ADVERTISEMENT

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ; ಆದೇಶ ಹಿಂಪಡೆದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 4:39 IST
Last Updated 1 ಏಪ್ರಿಲ್ 2021, 4:39 IST
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌   

ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟಿಸಿದ್ದಾರೆ.

ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), ಪಿಪಿಎಫ್‌, ನಿಗದಿತ ಠೇವಣಿ, ಉಳಿತಾಯ ಖಾತೆ ಸೇರಿದಂತೆ ಬಹುತೇಕ ಎಲ್ಲ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಇಳಿಕೆ ಮಾಡಲಾಗಿತ್ತು. ಪರಿಷ್ಕೃತ ಬಡ್ಡಿ ದರಗಳು ಏಪ್ರಿಲ್‌ 1ರಿಂದ ಅನ್ವಯ ಆಗಲಿದ್ದು, ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ (2021ರ ಜೂನ್‌ 30ರವರೆಗೆ) ಜಾರಿಯಲ್ಲಿ ಇರಲಿವೆ ಎಂದು ಪ್ರಕಟಿಸಲಾಗಿತ್ತು.

ಸಣ್ಣ ಉಳಿತಾಯ ಯೋಜನೆಗಳ ಮೇಲೆ ಗರಿಷ್ಠ ಶೇ1.1ರವರೆಗೆ ಬಡ್ಡಿ ಇಳಿಕೆ ಮಾಡಲಾಗಿತ್ತು. ಗುರುವಾರ ಬೆಳಿಗ್ಗೆ ಟ್ವೀಟ್‌ ಮಾಡಿರುವ ನಿರ್ಮಲಾ ಸೀತಾರಾಮನ್‌, 'ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು 2020–21ರ ನಾಲ್ಕನೇ ತ್ರೈಮಾಸಿಕದಲ್ಲಿ, ಅಂದರೆ 2021ರ ಮಾರ್ಚ್‌ ವರೆಗೆ ಇದ್ದ ದರಗಳು ಮುಂದುವರಿಯಲಿವೆ' ಎಂದಿದ್ದಾರೆ.

ADVERTISEMENT

ಬಡ್ಡಿದರ ಪರಿಷ್ಕೃತಗೊಳಿಸಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ.

124 ತಿಂಗಳು ಇದ್ದ ಕಿಸಾನ್ ವಿಕಾಸ ಪತ್ರ ಹೂಡಿಕೆಯ ಅವಧಿಯನ್ನು 138 ತಿಂಗಳ ಅವಧಿಗೆ ಹೆಚ್ಚಿಸಲಾಗಿತ್ತು. ಹಿರಿಯ ನಾಗರಿಕರ 5 ವರ್ಷಗಳ ಉಳಿತಾಯ ಯೋಜನೆಯ ಮೇಲಿನ ಬಡ್ಡಿ ಶೇ 0.9ರಷ್ಟು ಇಳಿಕೆ ಮಾಡಲಾಗಿತ್ತು ಹಾಗೂ ಪಿಪಿಎಫ್‌ ಬಡ್ಡಿ ದರ ಶೇ 6.4 ನಿಗದಿ ಮಾಡಲಾಗಿತ್ತು.

ಪರಿಷ್ಕರಿಸಲಾಗಿದ್ದ ಬಡ್ಡಿ ದರ ‍ಪಟ್ಟಿ ಇಲ್ಲಿದೆ–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.