ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ತಡೆಯಲು ಘೋಷಿಸಿರುವ ಲಾಕ್ಡೌನ್ನಿಂದಾಗಿ ಸಕ್ಕರೆ ಕಾರ್ಖಾನೆಗಳು ತೀವ್ರ ಸಂಕಷ್ವಕ್ಕೆ ಸಿಲುಕಿದ್ದು, ಕೂಡಲೇ ₹ 1,000 ಕೋಟಿ ಪ್ಯಾಕೇಜ್ ಪ್ರಕಟಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಮಾರ್ಚ್ 23ರಿಂದ ಜಾರಿ ಗೊಳಿಸಿರುವ ಲಾಕ್ಡೌನ್ನಿಂದ ಸಕ್ಕರೆ ಬಳಕೆ ತಗ್ಗಿದೆ. ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನವಾಗಿರುವ ಇಥೆನಾಲ್ ಕೂಡಾ ಮಾರಾಟವಾಗುತ್ತಿಲ್ಲ. ಇದರಿಂದ ಸಕ್ಕರೆ ಕಾರ್ಖಾನೆಗಳು ಸಂಕಷ್ಟಕ್ಕೆ ಸಿಕ್ಕಿವೆ ಎಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.
ಹೊಟೇಲ್ಗಳು ಮುಚ್ಚಿವೆ. ಸಿಹಿ ತಿನಿಸುಗಳನ್ನು ಮಾರುವ ಅಂಗಡಿಗಳು, ಬೇಕರಿಗಳು ಬಂದ್ ಆಗಿವೆ. ಐಸ್ ಕ್ರೀಂ ಪಾರ್ಲರ್ಗಳು ತೆರೆದಿಲ್ಲ. ಜನರ ಓಡಾಟದ ಮೇಲಿನ ನಿರ್ಬಂಧದಿಂದ ಪೆಟ್ರೋಲ್ಗೂ ಬೇಡಿಕೆ ಇಲ್ಲ. ಹೀಗಾಗಿ ಇಥೆನಾಲ್ ಮಾರಾಟವಾಗುತ್ತಿಲ್ಲ ಎಂದು ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷ ಹಾಗೂ ಪ್ರಭು ಸಕ್ಕರೆ ಕಾರ್ಖಾನೆ ಸಿಎಂಡಿ ಜಗದೀಶ್ ಗುಡಗುಂಟಿ ತಿಳಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳಿಂದ ಖರೀದಿಸು ತ್ತಿರುವ ವಿದ್ಯುತ್ಗೆ ಸಕಾಲಕ್ಕೆ ಹಣ ಪಾವತಿ ಮಾಡುತ್ತಿಲ್ಲ. ಈ ಕಾರಣಕ್ಕೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಹಣ ಕೊಡಲು ಪರದಾಡುವಂತಾಗಿದೆ. ಪ್ರಸಕ್ತ ಸಾಲಿನಲ್ಲಿ ರೈತರಿಗೆ ₹ 2000 ಕೋಟಿಗೂ ಅಧಿಕ ಹಣ ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಲಾಕ್ಡೌನ್ ಪರಿಣಾಮವಾಗಿ ಕರ್ನಾಟಕದಲ್ಲಿ ಶೇ 21.3 ಅಂದರೆ, 33.6 ಲಕ್ಷ ಟನ್ ಸಕ್ಕರೆ ಉತ್ಪಾದನೆ ಕಡಿಮೆ ಆಗಿದೆ. ರೈತರಿಗೆ ಬಾಕಿ ಪಾವತಿಸಲು ಹಾಗೂ ಕಾರ್ಖಾನೆಗಳ ನಿರ್ವಹಣೆಗಾಗಿ ₹ 1000 ಕೋಟಿ ಸುಲಭ ಸಾಲ ಒದಗಿಸಬೇಕು. ಇದಕ್ಕೆ ಸರ್ಕಾರ ಗ್ಯಾರಂಟಿ ಕೊಡಬೇಕು ಎಂದೂ ಕೇಳಲಾಗಿದೆ.
ರಾಜ್ಯದ 68 ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ವರ್ಷ 338 ಲಕ್ಷ ಟನ್ ಕಬ್ಬು ಅರೆದಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಾಲ್ಕು ಲಕ್ಷ ಟನ್ ಕಬ್ಬು ಅರಿದಿದ್ದವು ಎಂದೂ ಮನವಿಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.