ಬೆಂಗಳೂರು: ಭಾರಿ ಪ್ರಮಾಣದ ವಿತ್ತೀಯ ಕೊರತೆಯನ್ನು ಹೊಂದಿರುವ ಕೇಂದ್ರ ಸರ್ಕಾರದ ಬಜೆಟ್, ದೇಶದ ಜನರ ಶೋಷಣೆಗೆ ಕಾರಣವಾಗಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ‘2021ರಲ್ಲಿ ಶೇಕಡ 9.5 ಮತ್ತು 2022ರಲ್ಲಿ ಶೇ 6.8ರಷ್ಟು ವಿತ್ತೀಯ ಕೊರತೆ ಇರಲಿದೆ ಎಂದು ವಿತ್ತ ಸಚಿವೆ ಪ್ರಕಟಿಸಿದ್ದಾರೆ. ಈ ಕೊರತೆಯನ್ನು ತುಂಬಲು ಸರ್ಕಾರ ಬ್ಯಾಂಕ್ಗಳ ಸಂಪನ್ಮೂಲಕ್ಕೆ ಕೈ ಹಾಕುತ್ತದೆ. ಅದು ಜನರ ಶೋಷಣೆಗೆ ಕಾರಣವಾಗುತ್ತದೆ’ ಎಂದಿದ್ದಾರೆ.
ಕೃಷಿ ಸೆಸ್ ಹಣವನ್ನು ಹೇಗೆ ಬಳಸಲಾಗುತ್ತದೆ ಎಂಬ ಉಲ್ಲೇಖವೇ ಇಲ್ಲ. ₹ 12 ಲಕ್ಷ ಕೋಟಿ ಸಾಲ ಪಡೆಯುವ ಪ್ರಸ್ತಾವವಿದ್ದು, ಅದಕ್ಕೆ ಸಮರ್ಥನೆಗಳನ್ನೇ ಒದಗಿಸಿಲ್ಲ. ದೇಶದ 130 ಕೋಟಿ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವುದಕ್ಕೆ ಅನುದಾನವನ್ನೇ ಒದಗಿಸಿಲ್ಲ. ಈ ಕುರಿತು ಬಣ್ಣನೆಯ ಮಾತುಗಳಷ್ಟೇ ಬಜೆಟ್ನಲ್ಲಿ ಇವೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಎಲ್ಲ ದರಗಳನ್ನೂ ಏರಿಸಿರುವ ಕೇಂದ್ರ ಸರ್ಕಾರ, ‘ಆತ್ಮನಿರ್ಭರ ಭಾರತ’ ರೂಪಿಸುವ ಬಜೆಟ್ ಎಂಬುದಾಗಿ ಆತ್ಮವಂಚನೆಯ ಮಾತುಗಳನ್ನಾಡುತ್ತಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.