ADVERTISEMENT

ಕೂದಲು ಉದುರುತ್ತಿದೆಯೇ? ಹೀಗೆ ಮಾಡಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 14:02 IST
Last Updated 7 ಜುಲೈ 2020, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೂದಲು ಉದುರುವುದು ಇಂದಿನ ಬಹುತೇಕ ಮಂದಿ ಎದುರಿಸುತ್ತಿರುವ ಸಮಸ್ಯೆ. ಕಲುಷಿತ ನೀರು, ಮಲೀನ ವಾತಾವರಣ ಕೂದಲಿನ ಸಮಸ್ಯೆಗೆ ಮುಖ್ಯ ಕಾರಣ. ಹಾಗಂತ ಸಿಕ್ಕ ಸಿಕ್ಕ ಎಣ್ಣೆ, ಶ್ಯಾಂಪೂಗಳನ್ನು ಬಳಸುವುದು ಸೂಕ್ತವಲ್ಲ. ರಾಸಾಯನಿಕ ಮಿಶ್ರಿತ ಎಣ್ಣೆ, ಶ್ಯಾಂಪೂಗಳು ಕೂದಲಿಗೆ ಇನ್ನಷ್ಟು ಹಾನಿ ಮಾಡಬಹುದು. ಅಲ್ಲದೇ ದೂಮಪಾನ ಮಾಡುವುದು, ಒತ್ತಡ, ಕೂದಲಿನ ಅಸಮರ್ಪಕ ಬೆಳವಣಿಗೆ, ಪೌಷ್ಟಿಕಾಂಶ ರಹಿತ ಆಹಾರಗಳ ಸೇವನೆ ಇವು ಕೂಡ ಕೂದಲು ಉದುರಲು ಕಾರಣವಾಗಬಹುದು. ಸಮತೋಲಿತ ಆಹಾರ ಸೇವನೆ, ವ್ಯಾಯಾಮ ಹಾಗೂ ದುಶ್ಚಟಗಳನ್ನು ತ್ಯಜಿಸುವ ಜೊತೆಗೆ ಕೆಲವೊಂದು ಆಯುರ್ವೇದದ ಗಿಡಮೂಲಿಕೆಗಳು ಕೂಡ ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತವೆ.

ರೋಸ್ಮರಿ

ಕೂದಲಿನ ರಕ್ಷಣೆಯಲ್ಲಿ ರೋಸ್ಮರಿ ಪಾತ್ರ ಬಹಳ ಪ್ರಮುಖವಾದದ್ದು. ವಾರದಲ್ಲಿ ಮೂರು ಬಾರಿ ಇದನ್ನು ಬಳಸುವುದರಿಂದ ಹೊಸ ಕೂದಲು ಬೆಳೆಯಲು ಸಹಕರಿಸುತ್ತದೆ. ಕೂದಲು ಉದುರುವುದನ್ನು ತಪ್ಪಿಸಲು ಒಂದು ಕಪ್‌ಗೆ 10 ಹನಿ ರೋಸ್ಮರಿ ಎಣ್ಣೆ ಹಾಗೂ 3 ಟೇಬಲ್‌ ಚಮಚ ತೆಂಗಿನೆಣ್ಣೆ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಹಚ್ಚಬೇಕು. ಅರ್ಧಗಂಟೆ ಬಿಟ್ಟು ತಲೆಸ್ನಾನ ಮಾಡಬೇಕು. ಇದರಿಂದ ಕೂದಲು ಉದುರುವುದು ಬೇಗನೆ ನಿಲ್ಲುತ್ತದೆ.

ADVERTISEMENT

ಜಿನ್ಸೆಂಗ್‌

ಜಿನ್ಸೆಂಗ್ ಬೇರು ಪರಿಚಲನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಕೂದಲಿನ ಕಿರುಚೀಲಗಳಿಗೆ ಬೇಕಾಗುವ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಇದರ ಬಳಕೆಯಿಂದ ಕೂದಲು ಉದುರುವುದು ನಿಲ್ಲುತ್ತದೆ. ಒಂದು ಪಾತ್ರೆಗೆ ಎಣ್ಣೆ ಹಾಕಿ ಅದರಲ್ಲಿ ಜಿನ್ಸೆಂಗ್ ಬೇರು ಹಾಕಿ ಚೆನ್ನಾಗಿ ಕುದಿಸಿ. ನಂತರ ಸೋಸಿ ಆ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಿಮ್ಮ ಸಂಪೂರ್ಣ ಕೂದಲಿಗೆ ಎಣ್ಣೆ ಹಿಡಿದಿರಬೇಕು. 1 ಗಂಟೆ ಬಿಟ್ಟು ಶ್ಯಾಂಪೂ ಬಳಸಿ ತಲೆಸ್ನಾನ ಮಾಡಿ. ಇದರಿಂದ ಕೂದಲು ಉದುರುವುದು ಆದಷ್ಟು ಬೇಗ ಕಡಿಮೆಯಾಗುತ್ತದೆ. ‌

ಬೇವು

ಕೂದಲು ಉದುರುವುದು ಹಾಗೂ ತಲೆಹೊಟ್ಟಿನ ಸಮಸ್ಯೆಗೆ ಬೇವು ಅತ್ಯಂತ ಉತ್ತಮ ಆಯುರ್ವೇದ ಔಷಧಿ. ಇದನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ರಕ್ತಸಂಚಲನ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಬಾಲನೆರೆ, ಕೂದಲು ಉದುರಿ ತೆಳ್ಳಗಾಗುವುದನ್ನು ಇದು ತಪ್ಪಿಸುತ್ತದೆ. ನೀರಿನಲ್ಲಿ ಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ ಅದರ ನೀರನ್ನು ಕೂದಲ ಬುಡಕ್ಕೆ ಹಚ್ಚಿ ಒಣಗಿದ ಮೇಲೆ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಅಲ್ಲದೇ ಕೂದಲ ಬೆಳವಣಿಗೆಯೂ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.