ADVERTISEMENT

ಬರಗೂರು ರಾಮಚಂದ್ರಪ್ಪ ಬರೆದ ಕವಿತೆ: ಏನಾಗುತ್ತಿದೆ ಇಲ್ಲಿ?

ಪ್ರೊ.ಬರಗೂರು ರಾಮಚಂದ್ರಪ್ಪ
Published 8 ಮೇ 2021, 19:30 IST
Last Updated 8 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಏನಾಗುತ್ತಿದೆ ಇಲ್ಲಿ ಈ ನಾಡಿನಲ್ಲಿ

ಚಂದ್ರ ತಾರೆಗಳ ತೋರಿಸಿದ ಬೀಡಿನಲ್ಲಿ

ಚಂದ್ರ ತಾರೆಗಳು ತಂಗಳಾಗಿ ಉದುರುತ್ತಿವೆ
ಉಸಿರು ಕಟ್ಟಿದ ನಿಟ್ಟುಸಿರ ನೆಲದ ಮೇಲೆ
ಬೆಳದಿಂಗಳ ಭ್ರಮಿಸಿದ ಭಾವಗಳು ಮಲಗಿವೆ
ಸೌದೆಯೊಟ್ಟಿದ ಚಿಂತೆ ಚಿತೆಯ ಮೇಲೆ

ADVERTISEMENT

ತೆನೆಯೊಡೆದ ಕನಸುಗಳ ಕರುಳ ಕತ್ತರಿಸಿ
ಖಜಾನೆಗಳ ತುಂಬ ತುಂಬಿಸಲಾಗುತ್ತಿದೆ
ಕೂಳೆ ಹೊಲದಲ್ಲಿ ಕೂಲಿ ಮಾಡಲು ಬಿಟ್ಟು
ನೀರಿಲ್ಲದ ನಾಲೆ ತೋಡಲಾಗುತ್ತಿದೆ

ಬಡಬಗ್ಗರ ಮಣ್ಣಿನ ಹಣತೆಗೆ ಎಣ್ಣೆಕೊಡದೆ
ಬಣ್ಣದ ಭಾಷಣ ಭೋರ್ಗರೆಯುತ್ತಿದೆ
ಭಯ ಬಿದ್ದ ಭೂಮಿಯ ಬೆವರು ಹರಿದು
ತಳಪಾಯವೇ ತಲ್ಲಣಿಸಿ ನಡುಗುತ್ತಿದೆ

ಅರಳುತ್ತಿರುವ ಹೂಗಳು ನರಳುತ್ತ ಬೀಳುತ್ತಿವೆ
ಕನಸು ಕದ್ದ ಕಳ್ಳ ಕುರ್ಚಿಯ ಕೆಳಗೆ
ಆಮ್ಲಜನಕವಿಲ್ಲದ ನರಕದಾರ್ಥಿಕತೆಗೆ
ಜೀವಗಳ ಬಲಿ ಕೋಟಿ ಕೊಳಗದ ಒಳಗೆ

ಚಂದ್ರ ಬೆತ್ತಲೆಯಾಗಿ ಸೂರ್ಯ ಕತ್ತಲೆಯಾಗಿ
ಮುಗಿಲು ಅಲ್ಲೋಲ ಕಲ್ಲೋಲವಾಗಿ
ನೆಲದ ಮಡಿಲಲ್ಲಿ ಕಡಲು ಕೆಂಡವಾಗಿ
ಉರಿದು ಹೋಗುವ ಮುನ್ನ ಎಚ್ಚರಾಗಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.