ಹೊಸಪೇಟೆ: ಸರಿಯಾಗಿ ಮೌಲ್ಯಮಾಪನ ಮಾಡದೇ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿಯರು ಬುಧವಾರ ಕಾಲೇಜಿನ ಆವರಣದಲ್ಲಿ ಧರಣಿ ನಡೆಸಿದರು.
ಪ್ರಸಕ್ತ ಸಾಲಿನ ಪ್ರಥಮ ಪಿಯು ಪರೀಕ್ಷೆಗೆ ಹಾಜರಾಗಿದ್ದ 794 ವಿದ್ಯಾರ್ಥಿನಿಯರ ಪೈಕಿ 533 ಮಂದಿ ಉತ್ತೀರ್ಣರಾದರೆ, 261 ವಿದ್ಯಾರ್ಥಿನಿಯರು ಅನುತ್ತೀರ್ಣರಾಗಿದ್ದಾರೆ. ಕೆಲವರು ಎರಡ್ಮೂರು ವಿಷಯಗಳಲ್ಲಿ, ಇನ್ನು ಕೆಲವರು ಎಲ್ಲ ವಿಷಯಗಳಲ್ಲಿ ಅನುತ್ತೀರ್ಣ
ರಾಗಿದ್ದಾರೆ.
ವಿದ್ಯಾರ್ಥಿನಿಯರೊಂದಿಗೆ ಅವರ ಪೋಷಕರೂ ಧರಣಿ ನಡೆಸಿದರು. ಕಾಲೇಜಿನ ಪ್ರಾಚಾರ್ಯರು ಹಾಗೂ ಶಿಕ್ಷಕರ ವಿರುದ್ಧ ಆಕ್ರೋಶ ಹೊರ ಹಾಕಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಇನ್ಸ್ಪೆಕ್ಟರ್ ಇ.ಒ. ಮಂಜುನಾಥ್ ಎಲ್ಲರನ್ನೂ ಸಮಾಧಾನ ಮಾಡಿ ವಾತಾವರಣ ತಿಳಿಗೊಳಿಸಿದರು.
‘ಯಾವ ವಿಷಯಗಳಲ್ಲಿ ಉತ್ತೀರ್ಣರಾಗಬಹುದಿತ್ತು ಎಂದು ನಿಮಗೆ ಅನಿಸಿದೆಯೋ ಆ ವಿಷಯದ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿರಿ. ನಂತರ ಸತ್ಯಾಂಶ ಏನೆಂಬುದು ಗೊತ್ತಾಗಲಿದೆ. ಯಾರಾದರೂ ಬೇಜವಾಬ್ದಾರಿಯಿಂದ ಮೌಲ್ಯಮಾಪನ ಮಾಡಿರುವುದು ಸಾಬೀತಾದರೆ ಅಂಥವರ ವಿರುದ್ಧ ಪಿ.ಯು. ಮಂಡಳಿ ಕ್ರಮ ಜರುಗಿಸುತ್ತದೆ’ ಎಂದು ಮಂಜುನಾಥ್ ಹೇಳಿದ ನಂತರ ವಿದ್ಯಾರ್ಥಿನಿಯರು ಧರಣಿ ಕೈಬಿಟ್ಟರು.
‘ಸರಿಯಾಗಿ ಮೌಲ್ಯಮಾಪನ ಮಾಡದೆ ಫೇಲು ಮಾಡಿದ್ದಾರೆ. ಯಾವುದೇ ವಿಷಯಗಳಲ್ಲಿ ಮಕ್ಕಳು ಫೇಲಾದರೂ ಕನ್ನಡದಲ್ಲಿ ಆಗುವುದಿಲ್ಲ. 10ನೇ ತರಗತಿಯಲ್ಲಿ ಶೇ 95ರಷ್ಟು ಅಂಕ ಪಡೆದಿದ್ದ ನನ್ನ ಮಗಳು ಪ್ರಥಮ ಪಿಯುಸಿಯಲ್ಲಿ ಐದು ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಾಳೆ. ಹೀಗಾಗಲು ಹೇಗೆ ಸಾಧ್ಯ’ ಎಂದು ಪೋಷಕರೊಬ್ಬರು ಪ್ರಶ್ನಿಸಿದರು.
‘ಇಂಗ್ಲಿಷ್, ಗಣಿತ ವಿಷಯ ಕಲಿಯುವ ಸ್ಥಿತಿಯಲ್ಲಿ ಮಕ್ಕಳಿಲ್ಲ. ವಿಶೇಷ ತರಗತಿಗಳನ್ನು ನಡೆಸಿದರೂ ಫಲ ಕೊಟ್ಟಿಲ್ಲ. ಬಹುತೇಕರು ತರಗತಿಗಳಿಗೆ ಸರಿಯಾಗಿ ಬರುವುದಿಲ್ಲ. ಶ್ರದ್ಧೆಯಿಂದ ಓದಿದವರು ಪಾಸಾಗಿದ್ದಾರೆ. ಮೌಲ್ಯಮಾಪನದ ಬಗ್ಗೆ ಅನುಮಾನ ಇರುವವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು’ ಎಂದು ಪ್ರಾಚಾರ್ಯ ಎ. ಪುರುಷೋತ್ತಮ್ ಪ್ರತಿಕ್ರಿಯಿಸಿದರು.
‘ಕಲಾ ವಿಭಾಗದಲ್ಲಿ 135, ವಾಣಿಜ್ಯ ವಿಭಾಗದಲ್ಲಿ 120 ಹಾಗೂ ವಿಜ್ಞಾನ ವಿಭಾಗದಲ್ಲಿ ಆರು ವಿದ್ಯಾರ್ಥಿನಿಯರು ಅನುತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಕಾಲೇಜಿನ ಫಲಿತಾಂಶ ಶೇ 71.30ರಷ್ಟು ಬಂದಿತ್ತು. ಈ ವರ್ಷ ಅದು ಶೇ 67.12ಕ್ಕೆ ಕುಸಿದಿದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.