ADVERTISEMENT

ಕವಿತೆ: ಕಾ(ಮ)ವ್ಯ ಸೂತ್ರ

ನಂದಿನಿ ವಿಶ್ವನಾಥ ಹೆದ್ದುರ್ಗ
Published 7 ನವೆಂಬರ್ 2020, 19:30 IST
Last Updated 7 ನವೆಂಬರ್ 2020, 19:30 IST
ಕಲೆ: ವಾಗೀಶ ಹೆಗಡೆ
ಕಲೆ: ವಾಗೀಶ ಹೆಗಡೆ   

ಸೃಷ್ಟಿಕ್ರಿಯೆ ಸೋತ ಹೊತ್ತಿನಲಿ
ಯಾವುದಕ್ಕೂ ಇರಲಿ
ಎನುವಂತೆ ಮತ್ತೊಮ್ಮೆ ಭೇಟಿಯ
ಕುರಿತು ನೀಲಿನಕ್ಷೆಯನ್ನೆಳೆದು
ದಿನ ಗಂಟೆ ನಿಮಿಷ ನಿಗದಿಸಿದೆ

ತಳೆದು ಸುಳಿದು ಮೊಳೆದು ಬೆಳೆದು
ಆರಂಭ ಅಮೃತ ಘಳಿಗೆ
ಮುನ್ನ ‌ಬರಿ ಮುನ್ನಾಟ
ಒಲಿದೂ ಮಣಿಯದ ಹೂಟ
ಮುನಿಸಿನಲಿ ಮುಗಿಲು
ಧರೆ ಅರ್ಧಾಂಗಿಯೇ ಅಪ್ಪಟ

ದಿಟ್ಟಿ ದಿಟ್ಟಿ ಮೆಟ್ಟಿ ಕಿಡಿಹುಟ್ಟಿ
ದಿಗಿಲು ರಭಸದಲ್ಲಿ
ದೇಹದಾದಿಯಾಗಿ
ಡೊಪಮೈನು ಅಂಡ್ರೋಜಿನ್ನು
ಧುಮು ಧುಮು ಧುಮುಕಿ

ADVERTISEMENT

ಧುಮುಗುಟ್ಟು
ಹದ ಅಪರಾಧಕ್ಕೆ ಎದೆ ತಯಾರು
ಅಧರ ಅದುರಿ ಬೆದರಿ
ಲೋಕಕ್ಕೆ ತಿಳಿಯದ ಸೋಕು
ಯಾವುದಿದು ಬೆಳಕು

ಕೋಶಕೋಶವೂ
ಮಿಂದು..
ಹೊಯ್ಯಲೊಯ್ಯಲುಸುಯ್ಯಲು
ಸುಖದ ತ್ರಾಸೆನ್ನುವುದೇ ಹೀಗೆ
ವಿಭ್ರಮದ ಬಯಲು

ಸನಿಹದ ಕಾತರಿನಲಿ ಜೀವ
ಆಸೆ ಮೀರಿ ಅಮಲು ಏರಿ
ಆವರಿಸಿ..ದರೆ...
ಧರೆ ಕಳಚಿತು ಸೆರೆ
ಕವಿದ ಮುಗಿಲು ಅದೃಶ್ಯ ಗಿರಿ
ಅದು ಕವಿಸಮಯವೋ ಕವಿವರ್ಯ!!

ಅಗೋ ಆಲಾಪದಲರು
ಸುಳಿಕುಳಿ ಬೆಟ್ಟಬಯಲು ಕುರುಳು ಹೆರಳು
ತಾಮುಂದು ನಾಮುಂದು ತೋಯ್ದು ತಣಿದು
ನಿಮಿತ್ತ ನಗ್ನವೇ ಉಳಿಯಿತು ಆ ಹಗಲು

ನೆಲವೀಗಾ ಕಾಫಿಯಲ್ಲದ್ದಿದ ಬಿಸ್ಕತ್ತು
ಹಿಂಡಿದರೆ ಬಂಡು
ತಳಮಳದ ಆಳ ಪಾತಾಳ ರಸಾತಳ
ಥಳಥಳ ಪಳಪಳ

ಮಿಂಚಿನಂಚಿನಲಿ ಹೊಂಚಿ
ಅದಲುಬದಲು ಬೆದೆ
ಅಣಿಯಾಗಿ ಅಪ್ಪಣೆ ಎಂದಿತು ಪರದೆ
ಧಡಬಡಿಸೊ ಗುಡುಗುಡುಗು
ಧಗಧಗ ಭಗ ಭೋರ್ಗರೆದು
ಕರೆದು ಮೊರೆದು ಹರಿದು ಪೊರೆದು
ಜಲಜಲಜಲಲ ಸಲಿಲ

ಗರೆದು ಹಗುರಾದ ದುಂಬಿ
ಮುಲುಗಿ ಮುಗುಳಾಯ್ತು ತುಂಬಿ
ಸೋಪಾನ ಸೋನೆ ಜೇನದೊನ್ನೆ
ತಟ್ಟನೆಬ್ಬಿಸದೆ ತಟ್ಟಿ‌ ಮಲಗಿಸಿದ
ಸೋತು ಸಂಪನ್ನಳಾದವಳ ಹುಡುಗ
ಲೋಕದಿನ್ನೊಂದು ವಜನು
ಸರಿಗಟ್ಟಬಹುದೆ ಒಲಿದು
ಕೂಡಿದ ಸೊಗವ

ಸುಖದ ಕನವರಿಕೆಯಲಿ
ನಗು ಅಚ್ಚೊತ್ತಿದವಳ ಬೆತ್ತಲು
ಬೆನ್ನ ಮುತ್ತಿದ್ದ ಹೊದರೊದರು
ಪೊದರು ಸರಿಸಿ
ಮತ್ತೊಂದು ಮುತ್ತು..ಒತ್ತಿ ಒತ್ತಿ
ಸುಷುಮ್ನ ಸುಪ್ತ ತೃಪ್ತ ಮತ್ತ‌ಮತ್ತ

ಯುಗದ ಮುಗಿಯದ ನಿರೀಕ್ಷೆ
ನಿಟ್ಟುಸಿರ ಅಂಡಾಣು
ನಿತ್ಯನಿಯಮಿತ ಸ್ಪರ್ಧೆ
ಧಾರೆ ಧಾರಕಾರ ಬಾರಾ ಮಾರ
ಕೋಟಿ ಶೂರರೂರಿನಲಿ
ಗಮ್ಯದ ಗುರಿ ಹೊಕ್ಕ
ಜಗದೇಕವೀರ

ಸುಸೂತ್ರ ಸೃಷ್ಟಿಕ್ರಿಯೆ ಧ್ಯೇಯ
ಕೂಸು ಜೀವಕೋಶ
ಸುಸಂಪನ್ನ ಭೇಟಿ ಸೂತ್ರ
ಯಾವ ಮಾಯೆಯ ಬಟ್ಟೆ
ಉಟ್ಟಿತ್ತೊ ಈ ಪದ್ಯ

-ನಂದಿನಿ ಹೆದ್ದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.