ನವದೆಹಲಿ: ಹಳೆಯ ವಾಹನ ಗುಜರಿಗೆ ಹಾಕಿ, ಹೊಸ ವಾಹನ ಖರೀದಿಸಲು ಆಲೋಚಿಸುತ್ತಿರುವವರಿಗೆ ಒಳ್ಳೆಯ ಸುದ್ದಿಯೊಂದು ಇಲ್ಲಿದೆ. ಗುಜರಿ ನೀತಿಯ ಅಡಿಯಲ್ಲಿ, ಹಳೆಯ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿ ಮಾಡುವವರಿಗೆ ಆಟೊಮೊಬೈಲ್ ಕಂಪನಿಗಳು ಶೇಕಡ 5ರಷ್ಟು ರಿಯಾಯಿತಿ ನೀಡಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ವಾಹನಗಳನ್ನು ಸ್ವಇಚ್ಛೆಯಿಂದ ಗುಜರಿಗೆ ಹಾಕುವ ನೀತಿಯನ್ನು ಈ ಬಾರಿಯ ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಈ ನೀತಿಯು ದೇಶದ ಆಟೊಮೊಬೈಲ್ ಉದ್ಯಮದ ಪಾಲಿಗೆ ವರವಾಗಿ ಪರಿಣಮಿಸಲಿದೆ, ಇದು ದೇಶದ ಅತ್ಯಂತ ಲಾಭದಾಯಕ ಉದ್ಯಮ ವಲಯಗಳಲ್ಲಿ ಒಂದಾಗಲಿದೆ, ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ ಎಂದೂ ಗಡ್ಕರಿ ಹೇಳಿದ್ದಾರೆ.
ಆಟೊಮೊಬೈಲ್ ಉದ್ಯಮದ ವಾರ್ಷಿಕ ವಹಿವಾಟು ಈಗ ₹ 4.5 ಲಕ್ಷ ಕೋಟಿ ಇದ್ದು, ಈ ನೀತಿಯ ಕಾರಣದಿಂದಾಗಿ ಮುಂದಿನ ವರ್ಷಗಳಲ್ಲಿ ವಹಿವಾಟಿನ ಮೊತ್ತವು ₹ 10 ಲಕ್ಷ ಕೋಟಿಗೆ ಹೆಚ್ಚಳ ಆಗಬಹುದು ಎಂದು ಸಚಿವರು ಅಂದಾಜಿಸಿದ್ದಾರೆ.
ಹೊಸ ನೀತಿಯ ಪರಿಣಾಮವಾಗಿ ₹ 10 ಸಾವಿರ ಕೋಟಿಯಷ್ಟು ಹೂಡಿಕೆ ಆಗಲಿದೆ, 50 ಸಾವಿರ ಉದ್ಯೋಗ ಸೃಷ್ಟಿ ಕೂಡ ಆಗಲಿದೆ ಎಂದು ಗಡ್ಕರಿ ಅಂದಾಜು ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.