ADVERTISEMENT

ಕವಿತೆ: ಜ್ಞಾನೋದಯದ ಹಾದಿ

ನಾ ದಿವಾಕರ
Published 21 ಮೇ 2022, 19:30 IST
Last Updated 21 ಮೇ 2022, 19:30 IST
ಸಾಂದರ್ಭಿಕ ಕಲೆ (ಕಲೆ: ವಾಗೀಶ ಹೆಗಡೆ)
ಸಾಂದರ್ಭಿಕ ಕಲೆ (ಕಲೆ: ವಾಗೀಶ ಹೆಗಡೆ)   

ದಶದಿಕ್ಕಿನ ಮಳೆ ತೊಪ್ಪೆಯಾದ
ಸೂರ್ಯ ಅಮಾಸೆಯ
ಬಿಂಬವಾಗಿಬಿಟ್ಟ,,,ನೆಲದೊಡಲ
ಶಾಖ ಬಾನಗಲದ ತಂಪು
ಕಗ್ಗತ್ತಲ ಏಕಾಂತದಲೂ ಆ
ಕಂಗಳಲಿ ಕೆಂಡ
ಸುಡುವಾಸ್ತವಗಳ ಬೂದಿಯಲಿ
ಸಿಡಿಸಿಡಿವ ನಿಟ್ಟುಸಿರು
ಎತ್ತ ಸಾಗಿರುವೆ ಬಲ್ಲೆಯಾ ?

ಅಲ್ಲೊಂದು ಸದ್ದು ಇತ್ತ
ಕಿವಿಗಡಚಿಕ್ಕುವ ಅಬ್ಬರ ಎತ್ತಣದೋ ಮೇಳ
ಮೆರವಣಿಗೆ ಮುಷ್ಕರ ಧಿಕ್ಕಾರಗಳ
ಸಾಗರ ಬರಿಗಾಲಿನ ಬೊಬ್ಬೆಗಳಿಗೆ
ಬೂಟುಕಾಲಿನ ಸಪ್ಪಳ
ಮನ ಸುಟ್ಟ ಹಪ್ಪಳ; ಚಾವಣಿಯಲಿ
ಹರವಿದ ಉಡುಪು ಮುಂಜಾವಿಗೆ
ನೆಲವಸ್ತ್ರ,,, ಹಸಿದ ಕಂಗಳ
ನೋಟ ಹಕ್ಕಿ ಗೂಡಿನಲಿ
ಲೀನ ಹಸಿದ ಕಂದನ ಕೂಗಿಗೆ
ಬೆನ್ನು ತಿರುಗಿಸಿದ ಲೋಕ
ಎತ್ತ ಸಾಗಿರುವೆ ಬಲ್ಲೆಯಾ ?

ಹಟ್ಟಿಯೊಳಗಿನ ರೊಟ್ಟಿ ಪುಟ್ಟ ಗೂಡಿನ
ತಡಿಕೆ ಎರಡೂ ಒಟ್ಟಿಗೇ,,,,
ಕಮಟು ತೊಗಲಿನದೋ ತಟ್ಟಿದ
ಹಿಟ್ಟಿನದೋ ತಾಯಿ ಮೂಕಳಾಗಿದ್ದಾಳೆ
ತೋರಣವಾಗಿದೆ ಸುಟ್ಟೆಲುಬು
ನೆಲಹಾಸಿನ ತುಂಬ ರಟ್ಟೆಗಳ ತುಣುಕು ;
ಕೇಕೆಯ ಸದ್ದಿಲ್ಲ ಎಳೆಗಂದನ ಸುಳಿವಿಲ್ಲ
ಸರಹದ್ದಿನಾಚೆ ಕೇಕುಗಳ ಚಾರಣ
ಅಜಾನು ಭಜನೆ ಸುಪ್ರಭಾತಗಳ
ಹರಿವಿನಲಿ ಸದ್ದು ಮಾಡದ ದೈವ
ಎತ್ತ ಸಾಗಿರುವೆ ಬಲ್ಲೆಯಾ?

ADVERTISEMENT

ಮಡಿಲಿಗೊಮ್ಮೆ ಕಿವಿಯಾನಿಸು
ಅಮ್ಮನಿರಬಹುದು ಹೆತ್ತವಳಲ್ಲದಿರೇನು
ಹೊತ್ತವಳಾಗಿರಬಹುದು,,,,ಧಗಧಗಿಸುವ
ಒಡಲ ಚೂರುಗಳ ಹೆಕ್ಕಲಾರಂಭಿಸು
ಎಡತಾಕಬಹುದು ಕಳೆದುದೆಲ್ಲವೂ ;
ಬೆಸೆದುದನೆಸೆದು ಕಸಿಯಾಗುವುದೇಕೆ
ವಿಷದೊಡನೆ,,, ಒಳಲೆಯಲುಣಿಸಿದ್ದು
ಹಾಲಲ್ಲವೇ ಅಮ್ಮ? ಅದೋ
ಧಾವಿಸುತಿಹರು ಹಾಲಾಹಲದೊಡೆಯರು
ದಹಿಸುವುದನೊಮ್ಮೆ ಕೆದಕಿಬಿಡು
ಕರುಳ ಬಳ್ಳಿಗಳ ಸಿಕ್ಕುಗಳಲಿ
ಸವೆದ ಹೆಜ್ಜೆಗಳಿರಬಹುದು
ಎತ್ತ ಸಾಗಿರುವೆ ಬಲ್ಲೆಯಾ?

ಬಲ್ಲೆಯಾದರೆ ಹಿಂದಿರುಗಿಬಿಡು
ಅಲ್ಲೊಂದು ಲೋಕ
ಮೌನ ವೃಕ್ಷದಡಿ ಸಸ್ಯಗಳಿವೆ
ಉಸಿರ ಹಂಚಲಿವೆ ಹಸಿರೊಡಲ
ಪೊರೆಯಲು
ಮನುಜ ಮನ ತೆರೆಯಲು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.