ADVERTISEMENT

ಕವಿತೆ: ಕ್ವಾರಂಟೈನ್

ಸುಬ್ರಾಯ ಚೊಕ್ಕಾಡಿ
Published 14 ನವೆಂಬರ್ 2020, 19:31 IST
Last Updated 14 ನವೆಂಬರ್ 2020, 19:31 IST
ಕಲೆ: ಶ್ರೀಕಂಠಮೂರ್ತಿ ಎಂ.ಎಸ್.
ಕಲೆ: ಶ್ರೀಕಂಠಮೂರ್ತಿ ಎಂ.ಎಸ್.   

ಪಿಳಿ ಪಿಳಿ ಹೊಳೆವ ಕಣ್ಣುಗಳು
ಸದಾ ಮುಚ್ಚಿರುವ ಕಿಟಿಕಿ ಬಾಗಿಲ ಹಿಂದೆ
ಭಣಗುಡುವ ಏಕಾಂತ.ನಡುವೆ
ತೆರೆದ ಅನಾಥ ಪುಸ್ತಕ ಒಳಗೆ
ಇರುವೆ ಮುತ್ತಿದ ತಿಂಡಿ ತಟ್ಟೆ ಹೊರಗೆ.

ಕಿಟಿಕಿ ಗಾಜಿನ ಆಚೆ
ಮಂಜು ಕವಿದಂತಿರುವ
ಮರ ಬೆಟ್ಟ ಕಣಿವೆಗಳ
ಅಸ್ಪಷ್ಟ ಲೋಕ;
ಪುಟ್ಟ ಮಗುವಿನ ಕ್ಷೀಣ ಅಳು, ನಾಯಿಯ ಬೊಗಳು
ಯಾವುದೋ ಹಕ್ಕಿಯ ಕೂಗು,
ಬೀಸುಗಾಳಿಯ ವಿಚಿತ್ರ ಸದ್ದು,
ಇ಼ಳಿದು ಬಂದಂತೆ ಯಾವುದೋ
ಅಪರಿಚಿತ ಲೋಕದಿಂದ.

ಕಿಟಿಕಿಯ ಸಮೀಪ ಬಂದು ಕುಶಲ ಕೇಳುವ ಹಾಗೆ
ಒಳಗಿಣುಕಿ, ಬರಲಾಗದೆ ಒಳಗೆ
ಚಡಪಡಿಸುವ ಹಕ್ಕಿ:
ಹೊರಹೋಗಲಾಗದೆ ಅಲ್ಲೇ ಉಳಿದ ಜೀವ-
ಇಬ್ಬರಲ್ಲೂ ಕೆರಳಿ ನಿಂತ
ಬಾಯಿಲ್ಲದಭಿಲಾಷೆಗಳ ಮೊತ್ತ.

ADVERTISEMENT

ಕೆರಳಿ ನಿಂತರೂ ವ್ಯರ್ಥ. ಬಾಗಿ, ಗಾಜನು ಕುಕ್ಕಿ
ಅಲ್ಲಿಂದಲೇ ಸಾಂತ್ವನ ಹೇಳುವ ಹಕ್ಕಿ
ಸಾಕಾರವಾಗದ ಕನಸಿನ ನಡುವೆ
ಬಿಸು ಸುಯ್ಯುತಿರುವ ಒ಼ಳಗಿನಾಕೃತಿ
ಆ ನಿರ್ಮಾನುಷ ಲೋಕದಲ್ಲಿ.

ಸಂಜೆ ಇಳಿದಂತೆ
ಬೆಳದಿಂಗಳ ಜತೆಗೆ ಬಂದ ಚಂದ್ರ
ಇಣುಕಿ ನೋಡುತ್ತಾನೆ ಕಿಟಿಕಿಯೆಡೆಯಿಂದಷ್ಟೆ
ಕನಿಕರದಿಂದ, ಒಳಗೂ ಬೆಳಕು ಹಾಯಿಸಲಾಗದ
ಅಸಹಾಯಕತೆಯಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.