ADVERTISEMENT

ಅರವಿಂದ ಚೊಕ್ಕಾಡಿ ಅಂಕಣ| ಸಾಮಾಜಿಕ ಕಾಳಜಿ ಮತ್ತು ಚಿಂತನಾಶೂನ್ಯತೆ

ಸುಶಿಕ್ಷಿತರು ಮಾತನಾಡಬೇಕಾದುದು ಎಷ್ಟು ಅಗತ್ಯವೋ ತಿಳಿದುಕೊಂಡ ನಂತರವೇ ಮಾತನಾಡಬೇಕಾದುದು ಮತ್ತೂ ಅಗತ್ಯ

ಅರವಿಂದ ಚೊಕ್ಕಾಡಿ
Published 8 ಫೆಬ್ರುವರಿ 2021, 19:31 IST
Last Updated 8 ಫೆಬ್ರುವರಿ 2021, 19:31 IST
   

ಸುಶಿಕ್ಷಿತರು ಅನ್ನಿಸಿಕೊಂಡ ಕೆಲವರಲ್ಲಿರುವ ಅರಿವಿನ ಕೊರತೆಯನ್ನು ಅರಿತುಕೊಳ್ಳಲು ಸಾಮಾಜಿಕ ಜಾಲ ತಾಣಗಳು ಬಹಳ ಉಪಯುಕ್ತವಾಗುತ್ತವೆ. ಅಂತಹ ಅರಿವಿನ ಕೊರತೆಯಲ್ಲಿ ಬಹು ಮುಖ್ಯವಾದದ್ದು, ಸಮಾಜವಾದ ಎಂದರೆ ಕಮ್ಯುನಿಸಂ ಎಂಬ ಗ್ರಹಿಕೆ. ಕಮ್ಯುನಿಸಂ, ಸಮತಾವಾದದಿಂದ ಹುಟ್ಟಿಕೊಂಡ ರಾಜಕೀಯಾತ್ಮಕ ಚಿಂತನೆ ಹೌದು. ಆದರೆ, ಸಮಾಜವಾದ ಅಷ್ಟಕ್ಕೇ ಸೀಮಿತ ಎನ್ನುವುದು ತಪ್ಪು ತಿಳಿವಳಿಕೆಯಾಗಿದೆ. ಬಡವರ ಪರವಾಗಿ ಮಾತನಾಡುವುದು ಕಮ್ಯುನಿಸ್ಟರು ಮಾತ್ರ ಮತ್ತು ಅದು ಕೂಡ ಸದುದ್ದೇಶದಿಂದ ಆಗಿರುವು ದಿಲ್ಲ ಎಂಬ ಧೋರಣೆಯ ಅಭಿವ್ಯಕ್ತಿಯು ಕೆಲವು ಸುಶಿಕ್ಷಿತರ ಚಿಂತನಾಶೂನ್ಯತೆಯನ್ನಷ್ಟೇ ಸೂಚಿಸುತ್ತದೆ.

ಅರವಿಂದ ಚೊಕ್ಕಾಡಿ

ವೈದಿಕ ಋಷಿ, ‘ಸಹನಾ ವವತು ಸಹನೌ ಭುನಕ್ತು’ ಎನ್ನುವಾಗ ಸಮಾಜವಾದ ಎಂಬ ಪರಿಕಲ್ಪನೆ ಇರಲಿಲ್ಲ. ಆದರೆ ಆ ಋಷಿ ಹೇಳಿದ್ದು ಸಮಾಜವಾದದ ಆಶಯವನ್ನೆ. ತಿರುವಳ್ಳುವರ್‌ ‘ಭಿಕ್ಷೆಯು ಹಣೆಬರಹವಾದರೆ ಆ ಬರಹವನ್ನು ಬರೆದ ವಿಧಾತನೇ ಬಂದು ಭಿಕ್ಷೆ ಬೇಡಲಿ’ ಎಂದಾಗಲೂ ಅಲ್ಲಿದ್ದುದು ಸಮಾಜವಾದಿ ಆಶಯವೇ. ಬಸವಣ್ಣನವರ ಅನುಭವ ಮಂಟಪದ ಹಿಂದೆ ಇರುವುದೂ ಸಮಾಜವಾದಿ ಆಶಯವೇ.

ಮೊದಲು ಸಮಾಜವಾದ ಎಂಬ ಪರಿಕಲ್ಪನೆಯನ್ನು ಕೊಟ್ಟವರು ಅಲೆಕ್ಸಾಂಡರ್ ವಿನೆಟ್. ವ್ಯಕ್ತಿವಾದಕ್ಕೆ ವಿರುದ್ಧವಾಗಿರುವುದು ಸಮಾಜವಾದ ಎಂದು ಬಹು ಸರಳವಾಗಿ ಅವರು ಹೇಳುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾರ್ಕ್ಸ್‌ವಾದ ಒಂದೇ ಸಮಾಜವಾದವಲ್ಲ. ಆದರ್ಶ ಸಮಾಜವಾದ ಎಂಬ ಪರಿಕಲ್ಪನೆ ಇದೆ. ಹೆಗೆಲ್ ಅವರ ಸಮಾಜವಾದ ಎಂದು ಒಂದಿದೆ. ಜಾನ್ ಮೆನಾರ್ಡ್ ಕೇನ್ಸ್ ಅವರು ಬಂಡವಾಳಶಾಹಿಗಳಿಗೂ ಅನುಕೂಲವಾಗುವ ರೀತಿಯಲ್ಲಿ ಸಮಾಜವಾದವನ್ನು ಮಂಡಿಸುತ್ತಾರೆ.

ADVERTISEMENT

ಆರ್ಥಿಕ ಚಿಂತನೆಗಳ ಸಂದರ್ಭದಲ್ಲಿ ಸಮಾಜವಾದವು ಸಾರ್ವಕಾಲಿಕವಾಗಿ ಇದ್ದೇ ಇರುತ್ತದೆ. ಏಕೆಂದರೆ, ಆರ್ಥಿಕ ಚಟುವಟಿಕೆಗಳು‌ ನಡೆಯುವುದು ಸಮಾಜ ಇರುವಾಗ ಮಾತ್ರ. ಆದ್ದರಿಂದ ಆರ್ಥಿಕ ಚಟುವಟಿಕೆಗಳು ಬಂಡವಾಳಶಾಹಿ ಆರ್ಥಿಕತೆ ಇದ್ದಾಗಲೂ ಸಮಾಜವನ್ನು ಅರಿತು ಸಮಾಜಕ್ಕೆ ಸ್ಪಂದಿಸಬೇಕಾಗುತ್ತದೆ.

ಆರ್ಥಿಕ ಚಿಂತಕನ ರಾಜಕೀಯ ಒಲವು ಯಾವುದೇ ಇರಬಹುದು; ಆದರೆ ಆರ್ಥಿಕ ಚಿಂತನೆಗಳು ಸಮಾಜವಾದಿ ಒಲವನ್ನು ತಳೆಯುವುದು ತೀರಾ ಸ್ವಾಭಾವಿಕ. ಬಡವರು, ದುರ್ಬಲರು, ಅಸಹಾಯಕರು ಮುಂತಾದವರ ಬಗ್ಗೆ ಕಾಳಜಿಯೇ ಇಲ್ಲದವರು ಚಿಂತಕರಾಗಲಿಕ್ಕೇ ಸಾಧ್ಯವಿಲ್ಲ. ಆದ್ದರಿಂದ ಆರ್ಥಿಕ ಚಿಂತಕರಲ್ಲಿ ಸಮಾಜವಾದಿ ಚಿಂತಕರ ಸಂಖ್ಯೆ ಜಾಸ್ತಿ ಇರುತ್ತದೆ. ಬಂಡವಾಳವಾದಿ ಆರ್ಥಿಕ ಚಿಂತಕರು ಕೂಡ, ‘ಬಂಡವಾಳಿಗರು ಪ್ರಾಮಾಣಿಕರಾಗಿದ್ದಾಗ...’ ಎಂಬ ಕಲ್ಪನೆಯನ್ನು ಇರಿಸಿಕೊಂಡು ತಮ್ಮ ಚಿಂತನೆಗಳನ್ನು ಮಂಡಿಸುತ್ತಾರೆ. ಬಂಡವಾಳಿಗರು ಪ್ರಾಮಾಣಿಕರಾಗಿದ್ದಾಗ ಸಮಸ್ಯೆ ಕಡಿಮೆ ಇರುತ್ತದೆ. ಸಾಮಾಜಿಕ ಕಾಳಜಿಗಳಿಂದ ತೊಡಗಿಕೊಂಡ ಬಂಡವಾಳಿಗರೂ ಇದ್ದಾರೆ. ತಮ್ಮ ಉದ್ಯೋಗಿಗಳ ಬಗ್ಗೆ ಬದ್ಧತೆ ಇರುವ ಬಂಡವಾಳಶಾಹಿಗಳೂ ಇದ್ದಾರೆ. ವೈಯಕ್ತಿಕ ನೋವು, ಕೊರಗುಗಳು ಬಂಡವಾಳಿಗರಿಗೂ ಇರಲು ಸಾಧ್ಯವಿದೆ. ಆದರೆ ಹಣದ ಕಾರಣಕ್ಕಾಗಿಯೇ ಅವರಿಗೆ ಸಂಕಷ್ಟ ಬಂದಿರುವುದಿಲ್ಲ ಮತ್ತು ಬಂಡವಾಳಿಗರ ಬಳಿ ಅಪಾರ ಪ್ರಮಾಣದ ಹಣದ ಶಕ್ತಿ ಇರುವುದರಿಂದ ಅವರಿಗೆ ಆರ್ಥಿಕ ಚಿಂತನೆಯ ಬೆಂಬಲದ ಅಗತ್ಯ ಇರುವುದಿಲ್ಲ ಎಂಬ ಕಾರಣದಿಂದ ಸ್ವಾಭಾವಿಕವಾಗಿ ಆರ್ಥಿಕ ಚಿಂತಕರು ಬಂಡವಾಳಶಾಹಿಗಳ ಪರವಾಗಿ ಚಿಂತನೆಯನ್ನು ರೂಪಿಸಲು ಹೋಗುವುದಿಲ್ಲ. ಬಂಡವಾಳಶಾಹಿ ಪರ ಚಿಂತಕರೂ ಕುರುಡಾಗಿ ಬಂಡವಾಳಶಾಹಿಯನ್ನು ಸಮರ್ಥಿಸುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ಬಂಡವಾಳಶಾಹಿ ಪರ ಅರ್ಥಶಾಸ್ತ್ರಜ್ಞರೇ ಆದ ಆ್ಯಡಂ ಸ್ಮಿತ್ ಕೂಡ ಶಿಕ್ಷಣ ಮತ್ತು ನ್ಯಾಯದ ಆಡಳಿತವನ್ನು ಸರ್ಕಾರವೇ ನಿರ್ವಹಿಸಬೇಕು ಎನ್ನುತ್ತಾರೆ.

ಭಾರತದಲ್ಲಿ ಬುದ್ಧನ ಸಂಘದ ಪರಿಕಲ್ಪನೆಯಲ್ಲಿ ಇರುವುದು ಸಮಾಜವಾದಿ ಆಶಯವೇ. ಹಿಂದೂ ಧಾರ್ಮಿಕ ರಚನೆಗಳೂ ಸಮಾಜವಾದಿ ಆಶಯವನ್ನು ಹೊಂದಿದ್ದು ಇದನ್ನು ಆಧುನಿಕ ಸಂದರ್ಭದಲ್ಲಿ ವೈದಿಕ ಸಮಾಜವಾದ ಎಂದು ಕರೆಯಲಾಗಿದೆ.

‘ಸಮಾನೀ ಪ್ರಪಾಸಹವೋನ್ನಭಾಗಃ ಸಮಾನೇ ಯೋಕ್ತ್ರೇ ಸಹವೋಯುನಜ್ಮಿ ಸಮ್ಯಂಚೋನ್ನಿಂಸ ಪರ್ಯತಾರಾ ನಾಭಿಮಿವಾಭಿತಃ’ (ಅಥರ್ವ ವೇದ 3.30.6) ಅಂದರೆ, ‘ನೀವು ಕುಡಿಯುವ ನೀರಿನ ಧಾರೆ ಸಮಾನವಾಗಿರಲಿ. ನಿಮ್ಮ ಆಹಾರದ ಭಾಗವೂ ಸಮಾನವಾಗಿರಲಿ. ನೀವೆಲ್ಲರೂ ಒಂದೇ ಬಂಧದಲ್ಲಿ ಬೆಸೆದುಕೊಂಡಿದ್ದೀರಿ’ ಎಂದು ಹೇಳುವ ಅಥರ್ವ ವೇದವು ವೈದಿಕ ಸಮಾಜವಾದದ ಚಿಂತನೆಯನ್ನು ಹೇಳುತ್ತದೆ. ಆಧುನಿಕ ಸಂದರ್ಭದಲ್ಲಿ ವಿತರಣೆಯ ಸಿದ್ಧಾಂತವನ್ನು ಸ್ಪಷ್ಟವಾಗಿ ವಿವರಿಸಿದವರು ಕಾರ್ಲ್ ಹೆನ್ರಿಕ್ ಮಾರ್ಕ್ಸ್. ಆದರೆ ಶ್ರೀಮದ್ಭಾಗವತವು ಆ ಕಾಲಕ್ಕೇ ಸಂಪತ್ತಿನ ಅಸಮಾನ ವಿತರಣೆ ಬಹಳ ಕೆಟ್ಟದ್ದು ಎಂದು ಹೇಳಿದೆ. ಭಾಗವತದ 7ನೆಯ ಸ್ಕಂದದ 14ನೆಯ ಅಧ್ಯಾಯದಲ್ಲಿ ನಾರದ-ಯುಧಿಷ್ಠಿರ ಸಂವಾದದಲ್ಲಿ, ಅವಶ್ಯಕತೆಗಿಂತ ಜಾಸ್ತಿ ಸಂಪತ್ತನ್ನು ಸಂಗ್ರಹಿಸುವುದನ್ನು ಕಳ್ಳತನವೆಂದು ಹೇಳಲಾಗಿದೆ. ಶ್ರೀಮಂತರನ್ನು ಆಧ್ಯಾತ್ಮಿಕ ವಾಗಿ ಉನ್ನತೀಕರಿಸಿ ಅವರು ತಮ್ಮ ಹೆಚ್ಚುವರಿ ಸಂಪತ್ತನ್ನು ಇಲ್ಲದವರಿಗಾಗಿ ಕೊಡುವಂತೆ ಮಾಡಬೇಕು ಅಥವಾ ಬಲ ಪ್ರಯೋಗಿಸುವುದೂ ತಪ್ಪಲ್ಲ ಎಂದು ಹೇಳಲಾಗಿದೆ. ಶ್ರೀಮಂತರನ್ನು ಉದಾತ್ತೀಕರಿಸುವ ಒಂದು ಧಾರ್ಮಿಕ ಚಿಂತನೆಯ ಫಲವಾಗಿಯೇ ಶ್ರೀಮಂತರು ಕೆರೆ ಕಾಲುವೆ ಗಳನ್ನು ಕಟ್ಟಿಸಿದ್ದು, ಧರ್ಮಛತ್ರಗಳನ್ನು ಪ್ರಾರಂಭಿಸಿದ್ದು ಮುಂತಾದ ಹಲವು ಕಾರ್ಯಗಳು ಇತಿಹಾಸದ ಉದ್ದಕ್ಕೂ ನಡೆಯುತ್ತಾ ಬಂದಿವೆ. ಇವೆಲ್ಲವೂ ಸಮಾಜವಾದಿ ಆಶಯಗಳಾಗಿವೆ.

ಆಧುನಿಕ ಅರ್ಥಶಾಸ್ತ್ರಜ್ಞರು ಭೂಮಿ, ಶ್ರಮ, ಬಂಡವಾಳ, ಸಂಘಟನೆಗಳನ್ನು ಉತ್ಪಾದನೆಯ ಮೂಲ ಅಂಶಗಳೆಂದು ಪರಿಗಣಿಸಿದರೆ, 1900 ವರ್ಷಗಳ ಹಿಂದಿನ ತಿರುವಳ್ಳುವರ್, ತಿರುಕ್ಕುರಳ್‌ನ ನಾಲ್ಕನೆಯ ಭಾಗವಾದ ‘ಪೊರುತ್ಪಾಳ್’ನಲ್ಲಿ ಈ ನಾಲ್ಕರೊಂದಿಗೆ ಸಮಯ ಮತ್ತು ತಂತ್ರಜ್ಞಾನವನ್ನೂ ಸೇರಿಸಿ ಆರು ಉತ್ಪಾದನಾ ಮೂಲ ಅಂಶಗಳನ್ನು ಹೇಳುತ್ತಾರೆ. ಬಡತನವನ್ನು ಎಲ್ಲ ಕೆಡುಕುಗಳ ಮೂಲ ಎಂದು ಕರೆಯುವ ತಿರುವಳ್ಳುವರ್, ಪ್ರಭುತ್ವ ಮಾಡಬೇಕಾದ ಕೆಲಸ ಏನು ಎಂದು ಹೇಳುತ್ತಾರೆ. ಆರೋಗ್ಯವಂತ ಜನರು, ಜನರ ಬಳಿ ಸಂಪತ್ತು, ರೈತರಿಗೆ ಒಳ್ಳೆಯ ಬೆಳೆ, ಪ್ರಗತಿ, ಸಂತುಷ್ಟ ಜನರು, ಜನರಿಗೆ ಭದ್ರತೆ ಉಂಟು ಮಾಡುವುದನ್ನು ಪ್ರಭುತ್ವದ ಜವಾಬ್ದಾರಿ ಎಂದು ತಿರುವಳ್ಳುವರ್ ಹೇಳುತ್ತಾರೆ. ಹಾಗೆಯೇ ಪ್ರಭುತ್ವ ಏನನ್ನು ನಿವಾರಿಸಬೇಕು ಎಂದೂ ಅವರು ಹೇಳಿದ್ದಾರೆ. ಬಡತನ, ಅನಕ್ಷರತೆ, ಕಾಯಿಲೆ, ಮದ್ಯ, ಜೂಜು, ವೇಶ್ಯಾವಾಟಿಕೆ- ಇವನ್ನು ನಿವಾರಿಸುವುದು ಪ್ರಭುತ್ವದ ಕರ್ತವ್ಯವೆಂದುತಿರುವಳ್ಳುವರ್ ಹೇಳುತ್ತಾರೆ‌.ಇವೆಲ್ಲವೂ ಸಮಾಜವಾದಿ ಆಶಯಗಳೇ ಆಗಿವೆ.

ಆಧುನಿಕ ಸಂದರ್ಭದಲ್ಲಿ ಗಾಂಧೀಜಿಯವರ ಆರ್ಥಿಕ ಚಿಂತನೆಗಳುತಿರುವಳ್ಳುವರ್ ಅವರ ನೈತಿಕ ಅರ್ಥಶಾಸ್ತ್ರದ ತಳಹದಿಯಲ್ಲಿವೆ. ಗಾಂಧಿ ಹತ್ಯೆಯ ನಂತರ ಗಾಂಧಿ ಆರ್ಥಿಕ ಚಿಂತನೆಗಳನ್ನು ಕ್ರೋಡೀಕರಿಸಿ ಗಾಂಧಿ ಪ್ರಣೀತ ಸಮಾಜವಾದ ಎಂದು ಕರೆಯಲಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರು ಗಾಂಧಿ ಪ್ರಣೀತ ಸಮಾಜ ವಾದವನ್ನು ತಮ್ಮ ಪಕ್ಷದ ಆರ್ಥಿಕ ಚಿಂತನೆ ಎಂದು ಹೇಳಿದ್ದರು.

ಸುಭಾಷ್‌ ‌ಚಂದ್ರ ಬೋಸ್ ಮತ್ತು ಜವಾಹರಲಾಲ್ ನೆಹರೂ ಅವರು ಪಾಶ್ಚಿಮಾತ್ಯ ಸಮಾಜವಾದದ ಪ್ರಭಾವ ಕ್ಕೊಳಗಾದವರು. ಬೋಸರ ಚಿಂತನೆಗಳು ಹೆಚ್ಚು ಸಿಗುವು ದಿಲ್ಲ. ಪಂಡಿತ್ ನೆಹರೂ ಅವರ ಸಮಾಜವಾದವು ಬಂಡವಾಳಿಗರನ್ನೂ ಒಳಗೊಳಿಸಿಕೊಂಡ ಮಿಶ್ರ ಅರ್ಥ ವ್ಯವಸ್ಥೆಯ ಮಾದರಿಯದು. ಅಂಬೇಡ್ಕರ್ ಅವರ ಸಮಾಜವಾದವು ಪಂಡಿತ್ ನೆಹರೂ ಅವರಿಗಿಂತ ಜಾಸ್ತಿ ರಾಷ್ಟ್ರೀಕರಣವನ್ನು ಒತ್ತಾಯಿಸುತ್ತದೆ. ಕೃಷಿ ಮತ್ತು ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡುವಂತೆ ಅವರು ಸಂವಿಧಾನ ರಚನಾ ಸಭೆಯಲ್ಲಿ ಪ್ರತಿಪಾದಿಸಿದ್ದರು.

ಭಾರತದ ಸಮಾಜವಾದದ ಇತಿಹಾಸದಲ್ಲಿ ಮರೆಯಲು ಸಾಧ್ಯವಿಲ್ಲದವರು ರಾಮ ಮನೋಹರ ಲೋಹಿಯಾ. ಅವರು ಆರ್ಥಿಕ ರೂಪದಲ್ಲಿ ಮಾತ್ರವಲ್ಲದೆ ಸಂಕೀರ್ಣವಾದ ಸಾಂಸ್ಕೃತಿಕ ಸನ್ನಿವೇಶವನ್ನೂ ಸಮಾಜವಾದಿ ಎಳೆಗಳಿಂದ ರೂಪಿಸಿದ್ದಾರೆ.

ಈ ಯಾವ ಸಮಾಜವಾದಿಗಳೂ ಹಿಂಸೆಯನ್ನು ಒಪ್ಪಲಿಲ್ಲ. ಆದರೆ ಸಮಾಜವಾದಿಗಳೇ ಆಗಿದ್ದರು. ಆದ್ದ ರಿಂದ ಸಮಾಜವಾದ ಎಂದಕೂಡಲೆ ಹಿಂಸೆಯನ್ನು ಪ್ರತಿಪಾದಿಸುವವರೆಂದು ಭಾವಿಸುವುದು ಸರಿಯಲ್ಲ. ಸುಶಿಕ್ಷಿತರು ಮಾತನಾಡಬೇಕಾದದ್ದು ಎಷ್ಟು ಅಗತ್ಯ ವಿದೆಯೋ ತಿಳಿದುಕೊಂಡ ನಂತರವೇ ಮಾತನಾಡ
ಬೇಕಾದದ್ದು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.