ADVERTISEMENT

ಇದೇ 25 ರಿಂದ ಬೆಂಗಳೂರಿನಲ್ಲಿ ಸಿಐಐ ನಾವೀನ್ಯ ಶೃಂಗಸಭೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 13:24 IST
Last Updated 19 ಆಗಸ್ಟ್ 2022, 13:24 IST
ಇದೇ 25 ರಿಂದ ಬೆಂಗಳೂರಿನಲ್ಲಿ ಸಿಐಐ ನಾವೀನ್ಯ ಶೃಂಗಸಭೆ
ಇದೇ 25 ರಿಂದ ಬೆಂಗಳೂರಿನಲ್ಲಿ ಸಿಐಐ ನಾವೀನ್ಯ ಶೃಂಗಸಭೆ   

ಬೆಂಗಳೂರು: ಭಾರತೀಯ ನಾವೀನ್ಯ ಶೃಂಗಸಭೆಯ18ನೇ ಆವೃತ್ತಿ ‘ಇನ್ನೋವರ್ಜ್‌–2022’ ಇದೇ 25ರಿಂದ ಮೂರು ದಿನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಶುಕ್ರವಾರ ತಿಳಿಸಿದೆ.

ಭಾರತೀಯ ಕೈಗಾರಿಕೆಗಳು ನಾವೀನ್ಯದ ಆಧಾರಲ್ಲಿ ಬೆಳವಣಿಗೆ ಸಾಧಿಸಿ, ಆ ಮೂಲಕ ಡಿಜಿಟಲ್ ಯುಗದಲ್ಲಿ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಈ ಶೃಂಗಸಭೆ ನೆರವಾಗಲಿದೆ ಎಂದು ಸಿಐಐ ಹೇಳಿದೆ.

‘ಶಿಕ್ಷಣ ಮತ್ತು ಕ್ರೀಡೆ ಈ ಬಾರಿಯ ಶೃಂಗದಲ್ಲಿ ಹೊಸದಾಗಿ ಸೇರ್ಪಡೆ ಆಗಿರುವ ವಿಷಯಗಳು. ಭವಿಷ್ಯದಲ್ಲಿ ಶಿಕ್ಷಣ ಮತ್ತು ಕೌಶಲವೃದ್ಧಿಯ ಕುರಿತು ಹಾಗೂ ಕ್ರೀಡೆಗಳಲ್ಲಿ ತಂತ್ರಜ್ಞಾನ ಆಧಾರಿತ ನಾವೀನ್ಯದ ಕುರಿತು ತಜ್ಞರು ಮಾತನಾಡಲಿದ್ದಾರೆ’ ಎಂದು ಸಿಐಐ ಕರ್ನಾಟಕದ ನಿರ್ಗಮಿತ ಅಧ್ಯಕ್ಷ ರಮೇಶ್‌ ರಾಮದುರೈ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಾಗತಿಕ ನಾವೀನ್ಯ ಕೇಂದ್ರವಾಗುವ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಭಾರತ ಹೊಂದಿದೆ. ಇದಕ್ಕಾಗಿ ಬಲಿಷ್ಠವಾದ ನಾವೀನ್ಯ ವ್ಯವಸ್ಥೆ ರೂಪಿಸಬೇಕಿದೆ. ಆ ಮೂಲಕ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಬೇಕು’ ಎಂದು ಸಿಐಐ ಮಾಜಿ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌ ಹೇಳಿದರು.

ಕರ್ನಾಟಕ ಸರ್ಕಾರವು ಈ ಸಭೆಯ ಪಾಲುದಾರ ಆಗಿದ್ದು, ರಾಜ್ಯದ ಐ.ಟಿ. ಮತ್ತು ಬಿ.ಟಿ. ಸಚಿವ ಸಿ.ಎನ್‌. ಅಶ್ವತ್ಥನಾರಾಯಣ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಅವರು ಶೃಂಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಿಐಐ ತಿಳಿಸಿದೆ.

ಸಿಐಐ ಉಪಾಧ್ಯಕ್ಷ ಕಮಲ್‌ ಬಾಲಿ, ಸಿಐಐ ಕರ್ನಾಟಕದ ಅಧ್ಯಕ್ಷ ಅರ್ಜುನ್‌ ಎಂ. ರಂಗ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.