ADVERTISEMENT

ದೂರ ದೃಷ್ಟಿಯಿಲ್ಲದ ಬಜೆಟ್, ದೇಶ ಮಾರುವುದೇ ಇದರ ಉದ್ದೇಶ: ಟಿಎಂಸಿ

ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಡೆರೇಕ್ ಒಬ್ರಿಯಾನ್

ಪಿಟಿಐ
Published 1 ಫೆಬ್ರುವರಿ 2021, 10:39 IST
Last Updated 1 ಫೆಬ್ರುವರಿ 2021, 10:39 IST
ಡೆರೇಕ್ ಒಬ್ರಿಯಾನ್
ಡೆರೇಕ್ ಒಬ್ರಿಯಾನ್   

ನವದೆಹಲಿ: ‘ಇದು ನೂರಕ್ಕೆ ನೂರರು ದೂರದೃಷ್ಟಿ ಇಲ್ಲದ ಬಜೆಟ್‌. ದೇಶವನ್ನು‌ ಮಾರಾಟ ಮಾಡುವುದೇ ಈ ಬಜೆಟ್‌ನ ಪರಿಕಲ್ಪನೆ‘ – ಇದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೇಂದ್ರದ ಬಜೆಟ್‌ ಕುರಿತು ಪ್ರತಿಕ್ರಿಯಿಸಿರುವ ಪರಿ.

ಸಂಸತ್ತಿನಲ್ಲಿ ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ಗೆ ಪ್ರತಿಕ್ರಿಯಿಸಿದ ಟಿಎಂಸಿ ವಕ್ತಾರ ಡೆರೇಕ್ ಒಬ್ರಿಯನ್, ‘ಇದೊಂದು ನಕಲಿ ಬಜೆಟ್‌. ಇದರ ಉದ್ದೇಶ ದೇಶವನ್ನು ಮಾರುವುದು‘ ಎಂದು ಹೇಳಿದರು. ‘ಈಗಾಗಲೇ ರೈಲ್ವೆ, ವಿಮಾನನಿಲ್ದಾಣ, ಬಂದರು, ವಿಮಾ ಕಂಪನಿ ಮಾರಾಟವಾಗಿದೆ. ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳೂ ಮಾರಾಟವಾಗಿವೆ‘ ಎಂದು ಹೇಳಿದ್ದಾರೆ.

‘ಶ್ರೀಸಾಮಾನ್ಯ ಮತ್ತು ರೈತರನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ‘ ಎಂದು ದೂರಿದ ಒಬ್ರಿಯಾನ್, ‘ಈ ಬಜೆಟ್‌ ಬಡವರನ್ನು ಬಡವರಾಗಿಯೂ, ಶ್ರೀಮಂತರನ್ನು ಶ್ರೀಮಂತರನ್ನಾಗಿಯೂ ಮಾಡುತ್ತಿದ್ದು, ಮಧ್ಯಮವರ್ಗದವರಿಗೆ ಏನೂ ಇಲ್ಲದಂತೆ ಮಾಡಿದೆ‘ ಎಂದು ಆರೋಪಿಸಿದರು.

ADVERTISEMENT

ಇದೇ ವೇಳೆ ಪಶ್ಚಿಮ ಬಂಗಾಳ ಸರ್ಕಾರ ಗ್ರಾಮೀಣ ರಸ್ತೆಗಳನ್ನು ಹೇಗೆ ಅಭಿವೃದ್ಧಿ ಮಾಡಿದೆ ಎಂಬುದನ್ನು ರಾಜ್ಯಸಭಾ ಸದಸ್ಯರೂ ಆದ ಒಬ್ರಿಯಾನ್ ಹೀಗೆ ವಿವರಿಸಿದರು;

‘2011ರವರೆಗೆ 39705 ಕಿ.ಮೀ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. 2011–20ರ ಅವಧಿಯಲ್ಲಿ 88841 ಕಿ.ಮೀ ಉದ್ದದ ರಸ್ತೆಗಳು ಹಳ್ಳಿಗಳಲ್ಲಿ ಅಭಿವೃದ್ಧಿಯಾಗಿವೆ. ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಯಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

‘ಅಂದು ಪಶ್ಚಿಮ ಬಂಗಾಳ ಮಾಡಿದ ಅಭಿವೃದ್ಧಿ ಕಾರ್ಯವನ್ನು ಕೇಂದ್ರ ಸರ್ಕಾರ ಈಗ ಮಾಡುವುದಾಗಿ ಭರವಸೆ ನೀಡುತ್ತಿದೆ. ಈ ಬಜೆಟ್‌ನಲ್ಲಿ ಪಶ್ಚಿಮ ಬಂಗಾಳದಲ್ಲಿ 625 ಕಿ.ಮೀ ರಸ್ತೆ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದೆ. ಪಶ್ಚಿಮ ಬಂಗಾಳ ಸರ್ಕಾರ (2018–19) – 5111 ಕಿ.ಮೀ ಉದ್ದದಷ್ಟು ಹೊಸ ರಸ್ತೆಗಳನ್ನು ನಿರ್ಮಾಣ ಮಾಡಿದೆ. ದೇಶದಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರವಾಗಿ ಹೊರ ಹೊಮ್ಮಿದೆ. 2019–20ರಲ್ಲಿ ಹೆಚ್ಚುವರಿಯಾಗಿ 1165 ಕಿ.ಮೀ ಉದ್ದ ರಸ್ತೆ ನಿರ್ಮಾಣ ಮಾಡಿದೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.