ADVERTISEMENT

ಕವಿತೆ: ಆಗಿ ಹೋಗುವುದು

ವಸುಂಧರಾ ಕದಲೂರು
Published 19 ಸೆಪ್ಟೆಂಬರ್ 2020, 19:31 IST
Last Updated 19 ಸೆಪ್ಟೆಂಬರ್ 2020, 19:31 IST
ಕಲೆ: ಮುರಳೀಧರ ರಾಥೋಡ್‌
ಕಲೆ: ಮುರಳೀಧರ ರಾಥೋಡ್‌   

ಈ ಲೋಕಕ್ಕೆ ಬಂದು
ಹೋಗುವುದೆಂದರೆ...

ಒಲೆ ಉರಿ ತಾಗಿ ಕಾದ ಬಿಸಿ
ಮಡಕೆಯೊಳಗಿನ ಕುದಿ
ನೀರಿಗೆ ಬಿದ್ದ ಅಕ್ಕಿ ಕಾಳಂತೆ
ಬೆಂದು ಮೆತ್ತಗಾಗುವುದು
ಹಸಿದವರ ಹೊಟ್ಟೆಯ
ತುತ್ತಾಗುವುದು ಕೆಲವೊಮ್ಮೆ
ವ್ಯಂಜನವೆಂದು ಮೆಲುಕಾಡುವವರ
ಬಾಯಿಗೆ ಸಿಕ್ಕಿ ನುಜ್ಜಾಗುವುದು

ಈ ಲೋಕಕ್ಕೆ ಬಂದೂ
ಸುಮ್ಮಗುಳಿಯುವುದೆಂದರೆ..

ADVERTISEMENT

ಗಂಧದ ಕೊರಡು ತೇದಂತೆ
ನವೆದು ಘಮಲು ಬಿಡುವುದು
ಕಾಡುಮಲ್ಲಿಗೆ ಉದುರಿ ಹೋದಂತೆ
ಒಣಗುವುದು ಕಡು ಕಂಪಿನ ಸಂಪಿಗೆ
ಯಾಗಿ ಸುಖ ಕೊಡುವುದು ಇಲ್ಲವೇ
ತಾಳೆ ಹೂವಾಗಿ ವಿಷದ ಹಾವಿನ
ಹೆಡೆಯ ಆಶ್ರಯದಲಿ ಉಳಿಯುವುದು

ಈ ಲೋಕಕ್ಕೆ ಬಂದೂ
ನಮ್ಮಂತೆ ಆಗಿ ಹೋಗುವುದೆಂದರೆ...

ಸದಾ ಪೂರ್ವನೆಲೆಯ ಕೆಂಪಿಗನಂತೆ
ಹಾದಿ ತಪ್ಪದ ನಡೆಯಾಗಿ, ಶಶಿಯುದರದ
ಬೆಳಕಾಗಿ, ತಿರುವುತ್ತಾ ತಿರುವುತ್ತಾ
ಬೆಟ್ಟಗುಡ್ಡ ಉದುರಿಸದೇ ಕಡಲ ನೀರು
ತುಳುಕಿಸದೇ ದುಂಡಾಗಿ ಬದುಕುಳಿವ
ಭುವಿಯ ಪಾಲಿನ ಭಾರವಾಗಿ ಕೊನೆಗೊಮ್ಮೆ
ಬೂದಿಯೋ ಮಣ್ಣೋ ಅಂತೆ ಹಗುರಾಗಿ
ಒಂದಾಗಿ ಆಗಿಹೋಗುವುದು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.