ADVERTISEMENT

ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಲೀನಕ್ಕೆ ಕೇಂದ್ರ ಅಸ್ತು: ನಿರ್ಬಂಧ ತೆರವು

ಪಿಟಿಐ
Published 25 ನವೆಂಬರ್ 2020, 13:33 IST
Last Updated 25 ನವೆಂಬರ್ 2020, 13:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಕ್ಷ್ಮೀ ವಿಲಾಸ್ ಬ್ಯಾಂಕ್‌ಅನ್ನು (ಎಲ್‌ವಿಬಿ) ಸಿಂಗಪುರ ಮೂಲದ ಡಿಬಿಎಸ್‌ ಬ್ಯಾಂಕ್‌ ಜೊತೆ ವಿಲೀನ ಮಾಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಹೀಗಾಗಿ ಬ್ಯಾಂಕ್‌ ಖಾತೆದಾರರಿಗೆ ಹಣ ಹಿಂಪಡೆಯಲು ವಿಧಿಸಲಾಗಿದ್ದ ನಿರ್ಬಂಧ ತೆರವಾಗಿದೆ.

ಎಲ್‌ವಿಬಿ ಹಾಗೂ ಡಿಬಿಎಸ್‌ ವಿಲೀನಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ವರದಿಗಾರರಿಗೆ ತಿಳಿಸಿದ್ದಾರೆ. ಇದರಿಂದ 20 ಲಕ್ಷ ಖಾತೆದಾರರಿಗೆ ಮತ್ತು 4,000 ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

‘ಎಲ್‌ವಿಬಿ ಹಾಗೂ ಡಿಬಿಎಸ್‌ ವಿಲೀನಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೀಗಾಗಿ ಖಾತೆದಾರರು ಹಣ ಹಿಂಪಡೆಯಲು ಯಾವುದೇ ನಿರ್ಬಂಧ ಇರುವುದಿಲ್ಲ’ ಎಂದು ಅಧಿಕೃತ ವಕ್ತಾರರು ಟ್ವೀಟ್ ಮಾಡಿದ್ದಾರೆ.

ಬ್ಯಾಂಕ್‌ ಮೇಲೆ ನವೆಂಬರ್ 17ರಂದು ತಾತ್ಕಾಲಿಕ ನಿಷೇಧ ಹೇರಿದ್ದ ಸರ್ಕಾರವು ಖಾತೆದಾರರಿಗೆ ಹಣ ಹಿಂಪಡೆಯಲು ಗರಿಷ್ಠ ₹25,000 ಮಿತಿ ನಿಗದಿಪಡಿಸಿತ್ತು. ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಸಲಹೆ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.

ಕರ್ನಾಟಕದಲ್ಲಿ 60 ಶಾಖೆಗಳು:ಎಲ್‌ವಿಬಿ ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿ ಅನ್ವಯ, ಬ್ಯಾಂಕಿನ ಅರವತ್ತು ಶಾಖೆಗಳು ಕರ್ನಾಟಕದಲ್ಲಿ ಇವೆ. 2017ರ ಜುಲೈನಲ್ಲಿ ₹ 190ರಷ್ಟಿದ್ದ ಈ ಬ್ಯಾಂಕಿನ ಷೇರು ಮೌಲ್ಯವು ಈಗ ₹ 15.50ಕ್ಕೆ ಕುಸಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.