ನವದೆಹಲಿ: ಒಂದೇ ಬ್ಯಾಂಕ್ನಲ್ಲಿ ಪಿಂಚಣಿ ಆದಾಯ ಮತ್ತು ಸ್ಥಿರ ಠೇವಣಿಯನ್ನು ಹೊಂದಿರುವ 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡಲಾಗಿದೆ.
ದೇಶದ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ 75 ವರ್ಷ ಮತ್ತು ಹೆಚ್ಚಿನ ವಯೋಮಾನದ ಹಿರಿಯ ನಾಗರಿಕರ ಮೇಲೆ ಹೊರೆ ಕಡಿಮೆ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದರು.
'ಪಿಂಚಣಿ ಮತ್ತು ಸ್ಥಿರ ಠೇವಣಿ ಬಡ್ಡಿಯ ಮೂಲಕ ಆದಾಯ ಪಡೆಯುತ್ತಿರುವ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಿಂದ (ಐಟಿಆರ್) ವಿನಾಯಿತಿ ನೀಡುವ ಪ್ರಸ್ತಾಪ ಮಾಡುತ್ತಿದ್ದೇನೆ. ಅವರ ಆದಾಯಕ್ಕೆ ತಕ್ಕಂತೆ ಬ್ಯಾಂಕ್ ತೆರಿಗೆ ಕಡಿತಗೊಳಿಸುತ್ತದೆ' ಎಂದು ತಿಳಿಸಿದರು.
ಬಡ್ಡಿಯ ಮೂಲಕ ಆದಾಯ ಪಡೆಯುತ್ತಿರುವ ಬ್ಯಾಂಕ್ ಮತ್ತು ಪಿಂಚಣಿ ಪಡೆಯುವ ಬ್ಯಾಂಕ್ ಎರಡೂ ಒಂದೇ ಆಗಿದ್ದಲ್ಲಿ ಮಾತ್ರವೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ಸಿಗಲಿದೆ ಎಂದು ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದರು.
ಪಿಂಚಣಿ ಮತ್ತು ಸ್ಥಿತ ಠೇವಣಿ ಬಡ್ಡಿಯ ಮೂಲಕ ಪಡೆಯುವ ಆದಾಯದ ಹೊರತಾಗಿ ಇತರೆ ಮೂಲದಿಂದ ಆದಾಯವಿದ್ದರೆ, ಐಟಿಆರ್ ಸಲ್ಲಿಸಬೇಕಾಗುತ್ತದೆ ಎಂದರು.
ಹಲವು ವಸ್ತುಗಳ ಮೇಲೆ ಕೃಷಿ ಸೆಸ್ ವಿಧಿಸಲಾಗುತ್ತಿದ್ದರೂ ಅದರಿಂದ ಗ್ರಾಹಕರಿಗೆ ಹೊಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.