ಮೈಸೂರು: ಸ್ಮಶಾನದ ಬಳಿಗೆ ಎಳೆದೊಯ್ದು 60 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದ ರವಿ ಅಲಿಯಾಸ್ ರವಿಚಂದ್ರ (42) ಎಂಬಾತನಿಗೆ ಅತ್ಯಾಚಾರ ಪ್ರಕರಣಗಳ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಜೈಲು ಹಾಗೂ ₹ 10,500 ದಂಡ ವಿಧಿಸಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಬಳಿ 2015ರ ಜ.14ರ ರಾತ್ರಿ ಈ ಕೃತ್ಯ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಪಿ.ಚಂದ್ರಶೇಖರ್, ಆರೋಪಿಯನ್ನು ತಪ್ಪಿತಸ್ಥನೆಂದು ಆದೇಶಿಸಿದ್ದರು. ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸಿದರು.
ದುಗ್ಗಲಮ್ಮ ದೇಗುಲಕ್ಕೆ ವೃದ್ಧೆ ಏಕಾಂಗಿಯಾಗಿ ತೆರಳಿದ್ದರು. ಊರಿಗೆ ಮರಳುವ ಹೊತ್ತಿಗೆ ಸಂಜೆಯಾಗಿತ್ತು. ಗ್ರಾಮಕ್ಕೆ ಸಾಗುವ ರಸ್ತೆಯಲ್ಲಿ ವಾಹನಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ನೂರಲಕುಪ್ಪೆಯ ರವಿಚಂದ್ರ ಸಿಕ್ಕಿದ್ದ. ಪರಿಚಯಸ್ಥನಾಗಿದ್ದ ಆರೋಪಿ ಮನೆಗೆ ತಲುಪಿಸುವುದಾಗಿ ಭರವಸೆ ನೀಡಿ ಕರೆದೊಯ್ದಿದ್ದ.
‘ಮಾರ್ಗ ಮಧ್ಯದ ಅಂತರಸಂತೆಯ ಸ್ಮಶಾನದ ಬಳಿ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದ. ತೀವ್ರವಾಗಿ ಬಳಲಿದ್ದ ಸಂತ್ರಸ್ತೆಯನ್ನು ಸಾರ್ವಜನಿಕರು ಮನೆಗೆ ಸೇರಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಸಂತ್ರಸ್ತೆ ಈ ವಿಷಯವನ್ನು ಮಕ್ಕಳಿಗೆ ತಿಳಿಸಿರಲಿಲ್ಲ. ನೋವಿನಿಂದ ನರಳುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಕೃತ್ಯ ಬೆಳಕಿಗೆ ಬಂದಿತ್ತು. ತನಿಖೆ ನಡೆಸಿದ ಬೀಚನಹಳ್ಳಿ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಸರ್ಕಾರದ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಮಹಾಂತಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.