ಬೆಂಗಳೂರು: ದೇಶದಲ್ಲಿ ಲಾಕ್ಡೌನ್ ಜಾರಿಯಾದ ಮೂರು ತಿಂಗಳಲ್ಲಿ ಜನ ಹಣ ಖರ್ಚು ಮಾಡುವುದನ್ನು ಕಡಿಮೆ ಮಾಡಿದರು, ಆ ಹಣ ಉಳಿಸಿ, ಬೇರೆ ಬೇರೆ ಕಡೆ ಹೂಡಿಕೆ ಮಾಡಿದರು ಎಂದು ಹೇಳಿತ್ತು ‘ಯುಬಿಎಸ್’ ಸಂಸ್ಥೆ. ಇದು ಪ್ರತಿ ತಿಂಗಳೂ ನಿಶ್ಚಿತ ಆದಾಯ ಇರುವ
ವರ ಮನೆಗಳ ಕಥೆಯಾಗಿತ್ತು.
ಇದನ್ನೂ ಓದಿ:ಹಣ ಉಳಿಸಿ, ಹಣ ನಿಮ್ಮನ್ನು ಉಳಿಸುತ್ತದೆ!
ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರೂ ತಮ್ಮ ಖರ್ಚುಗಳನ್ನು ತಗ್ಗಿಸಿ, ಅನಿಶ್ಚಿತ ಪರಿಸ್ಥಿಯನ್ನು ನಿಭಾಯಿಸಲು ಒಂದಿಷ್ಟು ಹಣ ಉಳಿತಾಯ ಮಾಡಲು ಆರಂಭಿಸಿರಬಹುದು ಎಂದು ಯುಬಿಎಸ್ ಹೇಳಿರುವುದಾಗಿ ವರದಿಯಾಗಿತ್ತು.
ಲಾಕ್ಡೌನ್ ಹಾಗೂ ಅದರ ಪರಿಣಾಮವಾಗಿ ಮೂಡಿದ ಆರ್ಥಿಕ ಅನಿಶ್ಚಿತ ತೆಯು ಜನರಲ್ಲಿ ಉಳಿತಾಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿರುವಂತಿದೆ ಎಂಬ ಅಭಿಪ್ರಾಯವನ್ನು ವೈಯಕ್ತಿಕ ಹಣಕಾಸು ಸಲಹೆಗಾರರೂ ವ್ಯಕ್ತಪಡಿಸಿ ದ್ದಾರೆ. ಉಳಿತಾಯದ ಮಹತ್ವವನ್ನು ಹೇಳಿರುವ ಜೊತೆಯಲ್ಲೇ ಈ ಸಂದರ್ಭವು ಆರೋಗ್ಯ ವಿಮೆಯ ಮಹತ್ವ ವನ್ನೂ ಜನರಿಗೆ ವಿವರಿಸಿದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ:ಸೂತ್ರಬದ್ಧ ಹೂಡಿಕೆ ಇರಲಿ
‘ಜನರಿಗೆ ತಮ್ಮ ಅಗತ್ಯಗಳು ಯಾವುವು, ಅಗತ್ಯಗಳನ್ನೂ ಮೀರಿದ ಆಸೆಗಳು ಯಾವುವು ಎಂಬುದನ್ನು ಈ ಸಾಂಕ್ರಾಮಿಕದ ಸಂದರ್ಭವು ಸ್ಪಷ್ಟವಾಗಿ ತಿಳಿಸಿದೆ. ಜನ ಈಗ ಉಳಿತಾಯ ಮಾಡುವುದನ್ನು ಹಾಗೂ ಹೂಡಿಕೆ ಮಾಡುವುದನ್ನು ಮೊದಲಿಗಿಂತ ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಮನೆಯಿಂದಲೇ ಕೆಲಸ ನಿರ್ವಹಿಸಲುಸಿಕ್ಕಿರುವ ಅವಕಾಶ ಕೆಲವರಿಗೆ ಹಣ ಉಳಿತಾಯ ಮಾಡಲು ನೆರ
ವಾಗುತ್ತಿದೆ’ ಎಂದು ಹೇಳುತ್ತಾರೆ ವೈಯ ಕ್ತಿಕ ಹಣಕಾಸು ಸಲಹೆಗಾರ ಬಸವರಾಜ ತೊಣಗಟ್ಟಿ. ಸಾಲ ಪಡೆಯುವಾಗ ಕೂಡ ಜನ ಮೊದಲಿಗಿಂತ ಹೆಚ್ಚು ಎಚ್ಚರ ವಹಿಸುತ್ತಿದ್ದಾರೆ ಎಂದೂ ಬಸವರಾಜ ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿ:ಕೋವಿಡ್ ಕಲಿಸಿದ ಪಾಠ
‘ಹಣ ಇಲ್ಲ. ಆದರೆ...’
ಜನರ ಕೈಯಲ್ಲಿ ಈಗ ಹೆಚ್ಚು ಹಣ ಇಲ್ಲ. ಆದರೆ, ಹಣದ ಚಲಾವಣೆ ಹೆಚ್ಚಾದ ತಕ್ಷಣ ಒಂದಿಷ್ಟು ಉಳಿತಾಯ ಮಾಡಬೇಕು ಎಂಬ ಧೋರಣೆಯು ಕೋವಿಡ್–19 ಬಿಕ್ಕಟ್ಟಿನ ಈ ಹೊತ್ತಿನಲ್ಲಿ ಜನರಲ್ಲಿ ಮೂಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಸಾಂಕ್ರಾಮಿಕವು ಹಣದ ಕುರಿತ ಗ್ರಹಿಕೆಗಳನ್ನು ಬದಲಾಯಿಸಿದೆ ಎಂದು ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು ಚಾರ್ಟರ್ಡ್ ಅಕೌಂಟೆಂಟ್ ವಿಶ್ವಾಸ್ ಪ್ರಭು.
ಇದನ್ನೂ ಓದಿ:ವೇತನ ಕಡಿತ ತೋರಿದ ಲಕ್ಷ್ಮಣರೇಖೆ
‘ಸಾಲ ಹಾಗೂ ಹೂಡಿಕೆ ಬಗ್ಗೆ ಜನ ಈಗ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಕಷ್ಟದ ಪರಿಸ್ಥಿತಿಗಳನ್ನು ನಿಭಾಯಿಸಲು ತಮ್ಮಿಂದ ಸಾಧ್ಯವೇ ಎಂಬ ಪ್ರಶ್ನೆಗಳನ್ನು ಅವರು ಈಗ ಕೇಳಿಕೊಳ್ಳುತ್ತಿದ್ದಾರೆ. ಕೈಯಲ್ಲಿ ಈಗಿರುವ ಕೆಲಸ ಮುಂದೆ ಇಲ್ಲವಾದರೆ, ಇರುವ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಅವರಲ್ಲಿರುವುದನ್ನು ನಾವು ಕಾಣಬಹುದು’ ಎಂದು ಹಣಕಾಸು ಸಲಹಾ ಸಂಸ್ಥೆ ‘ಪೇಇಟ್ ಫಾರ್ವರ್ಡ್’ನ ಸಹ ಸಂಸ್ಥಾಪಕಿ ಪ್ರೀತಾ ಹೇಳುತ್ತಾರೆ.
ಲಾಕ್ಡೌನ್ ಘೋಷಣೆ ಆದ ನಂತರ ಷೇರು ಮಾರುಕಟ್ಟೆ ಕುಸಿದುಬಿತ್ತು. ಆಗ ಹಲವರು ಭೀತಿಗೆ ಒಳಗಾಗಿ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿದ್ದ ಹಣವನ್ನು ತಕ್ಷಣಕ್ಕೆ ಹಿಂಪಡೆದರು. ಆದರೆ, ಮಾರುಕಟ್ಟೆ ಈಗ ಚೇತರಿಸಿಕೊಂಡಿದೆ. ಆಗ ಹಣ ಹಿಂಪಡೆದವರು ಈಗ ಮಾರುಕಟ್ಟೆ ದಾಖಲಿಸಿದ ಏರಿಕೆಯ ಲಾಭ ದಿಂದ ವಂಚಿತರಾದರು. ಹೂಡಿಕೆಯನ್ನು ಹಿಂಪಡೆಯು ವಾಗ ಅವಸರ ಸಲ್ಲದು ಎಂಬ ಪಾಠವನ್ನು ಮ್ಯೂಚುವಲ್ ಫಂಡ್ಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮಧ್ಯಮ ವರ್ಗದವರಿಗೆ ಈ ಸಂದರ್ಭವು ಕಲಿಸಿದೆ ಎನ್ನುತ್ತಾರೆ ಪ್ರೀತಾ.
ಫೆಬ್ರುವರಿ ನಂತರದಲ್ಲಿ ಠೇವಣಿ ಮೇಲಿನ ಬಡ್ಡಿ ದರ ಕಡಿಮೆ ಆಗುತ್ತಿದೆ. ಜನ ಈಗ ಹೆಚ್ಚು ಬಡ್ಡಿ ಅಥವಾ ಲಾಭ ತಂದುಕೊಡುವ ಹೂಡಿಕೆ ಅವಕಾಶಗಳನ್ನು ಅರಸುತ್ತ ಇದ್ದಾರೆ ಎಂದು ಪ್ರೈಮ್ಇನ್ವೆಸ್ಟರ್. ಇನ್ ಸಂಸ್ಥೆಯ ಸಹಸಂಸ್ಥಾಪಕಿ ವಿದ್ಯಾ ಬಾಲಾ ತಿಳಿಸಿದರು. ಜನರಲ್ಲಿ ಉಳಿತಾಯ ಹಾಗೂ ಹೂಡಿಕೆ ಪ್ರವೃತ್ತಿ ಇನ್ನಷ್ಟು ಹೆಚ್ಚಬೇಕು ಎಂಬುದು ಅವರ ಅಭಿಪ್ರಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.