ADVERTISEMENT

ಕವಿತೆ: ಯಾವಾಗ?

ಮುರುಳಿ ಹತ್ವಾರ್
Published 3 ಏಪ್ರಿಲ್ 2021, 19:30 IST
Last Updated 3 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಕ್ಷ ಲಕ್ಷ ಗಳಿಗೆಗಳ ಹಿಂದೆ ನಕ್ಷತ್ರಗಳು ಬರೆದ
ಬೆಳಕಿನ ಪತ್ರಗಳ ಅರ್ಥ ಹುಡುಕುತಿದ್ದ,
ಕಪ್ಪು ರಸದಲಿ ಬಿಳಿಯ ಕುಂಚವ ತೋಯಿಸಿ
ಆ ಪತ್ರಗಳಿಗೆ ವ್ಯಾಖ್ಯಾನ ಬರೆಯುವ ತವಕದಲಿ

ಕಬ್ಬಿನಂತೆ ಬೆಳೆದ ಕೋಲುಗಳ ಹಿಂಡಿ-ಹಿಂಡಿ ತೆಗೆದ
ಕಡುಗಪ್ಪು ರಸ ಅದು; ಅಂಟಿದರೆ ಮತ್ತೆ ಅಳಿಸದಷ್ಟು ಗಟ್ಟಿ.
ನೂರಾರು ವರ್ಷಗಳು ಹಿಂಡಿಸಿಕೊಂಡ ಸಿಪ್ಪೆ ರಾಶಿ
ಕೊಳೆತುಹೋದರೂ ಹೊಸ ಫಸಲಿನ ರಸ ಇಂಗಿಲ್ಲ

ಎತ್ತೆತ್ತರದ ಕೋಣೆಯೊಳಗೆ, ಸತ್ತ ಪ್ರಾಣಿಯೊಂದರ
ಸುಲಿದ ಸಿಪ್ಪೆಯ ಮೆತ್ತೆಯ ಮೇಲೆ ಕುಳಿತ ಅವ
ಕಪ್ಪು ಆಗಸದೆ ಹೊಳೆಯುತ್ತಿದ್ದ ನಕ್ಷತ್ರಗಳ ನೋಡಿ ಬರೆದ:
'ಕಪ್ಪಿರುವದೇ ಬಿಳಿಯ ಬಿಳುಪನ್ನ ಹೊಳೆಸಲು'

ADVERTISEMENT

ಕೆಳಗೆ, ವಿಷದ ಜಂತುಗಳ ತವರೆಂದು ಸುಟ್ಟ ಬನದ ಬಯಲಲಿ
ನಿಂತಿದ್ದವು ಉದ್ದುದ್ದ ಕೊಳವೆಗಳು ಹೊಗೆಯುಗುಳುತ
ಕಾಡಿ, ಬೇಡಿ, ಕರೆದರೆಂದು ಹರಿದು ಬಂದ ಗಂಗವ್ವನ
ಮಡಿಲೆಲ್ಲ ವಿಷದ ಕೆಚ್ಚಲುಗಳು ಸುರಿದ ಹೊಲಸಿನ ಮೈಲಿಗೆ.

ಒಂಟಿ ಸಿಕ್ಕರೆ ಪಕ್ಕದ ಮನೆಯ ಕೂಸನ್ನೂ ಬಿಡದೆ
ಮೈಯೆಲ್ಲಾ ಮೊಬೈಲ್ ಆಡಿಸಿ, ಹರಕೊಂಡು
'ಹಬ್ಬ' ಮಾಡುವ ದುರುಳ ಡೈನೋಸಾರುಗಳು ಎಲ್ಲೆಲ್ಲೂ
ಬರುವನೆಂದು ಭಗೀರಥ ಕೊರೆವ ಕಾರಿರುಳ ಕೊಳ್ಳಿ ಹಿಡಿದು?

ಕರೆಂಟಿನಲಿ ಕಾರು ಓಡುವ ಸುದ್ದಿ ಕೇಳಿ ಬೆಚ್ಚಿದ್ದಾರಂತೆ
ಮೈತುಂಬಾ ಇದ್ದಿಲು ಬಳಿದುಕೊಂಡ ಮಂದಿ
ಮತ್ತೆ ಒಲೆ ಹಚ್ಯಾರಂತೆ, ಕುದಿವ ಬಾಣಲೆಯಲಿ
ಹೊಸ-ಮತ್ತಿನ ಬೋಂಡಾ ಕರಿದು ಬಾಯಿಗೆ ತುಂಬಲು!

ಯಮುನೆಯ ತೀರದ ಬಿಳಿಯ ಮಿನಾರಿನ ಹೂಗಳ
ಬೆವರಿನ ವಾಸನೆ ಇನ್ನೂ ಬಡಿವುದಂತೆ
ವೈರಸ್ಸುಗಳು ಸಾಯಿಸದ ಮೂಗಿನ ನಳಿಗೆಗಳಿಗೆ.
ಹೊಸ ಪರಿಮಳದ ಹೂವ ತರುವ ಚಿಟ್ಟೆ ಎಲ್ಲಿ ಅಡಗಿದೆಯೋ?

ಕೆಳಗಿನದ ಮ್ಯಾಲೆ ಮಾಡುವದಂತೆ ಪ್ರಕೃತಿಯ ಚಕ್ರ.
ಮನುಷ್ಯ ಜಾತಿಯದು ಅಡ್ಡಡ್ಡ ತಿರುಗುತ್ತಲೇ ಇರುವ ಎರಡು ಚಕ್ರ:
ಕಬ್ಬಿಣ ಕಟ್ಟಿದ ಕಾಲು ತಿರುಗಿಸೋ ಗಾಣದ ಚಕ್ರ;
ಆ ಕಾಲಿನ ಮೇಲಿನ ಎದೆ ಸೆಟೆದರೆ, ಕತ್ತು ಕೊಯ್ಯುವ ಗರಗಸದ ಚಕ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.