ಕಡಬ (ಉಪ್ಪಿನಂಗಡಿ): ಕಡಬ ತಾಲ್ಲೂಕು ವ್ಯಾಪ್ತಿಯ 5 ಕುಟುಂಬಗಳ 12 ಮಂದಿ ಹಿಂದೂಗಳು ಗುರುವಾರ ಬೌದ್ಧ ಧರ್ಮ ಸ್ವೀಕಾರ ಮಾಡಿದರು.
ಕಡಬ ತಾಲ್ಲೂಕಿನ ಕೊಂಬಾರು ಗ್ರಾಮದ ದಲಿತ ಸಮುದಾಯದ ಆನಂದ ಮಿತ್ತಬೈಲ್, ಆಲಂಕಾರು ಗ್ರಾಮದ ತೋಟಂತಿಲ ಪುಟ್ಟಣ್ಣ, ಕೊಂಬಾರು ಗ್ರಾಮದ ಕಾಯರ್ಪಾಡಿಯವರಾದ ಗಣೇಶ್, ವಿಶ್ವನಾಥ, ರಾಮಕುಂಜ ಗ್ರಾಮದ ಸತೀಶ್ ಈ 5 ಕುಟುಂಬಗಳ ಸುಶೀಲಾ, ನಯನ ಕುಮಾರ್, ನಮಿತಾ, ಪ್ರೇಮ, ಹರ್ಷ, ಸುಶೀಲಾ, ಮನೋಜ್ ಕುಮಾರ್ ಇವರುಗಳು ಬೌದ್ಧ ಧರ್ಮದ ದೀಕ್ಷೆ ಪಡೆದವರು.
ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾದ ಭಂತೇಜಿ, ಮೈಸೂರು ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಸುಗತಪಾಲ ಭಂತೇಜಿಯವರು ಬೌದ್ಧ ಧರ್ಮ ಸ್ವೀಕರಿಸಿದವರಿಗೆ ದೀಕ್ಷೆ ತೊಡಿಸಿದರು. ಅಲ್ಲದೇ ಬುದ್ಧ ಶಾಸನದ ಪ್ರಕಾರ ಬುದ್ಧ ಪೂಜೆ ನೆರವೇರಿಸಿ ಧರ್ಮೋಪದೇಶ ನೀಡಿದರು.
ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲ್ಲೂಕು ಸಂಘಟನಾ ಸಂಚಾಲಕ ಆನಂದ ಮಿತ್ತಬೈಲ್ ನೇತೃತ್ವದಲ್ಲಿ ಕಡಬ ತಾಲ್ಲೂಕು ಆಲಂಕಾರು ಗ್ರಾಮದ ತೋಟಂತಿಲ ಬಳಿ ಪುಟ್ಟಣ್ಣ ಅವರು ನೂತನವಾಗಿ ನಿರ್ಮಿಸಿದ ಮನೆ ‘ಮೈತ್ರಿ ವಿಹಾರ’ ಪ್ರವೇಶ ಸಮಾರಂಭದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
‘ಧಾರ್ಮಿಕವಾಗಿ ಅನಾಥರಾಗಿರುವ ದಲಿತರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಧಾರ್ಮಿಕ ದಿಕ್ಕು ತೋರಿಸಿಕೊಟ್ಟರು. ಅವರ ಚಿಂತನೆ, ಆಶಯಗಳಿಂದ ಪ್ರೇರಿತರಾಗಿ ನೈಜ ಧಾರ್ಮಿಕ ವಿಧಿ ವಿಧಾನಗಳನ್ನು ಅಳವಡಿಸುವುದರ ಮೂಲಕ ಅವರ ಕನಸನ್ನು ಈಡೇರಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಬೌದ್ಧ ಧರ್ಮ ಸ್ವೀಕರಿಸಲಿದ್ದಾರೆ’ ಎಂದು ಬೌದ್ಧ ಧರ್ಮ ಸ್ವೀಕರಿಸಿದ ನಂತರ ಆನಂದ ಮಿತ್ತಬೈಲ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.