾಗಿ
ಮೋಹದ ಹುಡಿಯೊಂದಿಗೆ ಹಾರಿ ಮೋಡಕ್ಕಂಟುವಂತೆ.

ಬಳಿದುಕೊಂಡು ಆಟ ಮುಗಿಸಲಿದು
ಹುಣಸೆಬೀಜದ ಚೌಕಾಬಾರವೇನು?
ಒಳಹೋಗಲು ಕಡಿತ ಸಿಗಲಿಲ್ಲವೆಂದೋ
ಹಣ್ಣಾಯಿತೆಂದು ಎದ್ದು ಹೋಗಲೋ.

ADVERTISEMENT

ಎಳೆ ಹಿಂಜಿ ಅಂಜಿ ಅಷ್ಟಷ್ಟೇ ಹಿಂಜಿಂಜಿ
ಗುಂಜಿಎಳೆಯ ಲಡಿಗಟ್ಟಿಸಿ ಕುಣಿಕೆ ಎಳೆದು
ಬ್ರಹ್ಮಾಂಡ ನೇಯ್ದ ನಾಜೂಕು ಜೀವಜಾಲವಿದು.

ಬಾ ಮುಗಿಲೀಗ ಹರಿದಿರಬೇಕು,

ನೀನೀಗ ಕಾಲಿಳಿಬಿಡುವಾಗ
ಉತ್ಕಟ ನೆನಪುಗಳು ತೊಡರಬಹುದು;
ನಿನ್ನೆದುರಿನ ಮುಳ್ಳುಗಳಿಗೆ ನಿನ್ನೆದೆಯ ಲೋಲಕಕ್ಕೆ
ಮತ್ತೆ ನೀನೇ ಗತಿ ಕಲಿಸಿಕೊಡಬೇಕು
ನಿನ್ನದೇ ಅಂಕೆಯಲ್ಲಿ ಅವೇ ಸಂಖ್ಯೆಯಲ್ಲಿ ನಿಶ್ಶಂಕೆಯಲ್ಲಿ.

ನಿನ್ನ ಶುದ್ಧಬನಿಗೆ ಶುಭ್ರಬಾನಿಗೆ
ತೆರೆದುಕೊಳ್ಳಲು ಇಳೆಯ ಎದೆಗೆ ಪಾದಗಳನ್ನೂರಲೇಬೇಕು.
ಬಾಗಿಲ ತೆರೆಯುವಾಗ ನಾಚಿಕೆ ಇಲ್ಲದ ನನ್ನ ಕರುಳು
ಚಿಲಕವೇ ತಾನಾಗಿ ನಿನ್ನ ತಡೆಯಬಹುದು;
ಅತೀಮಾನವನಾಗುವ ಹಂಬಲ ಸಾಕಲ್ಲವೆ?
ಸ್ವಲ್ಪ ಹೊತ್ತಾದರೂ ರಾಕ್ಷಸನಾಗುವ
ಅವಕಾಶ ಆವಾಹಿಸಿಕೋ
ನಿನ್ನ ನೀ ಉಳಿಸಿಕೋ
ನಿನ್ನೊಳಗಿನ ನನ್ನನ್ನೂ
ನನ್ನೊಳಗಿನ ನಿನ್ನನ್ನೂ
ಆದೀತೆ, ಇದು ಪರಿಯೆ?

***

ಒಂದು ಸ್ಪರ್ಶದ ವಿಭಾವಕ್ಕೆ
ಜೀವಕ್ಕೆ ಜೀವವೇ ಪಾಪಕುಂಡದೊಳಗೆ ಹಾರಿ
ಬಯಕೆ ಕೆಂಡವಾದರೂ ಬಯಲ ಜೀಕದೆ
ಅಗ್ನಿ ಇಲ್ಲದೆ ಅರಳಿನಿಂತ ಮನಸ್
ಸಾಕ್ಷಿಯ ವೃಕ್ಷವಿದು;

ಪಾದಾಘಾತದಿಂದ ದೋಹದವೇ ಎಸಗುತ್ತದೆ
ಅಲ್ಲವೇ ನನ್ನ ಗಂಧರ್ವ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.