ಮುಂಬೈ: ಮುಂಗಾರು ವಿಳಂಬ ಆಗಿರುವುದರಿಂದ ಹತ್ತಿ, ಸೋಯಾಬೀನ್, ಕಡಲೆ ಮತ್ತು ಬೇಳೆಕಾಳು ಬಿತ್ತನೆಗೆ ಹಿನ್ನಡೆಯಾಗಿದೆ. ಹೀಗಾಗಿ ಇಳುವರಿ ತಡವಾಗಲಿದೆ ಎಂದು ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್ಇಎ) ಹೇಳಿದೆ.
ಸೋಯಾಬೀನ್, ಬೇಳೆಕಾಳು ಮತ್ತು ಕಡಲೆ ಬಿತ್ತನೆ 8ರಿಂದ 10 ದಿನ ತಡವಾಗುವ ಅಂದಾಜು ಮಾಡಲಾಗಿದೆ. ಮುಂಗಾರು ಇನ್ನಷ್ಟು ವಿಳಂಬವಾದಲ್ಲಿ ರೈತರು ಬೇರೆ ಬೆಳೆಗಳನ್ನು ಬಿತ್ತನೆ ಮಾಡುವ ಸಾಧ್ಯತೆ ಇದೆ ಎಂದು ಎಸ್ಇಎನ ಕಾರ್ಯಕಾರಿ ನಿರ್ದೇಶಕ ಬಿ.ವಿ. ಮೆಹ್ತಾ ತಿಳಿಸಿದ್ದಾರೆ.
‘ಹತ್ತಿ ಬೆಳೆಯುವ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹತ್ತಿ ಬಿತ್ತನೆ ಎರಡು ವಾರಗಳವರೆಗೆ ತಡವಾಗಿದೆ. ಹಿಂದಿನ ವರ್ಷ ಜೂನ್ ಮೊದಲ ವಾರದಲ್ಲಿ ಮಳೆಯಾಗಿತ್ತು. ಆದರೆ ಈ ವರ್ಷ ಎರಡನೇ ವಾರ ಕಳೆದರೂ ಈ ರಾಜ್ಯಗಳಲ್ಲಿ ಮಳೆಯಾಗುತ್ತಿಲ್ಲ’ ಎಂದು ಹತ್ತಿ ಒಕ್ಕೂಟದ ಅಧ್ಯಕ್ಷ ಅತುಲ್ ಗಣಾತ್ರ ತಿಳಿಸಿದ್ದಾರೆ.
‘ಮುಂಗಾರು ವಿಳಂಬವಾದಷ್ಟೂ ಇಳುವರಿ ಸಿಗಲು ತಡವಾಗುತ್ತದೆ. ಸಾಮಾನ್ಯವಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಬೆಳೆ ಬರಲು ಆರಂಭವಾಗುತ್ತದೆ. ಆದರೆ, ಈ ಬಾರಿ ಅಕ್ಟೋಬರ್ನ ಮೂರನೇ ಅಥವಾ ನಾಲ್ಕನೇ ವಾರಕ್ಕೆ ಹೋಗಲಿದೆ. ಕಾರ್ಖಾನೆಗಳಿಗೆ ಹತ್ತಿ ಪೂರೈಕೆ ವಿಳಂಬವಾದರೆ, ಬೆಲೆಯಲ್ಲಿ ವ್ಯತ್ಯಾಸ ಆಗಬಹುದು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.