ADVERTISEMENT

ಶುದ್ಧ ತೆಂಗಿನ ಎಣ್ಣೆ; ನವೋದ್ಯಮದ ಸಾಧಕರು

​ಕೇಶವ ಜಿ.ಝಿಂಗಾಡೆ
Published 9 ಜೂನ್ 2020, 19:30 IST
Last Updated 9 ಜೂನ್ 2020, 19:30 IST
ನವೋದ್ಯಮದ ಸಹ ಸ್ಥಾಪಕರಾದ ಹರೀಶ್‌ ಗೌಡಾ ಮತ್ತು ಆಕಾಶ್‌ ಅನಂತ್‌
ನವೋದ್ಯಮದ ಸಹ ಸ್ಥಾಪಕರಾದ ಹರೀಶ್‌ ಗೌಡಾ ಮತ್ತು ಆಕಾಶ್‌ ಅನಂತ್‌   
""

ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಓದಿದ ಯುವಕರಿಬ್ಬರು ಸರ್ಕಾರಿ ಇಲ್ಲವೆ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರುವ ಬದಲಿಗೆ ಉದ್ಯಮಿಗಳಾಗಿ ಏನಾದರೂ ಹೊಸತನ್ನು ಮಾಡಬೇಕು ಎನ್ನುವ ತುಡಿತದಿಂದ ಸಣ್ಣದಾಗಿ ಆರಂಭಿಸಿದ್ದ ಶುದ್ಧ ತೆಂಗಿನ ಎಣ್ಣೆ ತಯಾರಿಸುವ ಎಸೆನ್ಸಿಯಲ್‌ ನೆಕ್ಟರ್‌ ಆಯಿಲ್‌ (Essentia* Nectar Oi*) ನವೋದ್ಯಮವು ಎರಡೇ ವರ್ಷಗಳಲ್ಲಿ ನೆಲೆ ಕಂಡುಕೊಂಡ ಯಶೋಗಾಥೆ ಇಲ್ಲಿದೆ.

ಹಾಸನ ಬಳಿಯ ಮೊಸಳೆಹೊಸಳ್ಳಿಯ ಹರೀಶ್‌ ಗೌಡಾ (30) ಮತ್ತು ಅವರ ಸ್ನೇಹಿತ ಆಕಾಶ್ ಅನಂತ್‌ (29) ಜತೆಯಾಗಿ ಶುದ್ಧ ತೆಂಗಿನ ಎಣ್ಣೆ (virgin coconut oi*) ತಯಾರಿಸುವ ಉದ್ದಿಮೆ ಆರಂಭಿಸಿ ಒಂದೊಂದೇ ಯಶಸ್ಸಿನ ಮೆಟ್ಟಿಲು ಏರುತ್ತಿದ್ದಾರೆ. ಮೆಕ್ಯಾನಿಕಲ್‌ ಪದವಿಯಿಂದ ವಿಮುಖರಾಗಿ ಕೃಷಿ ಉತ್ಪನ್ನದ ಉದ್ಯಮದ ಕಡೆಗೆ ಗಮನ ಹರಿಸಿ ಯಶಸ್ಸಿನ ಹೆಜ್ಜೆ ಹಾಕುತ್ತಿದ್ದಾರೆ. ಒಣಗಿದ ಕೊಬ್ಬರಿ (copra) ಮತ್ತು ತಾಜಾ ತೆಂಗಿನಕಾಯಿ (tender coconut) ಎರಡೂ ಬೇರೆ ಬೇರೆ. ಈ ನವೋದ್ಯಮವು ತೆಂಗಿನಕಾಯಿಯಿಂದ ಶುದ್ಧ ತೈಲ ತಯಾರಿಸುತ್ತಿದೆ.

ಶುದ್ಧ ತೆಂಗಿನ ಎಣ್ಣೆ

ಕಾಲೇಜ್‌ನಿಂದ ಹೊರ ಬಿದ್ದವರು ಸುಮ್ಮನೇ ಓಡಾಡಿಕೊಂಡು ಇದ್ದಾಗ ಅವರ ಕೈಗಳಿಗೆ ಕೆಲಸ ಕೊಡಿಸುವ ಇರಾದೆಯಿಂದ ಪಾಲಕರು ಆರಂಭಿಕ ದುಡಿಯುವ ಬಂಡವಾಳ ಒದಗಿಸಿ ಮಕ್ಕಳ ಸ್ಟಾರ್ಟ್‌ಅಪ್‌ ಕನಸಿಗೆ ಒತ್ತಾಸೆಯಾಗಿ ನಿಂತಿದ್ದರು. ಉದ್ಯಮ, ಮಾರುಕಟ್ಟೆ ತಂತ್ರಗಳ ಅ ಆ ಇ ಗೊತ್ತಿಲ್ಲದ ಯುವಕರಿಬ್ಬರು ಹಮ್ಮು ಬಿಮ್ಮು ಮನೆಯಲ್ಲಿಯೇ ಬಿಟ್ಟು ತೆಂಗು ಬೆಳೆಗಾರರು, ವ್ಯಾಪಾರಿಗಳ ಜತೆ ಬೆರೆತು ಮಾರುಕಟ್ಟೆಯ ಕೌಶಲ್ಯಗಳನ್ನೆಲ್ಲ ಕರಗತ ಮಾಡಿಕೊಂಡು ಶುದ್ಧ ತೆಂಗಿನಎಣ್ಣೆ ಉದ್ಯಮದ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ಹೊರಟಿದ್ದಾರೆ.

ADVERTISEMENT

ಸ್ವಿಟ್ಜರ್ಲೆಂಡ್‌ನಲ್ಲಿ ಎಂಬಿಎ ಮಾಡಿ ಮರಳಿದ್ದ ಆಕಾಶ್‌ ಅನಂತ್‌ ಜತೆ ಸೇರಿ ಹರೀಶ್‌ ಅವರು ಆರಂಭದಲ್ಲಿ ಕುಟುಂಬದ ದುಡ್ಡು ಮತ್ತು ಬ್ಯಾಂಕ್‌ ಸಾಲ ಸೇರಿ ₹ 60 ಲಕ್ಷ ಬಂಡವಾಳ ಹಾಕಿ ಈ ನವೋದ್ಯಮಕ್ಕೆ ಚಾಲನೆ ನೀಡಿದ್ದರು.

ತೋಟದ ಮನೆಯಲ್ಲಿ ಚಿಕ್ಕದಾಗಿ ನಡೆಯುತ್ತಿದ್ದ ಶುದ್ಧ ತೆಂಗಿನ ಎಣ್ಣೆ ತಯಾರಿಕೆಗೆ ಉದ್ಯಮ ಸ್ವರೂಪ ಕೊಟ್ಟು, ಮಾರುಕಟ್ಟೆ ವಿಸ್ತರಿಸಿ, ಮಧ್ಯವರ್ತಿಗಳ ಕಾಟ ತಪ್ಪಿಸಿ ತೆಂಗು ಬೆಳೆಗಾರರಿಂದ ನೇರವಾಗಿ ಖರೀದಿಸಿ ಅವರಿಗೂ ಹೆಚ್ಚು ಲಾಭ ಒದಗಿಸಿದ್ದಾರೆ. ಬಹೂಪಯೋಗಿ ಉತ್ಪನ್ನಕ್ಕೆ ಬೇರೆ, ಬೇರೆ ನಗರಗಳಿಂದಲೂ ಈಗ ಬೇಡಿಕೆ ಕುದುರುತ್ತಿದೆ.

ಆರಂಭದಲ್ಲಿ ಶುದ್ಧ ತೆಂಗಿನ ಎಣ್ಣೆ ತಯಾರಿಸುವ ಬಗ್ಗೆ ಅನೇಕರು ಕೊಂಕು ಮಾತು ಆಡಿದ್ದರು. ರಾಸಾಯನಿಕ ಬೆರೆಸುತ್ತಾರೆ. ಕಲಬೆರಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದಾಗ ಇವರು ತಮ್ಮ ಪ್ರಯತ್ನದಲ್ಲಿ ಸೋಲುವ ಭೀತಿಯಿಂದ ಕುಸಿದು ಹೋಗಿದ್ದರು. ಉದ್ದಿಮೆಯ ಹೊಸ ಪ್ರಯತ್ನದಲ್ಲಿ ಇಂತಹ ಅಡೆತಡೆಗಳೆಲ್ಲ ಸಾಮಾನ್ಯ. ಅಪಪ್ರಚಾರದಿಂದ ಧೃತಿಗೆಡಬೇಡಿ ಎಂದು ಹಿತೈಷಿಗಳು ಸಲಹೆ ನೀಡಿದ್ದರಿಂದ ದೃಢ ವಿಶ್ವಾಸದಿಂದ ಮುನ್ನಡೆದಿದ್ದರು.

ಈ ಉತ್ಪನ್ನಗಳಲ್ಲಿ ಕಲಬೆರಕೆ ಇದೆ ಎಂದು ಯಾರಾದರು ಸಾಬೀತುಪಡಿಸಿದರೆ ಕಾರ್ಖಾನೆಯನ್ನೇ ಅವರ ಹೆಸರಿಗೆ ಬರೆದುಕೊಡುವುದಾಗಿ ಸವಾಲು ಹಾಕಿದಾಗ ಸಂದೇಹವಾದಿಗಳು ಹಿಂದೆ ಸರಿದಿದ್ದರು. ಬಳಕೆದಾರರಿಗೂ ಕ್ರಮೇಣ ಇದರ ಆರೋಗ್ಯದ ಪ್ರಯೋಜನಗಳು ಮನದಟ್ಟಾಗುತ್ತಿದ್ದಂತೆ ಉತ್ಪನ್ನದ ಜನಪ್ರಿಯತೆ ನಿಧಾನವಾಗಿ ಏರಿಕೆಯಾಗತೊಡಗಿತು.

‘ಈ ಖಾದ್ಯ ತೈಲದ ಆರೋಗ್ಯದ ಪ್ರಯೋಜನಗಳನ್ನು ಮನವರಿಕೆ ಮಾಡಿಕೊಟ್ಟ ನಂತರವೇ ನಮ್ಮ ಉತ್ಪನ್ನದ ಬಗ್ಗೆ ಗ್ರಾಹಕರಲ್ಲಿ ವಿಶ್ವಾಸ ಮೂಡಿತು. ಆರಂಭದ ಒಂದು ವರ್ಷ ಮಾರುಕಟ್ಟೆಯ ಆಳ ಅಗಲ ಗೊತ್ತು ಮಾಡಿಕೊಳ್ಳುವುದರಲ್ಲಿಯೇ ಕಳೆಯಿತು. ಔಷಧಿ, ಸೋಪ್‌ ತಯಾರಿಕೆಗೂ ಈ ಎಣ್ಣೆ ಬಳಕೆಯಾಗುತ್ತಿದೆ. ಬಹೂಪಯೋಗಿ ಉತ್ಪನ್ನವಾಗಿ ಗಮನ ಸೆಳೆಯುತ್ತಿದೆ. ಔಷಧಿ, ಸೋಪ್‌ ತಯಾರಿಕೆಗೂ ಬಳಕೆಯಾಗುತ್ತಿದೆ. ಬಹೂಪಯೋಗಿ ಉತ್ಪನ್ನವಾಗಿ ಗಮನ ಸೆಳೆಯುತ್ತಿದೆ. ಗ್ರಾಹಕರ ಬಾಯಿ ಮಾತಿನ ಪ್ರಚಾರವೇ ಉತ್ಪನ್ನದ ಕೈ ಹಿಡಿದು ಮುನ್ನಡೆಸುತ್ತಿದೆ’ ಎಂದು ಹರೀಶ್‌ ಹೇಳುತ್ತಾರೆ.

‘ಜರ್ಮನಿ ಮತ್ತು ನೆದರ್ಲೆಂಡ್ಸ್‌ಗೆ ರಫ್ತು ವಹಿವಾಟು ಆರಂಭಿಸಬೇಕು ಎನ್ನುವಾಗಲೇ ಕೋವಿಡ್‌ ಲಾಕ್‌ಡೌನ್‌ ಅಡ್ಡಿಯಾಯಿತು. ದಿಗ್ಬಂಧನ ತೆರವಾಗುತ್ತಿದ್ದಂತೆ ರಫ್ತಿಗೆ ಚಾಲನೆ ಸಿಗಲಿದೆ. ತೆಂಗಿನ ಕಾಯಿಗಳನ್ನು ಬೆಳೆಗಾರರಿಂದಲೇ ನೇರವಾಗಿ ಪ್ರತಿ ತೆಂಗಿನ ಕಾಯಿಗೆ ₹ 10 ರಿಂದ ₹ 15ಕ್ಕೆ ಖರೀದಿಸಲಾಗುವುದು. ಇಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದರಿಂದ ತೆಂಗು ಬೆಳೆಗಾರರಿಗೆ ನ್ಯಾಯೋಚಿತ ಬೆಲೆ ದೊರೆಯಲಿದೆ.

‘ಆರಂಭದಲ್ಲಿ ತೆಂಗಿನಕಾಯಿಗಳನ್ನು ಖರೀದಿಸಿ ತರುವುದೇ ತಲೆನೋವಾಗಿತ್ತು. ಕ್ರಮೇಣ ಪರಿಸ್ಥಿತಿ ಸುಧಾರಿಸಿತು. ಕಾಯಿ ಕೀಳಿಸಿ ಕೊಡುತ್ತೇನೆ. ತೆಂಗಿನ ಎಣ್ಣೆ ಕೊಡಿ ಎನ್ನುವ ಬೆಳೆಗಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತ ಹೋಯಿತು. ಇದರಿಂದ ಕಾರ್ಖಾನೆಯಲ್ಲಿ ಉತ್ಪಾದನೆಯೂ ಹೆಚ್ಚಳಗೊಂಡಿತು. ಮೈಸೂರು, ಬೆಂಗಳೂರು, ಹೈದರಾಬಾದ್‌ನಲ್ಲಿ ಈ ಉತ್ಪನ್ನಕ್ಕೆ ಮಾರುಕಟ್ಟೆ ಕುದುರಿದೆ. ಇನ್ನೂ ಕೆಲವೆಡೆ ಮಾರುಕಟ್ಟೆ ವಿಸ್ತರಿಸಲಾಗುವುದು.

‘ಆರಂಭದಲ್ಲಿ ಮಾರುಕಟ್ಟೆ ಜತೆ ಏಗುವುದು ಭಾರಿ ಸವಾಲಿನ ಕೆಲಸವಾಗಿತ್ತು. ಅನೇಕ ಬಾರಿ ಮಾನಸಿಕವಾಗಿ ಕುಗ್ಗಿ ಹೋಗುವ ಅನುಭವಾಗಿತ್ತು. ಮಾರುಕಟ್ಟೆಯ ನಾಡಿಮಿಡಿತ ಅರಿತುಕೊಳ್ಳಲು ಬೀದಿಗೆ ಇಳಿಯಬೇಕು. ಆರಾಮ ಕುರ್ಚಿಯಲ್ಲಿ ಕುಳಿತುಕೊಂಡರೆ ಮಾರುಕಟ್ಟೆ ಕೈಕೊಡುತ್ತದೆ ಎಂದು ಹಿರಿಯರೊಬ್ಬರು ಕಿವಿಮಾತು ಹೇಳಿದ್ದು ಬುದ್ಧಿಗೆ ನಾಟಿತ್ತು. ಹಿಂಜರಿಕೆ ಪ್ರವೃತ್ತಿಯಿಂದ ಕ್ರಮೇಣ ಹೊರ ಬಂದೆ. ವ್ಯವಹಾರದಲ್ಲಿ ನಾನು, ನನ್ನದು ಎನ್ನುವ ಭಾವನೆ ಮರೆತೆ. ಉದ್ಯಮಿ ಆಗಬೇಕೆಂದರೆ ಎಲ್ಲರ ಜತೆ ಬೆರೆತರೆ ಮಾತ್ರ ಯಶಸ್ಸು ಸಾಧ್ಯ ಎನ್ನುವುದು ಮನದಟ್ಟಾಯಿತು. ನನ್ನೆಲ್ಲ ಹಮ್ಮು – ಬಿಮ್ಮು ಮನೆಯಲ್ಲಿ ಬಿಟ್ಟು ಹೊರ ಜಗತ್ತಿಗೆ ತೆರೆದುಕೊಂಡೆ. ಯುವಕರು ಏನಾದರೂ ಸಾಧನೆ ಮಾಡಬೇಕು ಅಂತ ಹೊರಟಾಗ ಅವರ ಆತುರದ, ತಪ್ಪು ನಿರ್ಧಾರಗಳನ್ನು ಪಾಲಕರು ತಿದ್ದಿ ಮಾರ್ಗದರ್ಶನ ಮಾಡಿದರೆ ಇನ್ನಷ್ಟು ಯುವಕರು ಯಶಸ್ವಿ ಉದ್ಯಮಿಗಳಾಗಿ ಹೊರ ಹೊಮ್ಮುತ್ತಾರೆ’ ಎನ್ನುವುದು ಅವರ ನಂಬಿಕೆಯಾಗಿದೆ.

250 ಲೀಟರ್‌ನಿಂದ ಹಿಡಿದು 1 ಲೀಟರ್‌ವರೆಗೆ ಈ ತೆಂಗಿನೆಣ್ಣೆ ಆಕರ್ಷಕ ಗಾಜಿನ ಬಾಟಲಿನಲ್ಲಿ ಲಭ್ಯ ಇದೆ. ಒಂದು ಲೀಟರ್‌ ಆಯಿಲ್‌ ಪಡೆಯಲು 15 ತೆಂಗಿನಕಾಯಿ ಪಡೆಯಬೇಕು. ಸಂಸ್ಕರಣೆ, ಪ್ಯಾಕಿಂಗ್‌ ಕಾರಣಕ್ಕೆ ಬೆಲೆ ಹೆಚ್ಚು ಅನಿಸುತ್ತದೆ. ಅಡುಗೆ ಮನೆಯಲ್ಲಿ ಮರು ಬಳಕೆಯಾಗುವ ಬಗೆಯಲ್ಲಿ ಗಾಜಿನ ಬಾಟಲ್‌ನಲ್ಲಿ ತೈಲ ಪೂರೈಸಲಾಗುವುದು. ಉತ್ಪನ್ನದ ಪ್ಯಾಕಿಂಗ್ ಆಕರ್ಷಕವಾಗಿರುವಂತೆ ಗಮನ ನೀಡಲಾಗಿದೆ. ಈಗ ಮಾರುಕಟ್ಟೆ ಮೇಲೆ ಹಿಡಿತ ಸಿಕ್ಕಿದೆ. ಹಾಸನದ ಕೈಗಾರಿಕಾ ಎಸ್ಟೇಟ್‌ನಲ್ಲಿ ಕಾರ್ಯನಿರ್ವಹಿಸುವ ಘಟಕದ ತಯಾರಿಕಾ ಸಾಮರ್ಥ್ಯವು ಪ್ರತಿ ತಿಂಗಳಿಗೆ 5 ಟನ್‌ಗಳಷ್ಟಿದೆ. ವಾರ್ಷಿಕ 150 ರಿಂದ 200 ಟನ್‌ ಮಾರಾಟ ಮಾಡುವ ನಿಟ್ಟಿನಲ್ಲಿ ನವೋದ್ಯಮವು ಈಗ ದಾಪುಗಾಲು ಹಾಕುತ್ತಿದೆ.

ಪಾಲಕರ ಬೆಂಬಲ

ಪಾಲಕರು ಒತ್ತಾಸೆಯಾಗಿ ನಿಂತು ಮಕ್ಕಳ ಕನಸುಗಳಿಗೆ ನೀರೆರೆದಿದ್ದಾರೆ. ಮೊದಲ ತಲೆಮಾರಿನ ಉದ್ಯಮಿಯಾಗಬೇಕೆಂಬ ಯುವಕರ ಕನಸುಗಳಿಗೆ ಬಣ್ಣ ತುಂಬಿದ್ದಾರೆ. ಸ್ಥಾಪಕರಿಬ್ಬರ ಪಾಲಕರು ಆರಂಭದಲ್ಲಿ ತಲಾ ₹ 20 ಲಕ್ಷ ಬಂಡವಾಳದ ನೆರವು ನೀಡಿದ್ದರು. ತಪ್ಪಿದಾಗ ಕೈ ಹಿಡಿದು ಮುನ್ನಡೆಸಿದ್ದಾರೆ. ಸಹ ಸ್ಥಾಪಕ ಆಕಾಶ್‌ ಅನಂತ್ ಅವರ ತಾಯಿ ಪ್ರೇಮಾ ಅನಂತ್‌ ಅವರು ಗೆಳೆಯರಿಬ್ಬರ ನವೋದ್ಯಮದ ಕನಸು ನನಸಾಗಿಸಲು ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡಿದ್ದಾರೆ. ಡಾ. ಸಂದೇಶ ಅವರ ಸಲಹೆ ಮತ್ತು ಮಾರ್ಗದರ್ಶನವೂ ಇವರ ನವೋದ್ಯಮದ ಕನಸಿಗೆ ಸ್ಪಷ್ಟ ರೂಪ ನೀಡಿದೆ.

ಉತ್ಸಾಹಿ ಉದ್ದಿಮೆದಾರರಿಗೆ ಕಿವಿಮಾತು

ಸ್ಟಾರ್ಟ್‌ಅಪ್‌ ಸ್ಥಾಪಿಸಿ, ಕುಹಕ, ಕೊಂಕು ನುಡಿಗಳಿಂದ ಕುಗ್ಗಿದ್ದರೂ ಎದೆಗುಂದದೆ ಮುನ್ನಡೆದಿರುವ ಹರೀಶ್‌ ಅವರು ಹೊಸಬರಿಗೆ ಕೆಲ ಕಿವಿಮಾತು ಹೇಳುತ್ತಾರೆ.

*ಓದು – ಪದವಿಗಿಂತ ಮಾರುಕಟ್ಟೆ ಕೌಶಲ ಕರಗತ ಮಾಡಿಕೊಳ್ಳುವುದು ಮುಖ್ಯ

*ಉದ್ಯಮ ಆರಂಭಿಸುವ ಮುನ್ನ ‌ಪ್ರಾಯೋಗಿಕ ಅನುಭವ ಪಡೆಯಿರಿ

*ತಯಾರಿಸುವ ಉತ್ಪನ್ನದ ಬಗ್ಗೆ ಆಳವಾದ ಜ್ಞಾನ ಇರಲಿ

*ಹಣಕಾಸಿನ ವಿಚಾರಗಳಲ್ಲಿ ಜಾಗರೂಕರಾಗಿರಿ

*ತ್ಯಾಜ್ಯದ ಸಮರ್ಪಕ ನಿರ್ವಹಣೆಯ ಜಾಣ್ಮೆಯೂ ತಿಳಿದಿರಲಿ

*ಅನಗತ್ಯ ಯಂತ್ರೋಪಕರಣ ಖರೀದಿಸಬೇಡಿ

*ಪ್ರಾಮಾಣಿಕತೆ, ಸಹನೆ ರೂಢಿಸಿಕೊಳ್ಳಿ

*ಮಾರುಕಟ್ಟೆ ತಂತ್ರ, ವ್ಯಾಪಾರಿಗಳ ಲಾಭದ ನಿರೀಕ್ಷೆ ಅರಿತುಕೊಳ್ಳಿ

*ವಹಿವಾಟಿನಲ್ಲಿ ಪ್ರಾಮಾಣಿಕತೆ ಇರಲಿ. ದುರಾಸೆ ಸಲ್ಲ

*ಉತ್ತಮ ಗುಣಮಟ್ಟದ ಉತ್ಪನ್ನಕ್ಕೆ ಗ್ರಾಹಕರ ಮನ್ನಣೆ ಇರಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.