ನವದೆಹಲಿ: ಹಲವು ರಾಜ್ಯಗಳು ನಿಯಮ ರೂಪಿಸುವ ಕೆಲಸವನ್ನು ತ್ವರಿತವಾಗಿ ಮಾಡುತ್ತಿಲ್ಲದ ಕಾರಣ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಾಲಿ ಹಣಕಾಸು ವರ್ಷದಲ್ಲಿ ಅನುಷ್ಠಾನಕ್ಕೆ ತರುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿದೆ. ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿರುವುದು ಕೂಡ ಇದಕ್ಕೆ ಒಂದು ಕಾರಣ ಎನ್ನಲಾಗಿದೆ.
ಈ ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತಂದರೆ ನೌಕರರಿಗೆ ಕೈಗೆ ಸಿಗುವ ವೇತನದ ಮೊತ್ತ ಕಡಿಮೆ ಆಗುತ್ತದೆ, ಕಂಪನಿಗಳು ನೌಕರರ ಪಿ.ಎಫ್. ಖಾತೆಗೆ ಹೆಚ್ಚಿನ ಮೊತ್ತವನ್ನು ಕೊಡುಗೆಯಾಗಿ ನೀಡಬೇಕಾಗುತ್ತದೆ. ‘ಕೇಂದ್ರ ಕಾರ್ಮಿಕ ಸಚಿವಾಲಯವು ನಿಯಮಗಳನ್ನು ರೂಪಿಸಿ ಆಗಿದೆ. ಆದರೆ ರಾಜ್ಯಗಳ ಕಡೆಯಿಂದ ಈ ಕೆಲಸ ವೇಗವಾಗಿ ಆಗುತ್ತಿಲ್ಲ. ಅಲ್ಲದೆ, ರಾಜಕೀಯ ಕಾರಣಗಳಿಂದಾಗಿ ಈ ಸಂಹಿತೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರಕ್ಕೆ ಹೆಚ್ಚಿನ ಆಸಕ್ತಿ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸಂಸತ್ತು ಅನುಮೋದಿಸಿದೆ. ಇವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದಾದರೆ ಇವುಗಳಿಗೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಧಿಸೂಚನೆಯಲ್ಲಿ ಪ್ರಕಟಿಸಬೇಕು. ಈ ಸಂಹಿತೆಗಳು ಜಾರಿಗೆ ಬಂದರೆ ನೌಕರರ ಮೂಲವೇತನ ಲೆಕ್ಕಹಾಕುವ ಬಗೆಯಲ್ಲಿ ಬದಲಾವಣೆ ಆಗುತ್ತದೆ. ಒಟ್ಟು ವೇತನದ ಶೇಕಡ 50ರಷ್ಟು ಮೂಲವೇತನವೇ (ಮೂಲ ವೇತನ ಹಾಗೂ ಡಿ.ಎ.) ಆಗಿರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.