ಬೆಂಗಳೂರು: ಈ ಬಾರಿಯ ಬಜೆಟ್ ವಿವಿಧ ಕ್ಷೇತ್ರದಲ್ಲಿ ಅನುದಾನ ಒದಗಿಸುವ ಮೂಲಕ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಹೊಂದಿದೆ. ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಈ ಆರ್ಥಿಕ ವರ್ಷದ ಬಜೆಟ್ ಮಂಡಿಸುತ್ತಿದ್ದು, ಕೋವಿಡ್ ಸಮಸ್ಯೆಯಿಂದ ಕುಗ್ಗಿಹೋಗಿರುವ ದೇಶದ ಆರ್ಥಿಕತೆಗೆ ಉತ್ತಮ ಅನುದಾನ ಒದಗಿಸುವ ಯೋಚನೆ ಹೊಂದಿದ್ದಾರೆ. ಅಲ್ಲದೆ, ಈ ಬಜೆಟ್ನಲ್ಲಿ ಯಾವ ಕ್ಷೇತ್ರಗಳಿಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ ಎನ್ನುವುದನ್ನು ವಿವರಿಸಿದ್ದಾರೆ.
ಆರೋಗ್ಯ ಮತ್ತು ಸೌಖ್ಯತೆ, ಭೌತಿಕ ಮತ್ತು ಆರ್ಥಿಕ ಬಂಡವಾಳ, ಮೂಲಸೌಕರ್ಯ, ಸಮಗ್ರ ಅಭಿವೃದ್ಧಿ ಯೋಜನೆ, ಮಾನವ ಬಂಡವಾಳ ಹೂಡಿಕೆ, ಅನ್ವೇಷಣೆ ಮತ್ತು ಆರ್ ಆ್ಯಂಡ್ ಡಿ, ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತ ಎನ್ನುವ ಅಂಶಗಳನ್ನು ಈ ಬಜೆಟ್ನಲ್ಲಿ ಪ್ರಮುಖವಾಗಿ ಆದ್ಯತೆ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಹಣಕಾಸು ಹೂಡಿಕೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಕೋವಿಡ್ ಬಳಿಕ ಆರೋಗ್ಯ, ನೈರ್ಮಲ್ಯ ಹಾಗೂ ಮೂಲಸೌಕರ್ಯ ಯೋಜನೆಯನ್ನು ಆದ್ಯತೆಯಲ್ಲಿ ಪರಿಗಣಿಸಲಾಗುತ್ತಿದೆ.
ಜತೆಗೆ ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಾಸ್ಥ ಭಾರತ ಯೋಜನೆ ಘೋಷಿಸಲಾಗಿದ್ದು, ₹64,180 ಕೋಟಿ ಮೀಸಲಿರಿಸಲಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಗರಿಷ್ಠ ಉತ್ತೇಜನ ನೀಡಲು ಮುಂದಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.