ಬೆಂಗಳೂರು: ‘ಮನಸ್ಸಿನ ಮೇಲೆ ಹಿಡಿತ ಕಳೆದುಕೊಂಡು ಏನೇನೋ ಮಾತನಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವೇ ಕಾಯಂ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸೋಮವಾರ ಬಜೆಟ್ ಮಂಡಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಜೆಟ್ ಮಂಡನೆಯ ಸಂದರ್ಭದಲ್ಲಿ ವಿರೋಧ ಪಕ್ಷದವರು ಪ್ರತಿಭಟನೆ ನಡೆಸುವುದು, ಸಭಾತ್ಯಾಗ ಮಾಡುವುದು ಇತಿಹಾಸದಲ್ಲಿ ಯಾವತ್ತೂ ನಡೆದಿಲ್ಲ’ ಎಂದು ಅಸಮಾಧಾನ
ವ್ಯಕ್ತಪಡಿಸಿದರು.
‘ಮುಂದಿನ ಚುನಾವಣೆಯಲ್ಲೂ 130ರಿಂದ 135 ಸ್ಥಾನಗಳನ್ನು ಗೆಲ್ಲಿಸಿ, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವೆ. ಇವರು ಕಾಯಂ ವಿರೋಧ ಪಕ್ಷದ ಸ್ಥಾನದಲ್ಲೇ ಕುಳಿತಿರಬೇಕು. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ’ ಎಂದು ಸವಾಲು ಹಾಕಿದರು.
ಸಿ.ಡಿ ವಿಚಾರದಲ್ಲಿ ಮೊದಲು ಚರ್ಚೆಗೆ ಬರಲಿ. ಸೂಕ್ತ ಸಲಹೆ ನೀಡಲಿ. ಅದನ್ನು ಬಿಟ್ಟು ನೈತಿಕತೆ ಎಂದು ಏನೇನೋ ಮಾತನಾಡುವುದು ಸರಿಯಲ್ಲ. ಅಗತ್ಯವಿದ್ದರೆ ಯಾವುದೇ ತನಿಖೆಗೂ ಆದೇಶಿಸಲು ಸಿದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಂದು ನಯಾ ಪೈಸೆಯಷ್ಟು ತೆರಿಗೆಯನ್ನೂ ಯಾರ ಮೇಲೂ ಹೇರಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರ ದೇಶದಲ್ಲೇ ಕಡಿಮೆ ಇರುವುದು ಕರ್ನಾಟಕದಲ್ಲಿ. ಆದ್ದರಿಂದ ಮತ್ತೆ ತೆರಿಗೆ ಕಡಿಮೆ ಮಾಡುವ ಪ್ರಮೇಯವೇ ಇಲ್ಲ. ವಿವಿಧ ಸಮುದಾಯಗಳ ನಿಗಮಗಳಿಗೆ ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಲು ಸಿದ್ಧ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.