ADVERTISEMENT

ಸದ್ಗುರು ರಚಿತ ಕಲಾಕೃತಿ ₹ 2.3 ಕೋಟಿಗೆ ಹರಾಜು

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 19:01 IST
Last Updated 27 ಜನವರಿ 2021, 19:01 IST
ಸದ್ಗುರು ಅವರು ರಚಿಸಿರುವ ‘ಸಿರ್ಕಾ 2020’ ಕಲಾಕೃತಿ.
ಸದ್ಗುರು ಅವರು ರಚಿಸಿರುವ ‘ಸಿರ್ಕಾ 2020’ ಕಲಾಕೃತಿ.   

ಬೆಂಗಳೂರು: ಈಶ ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಅವರು ರಚಿಸಿದ ‘ಸಿರ್ಕಾ 2020’ ವರ್ಣಚಿತ್ರವು ₹ 2.3 ಕೋಟಿಗೆ ಹರಾಜಾಗಿದ್ದು, ಆ ಹಣವನ್ನು ಫೌಂಡೇಷನ್‌ನ ಕೋವಿಡ್‌ ಪರಿಹಾರ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ.

ಇದು ಸದ್ಗುರು ಅವರ ಮೂರನೇ ವರ್ಣ ಚಿತ್ರವಾಗಿದೆ. ಇದನ್ನು ಆನ್‌ಲೈನ್‌ ವೇದಿಕೆಯಲ್ಲಿ ಹರಾಜು ಕರೆಯಲಾಗಿತ್ತು. ಅವರ ಮೊದಲ ಕಲಾಕೃತಿ ‘ಟು ಲಿವ್ ಟೋಟಲಿ’ ಅಮೂರ್ತ ತೈಲ ವರ್ಣ ಚಿತ್ರವು ₹ 4.14 ಕೋಟಿಗೆ ಹರಾಜಾಗಿತ್ತು. ಎರಡನೇ ಕಲಾಕೃತಿ ‘ಭೈರವ’ ₹ 5.1 ಕೋಟಿಗೆ ಹರಾಜಿನಲ್ಲಿ ಮಾರಾಟವಾಗಿತ್ತು. ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ನಿಂತಿರುವ ಈಶ ಫೌಂಡೇಷನ್, ‘ವೈರಾಣುವನ್ನು ಹೊಡೆದೋಡಿಸಿ’ ಎಂಬ ಅಭಿಯಾನ ನಡೆಸುತ್ತಿದೆ.

ಈ ಅಭಿಯಾನದಡಿ ವಿವಿಧ ವರ್ಗದವರಿಗೆ ಫೌಂಡೇಷನ್ ನೆರವು ಒದಗಿಸುತ್ತಿದೆ. ಆರೋಗ್ಯ ಸಿಬ್ಬಂದಿಗೆ ವೈದ್ಯಕೀಯ ಪರಿಕರಗಳು, ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ರಕ್ಷಣಾ ಕವಚಗಳು, ಆಸ್ಪತ್ರೆಗಳ ವಾರ್ಡ್‌ಗಳಲ್ಲಿ ಅಗತ್ಯ ಸೌಕರ್ಯ ಒದಗಿಸುವುದು, ಜನಸಾಮಾನ್ಯರಿಗೆ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಅಗತ್ಯವಿರುವ ಪಾನೀಯಗಳ ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ADVERTISEMENT

‘ಗ್ರಾಮೀಣ ಜನತೆಗೆ ಪೌಷ್ಟಿಕ ಆಹಾರ ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಪ್ರತಿನಿತ್ಯ ಸಾವಿರಾರು ಮಂದಿಯನ್ನು ತಲುಪುತ್ತಿದ್ದೇವೆ. ಆಹಾರ ಒದಗಿಸಲು ಬೇಕಾದ ಹಣವನ್ನು ಕಲಾಕೃತಿಗಳ ಹರಾಜಿನಿಂದ ಸಂಗ್ರಹಿಸುತ್ತಿದ್ದೇವೆ. ಯಾರೇ ದೇಣಿಗೆ ನೀಡಿದರೂ ‘ವೈರಾಣು ಹೊಡೆದೊಡಿಸಿ ಅಭಿಯಾನ’ಕ್ಕೆ ಬಳಸಿಕೊಳ್ಳಲಾಗುತ್ತದೆ’ ಎಂದು ಸದ್ಗುರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.