ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನವೋದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯಾವುದೇ ಭದ್ರತೆ ಇಲ್ಲದೇ ಸಾಲಸೌಲಭ್ಯ ಮತ್ತು ತೆರಿಗೆ ವಿನಾಯಿತಿಯನ್ನು ಕಲ್ಪಿಸಿದ್ದು, ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸ್ಟಾರ್ಟ್ಅಪ್ ಯಾತ್ರಾ ಟೀಂನ ಪ್ರತಿನಿಧಿ ಅಮಿತ್ ಶರ್ಮಾ ಹೇಳಿದರು.
ನಗರದ ಗೋಕುಲ ರಸ್ತೆಯಲ್ಲಿರುವ ‘ಸ್ಯಾಂಡ್ಬಾಕ್ಸ್ ಸ್ಟಾರ್ಟ್ಅಪ್ಸ್’ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಸ್ಟಾರ್ಟ್ಅಪ್ಸ್ ಯಾತ್ರಾ’ದಲ್ಲಿ ಅವರು ಮಾತನಾಡಿದರು.
ಸ್ಟಾರ್ಟ್ಅಪ್ಸ್ಗೆ ಆಯ್ಕೆಯಾಗುವ ಮಹಿಳಾ ನವೋದ್ಯಮಿಗಳಿಗೆ ₹ 20 ಲಕ್ಷ ಹಾಗೂ ಪುರುಷರಿಗೆ ₹ 10 ಲಕ್ಷ ಸಾಲವನ್ನು ಒದಗಿಸಲಾಗುತ್ತದೆ. ಜೊತೆಗೆ ಮೂರು ವರ್ಷಗಳ ಕಾಲ ತೆರಿಗೆ ವಿನಾಯಿತಿ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಸಾಮಾಜಿಕ ಕಳಕಳಿ ಇರುವ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವನ್ನು ಸೃಜಿಸುವ ಸ್ಟಾರ್ಟ್ಅಪ್ಸ್ಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನವೋದ್ಯಮಿಗಳು ತಮ್ಮ ಯೋಜನೆಯ ವಿವರ ಮತ್ತು ಹೆಸರನ್ನು ಡಿಐಪಿಪಿ ಸ್ಟಾರ್ಟ್ಅಪ್ ಪೋರ್ಟಲ್ನಲ್ಲಿ ನೋಂದಾಯಿಸಬೇಕು. ಆಯ್ಕೆಯಾದರೆ ಸರ್ಕಾರದಿಂದ ಸಾಲಸೌಲಭ್ಯಗಳು ಲಭಿಸಲಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಯಾಂಡ್ ಬಾಕ್ಸ್ನ ಸಿಇಒ ಸಿ.ಎಂ. ಪಾಟೀಲ್, ನವೋದ್ಯಮದ ಕುರಿತು ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ದೇಶದ 20 ರಾಜ್ಯಗಳಲ್ಲಿ ‘ಸ್ಟಾರ್ಟ್ಅಪ್ಸ್ ಯಾತ್ರಾ’ವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಕರ್ನಾಟಕವೂ ಒಂದಾಗಿದೆ. ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಸ್ಟಾರ್ಟ್ಅಪ್ಸ್ ಯಾತ್ರಾ ನಡೆಯುತ್ತಿದೆ ಎಂದು ಹೇಳಿದರು.
68 ನವೋದ್ಯಮಿಗಳು ಭಾಗಿ
ಸ್ಯಾಂಡ್ಬಾಕ್ಸ್ ಸ್ಟಾರ್ಟ್ಅಪ್ಸ್ನಲ್ಲಿ ಹಮ್ಮಿಕೊಂಡಿದ್ದ ಸ್ಟಾರ್ಟ್ಅಪ್ಸ್ ಯಾತ್ರಾ ಸ್ಪರ್ಧೆಯಲ್ಲಿ ಜಿಲ್ಲೆಯ 68 ನವೋದ್ಯಮಿಗಳು ಪಾಲ್ಗೊಂಡಿದ್ದರು. ಅರ್ಹ ಸ್ಟಾರ್ಟ್ಅಪ್ಸ್ಗಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.