ADVERTISEMENT

ಕವಿತೆ: ಕಣ್ಣಿವೆಯ ತಪ

ಮಂಜುಳಾ ಸಿ.ಎಸ್‌.
Published 17 ಏಪ್ರಿಲ್ 2021, 19:30 IST
Last Updated 17 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಎಂದೂ ಮುಗಿಯದ
ತಪಕೆ ನಿಂತಿಹ
ಕಣ್ಣುಗಳ ಸಂತೈಸು
ಕಾರಿರುಳಲಿ ಕಣ್ಣವೆಗಳೆರಡು
ಒಂದಾಗಲಿ ಅದಾಗದಿದ್ದರೆ
ಕಡೇಪಕ್ಷ
ಕಣ್ಣಿನನಿಗಳು
ಸ್ವಾತಿ ಮುತ್ತಾಗಳಾದರೂ ಆಗಲಿ ಬಿಡು॥

ಒಪ್ಪಿಕೋ ನಲ್ಲ
ಸುಟ್ಟು ಹೋಗಲಿ
ಇನ್ನಾದರೂ ಹತ್ತಲವು
ವರುಷಗಳ ವಿರಹ
ಅದಾಗದಿದ್ದರೆ
ಕಡೇಪಕ್ಷ
ಕಳೆದ ನಿರಥ೯ಕ ಕ್ಷಣಗಳಿಗೆ
ತಿರಸ್ಕಾರದ ಮುದ್ರೆಯೊತ್ತಿ ಬಿಡು॥

ನಿದಿರೆ ಕಾಣದ ಕಣ್ಣವೆಗಳಿಗೆ
ತಂಪನೀವ
ಮುತ್ತನಿಡು ಅದಾಗದಿದ್ದರೆ
ಕನಸ ಬಸಿರ ಹೊತ್ತಿಹ
ಉಸಿರಿಗಿನ್ನಾದರೂ
ಕಡೆಪಕ್ಷ ಚೆಂದದ
ಹೆಸರನೊಂದ ಇಟ್ಟು ಬಿಡು॥

ADVERTISEMENT

ಹೆಚ್ಚೇನಿಲ್ಲ ಮುಗಿಯದ
ಕತೆಗೆ ಮಾತುಕತೆಗೆ
ಜನುಮಕ್ಕಾಗುವಷ್ಟು-
ರವಷ್ಟು
ನೆನಪು ಕಟ್ಟಿ ಕೊಡು
ಅದಾಗದಿದ್ದರೆ ಕಡೆಪಕ್ಷ
ಕುಡಿನೋಟದ ಪ್ರೀತಿಯ
ಕಡ ಕೊಟ್ಟು ಬಿಡು॥

ನಾಲ್ಕಾರು ಸಂಜೆಗಳು
ನಲಿವಿನ ರಂಗು ತರಲಿ
ಅದಾಗದಿದ್ದರೆ ಕಡೇಪಕ್ಷ
ಕಾನನ ಬೆಳದಿಂಗಳಲಿ ಒಮ್ಮೆ
ಯಾದರೂ ಮಲ್ಲಿಗೆ ಮುಡಿಯಲಿಡು
ಅರೆಘಳಿಗೆಯಾದರೂ ಅವು
ಬಿರಿದು ಉದುರಲಿ॥

ಅಂತಿಮ ಭೇಟಿಗೆ
ಗುರುತಿಟ್ಟ ಜಾಗಕೆ
ಹೇಳಿದ ತಾರೀಕಿಗೆ
ಖಂಡಿತ ನೀನೆಂದು ಬಾರದಿರು
ಕಡೇಪಕ್ಷ ಮುಂದಿನ
ದಾರಿಗೆ ನೀರೀಕ್ಷೆಯ ಕಾವಿಗೆ
ಜೀವವ ಮತ್ತೆ
ಬೇಯಲು ಬಿಡು॥

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.