ADVERTISEMENT

ಸೂರ್ಯ-ನಮಸ್ಕಾರ: ಶಾಹೀನ್‌ಬಾಗ್ ಕಲಿಸಿದ ಪಾಠ

ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿಗಳಿಗೆ ಈ ಪ್ರತಿಭಟನೆಯನ್ನು ಹೋಲಿಸಲಾಗದು

ಎ.ಸೂರ್ಯ ಪ್ರಕಾಶ್
Published 18 ಅಕ್ಟೋಬರ್ 2020, 19:30 IST
Last Updated 18 ಅಕ್ಟೋಬರ್ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   
""

ದೆಹಲಿ ದಕ್ಷಿಣ ಭಾಗದ ಶಾಹೀನ್‌ಬಾಗ್‌ನಲ್ಲಿ ಮೂರು ತಿಂಗಳ ಕಾಲ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿ ದಂತೆ ಹೂಡಲಾಗಿದ್ದ ದಾವೆಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ಪ್ರಕಟಿಸಿದೆ. ಭಾರತದಂತಹ ಪ್ರಜಾತಾಂತ್ರಿಕ ರಾಷ್ಟ್ರದಲ್ಲಿ ಸಾರ್ವಜನಿಕ ಭಿನ್ನಾಭಿಪ್ರಾಯ ವ್ಯಕ್ತಪಡಿಸುವಾಗ ಎಲ್ಲಿಯವರೆಗೆ ಹಕ್ಕು ಚಲಾಯಿಸಬಹುದು ಎಂಬ ಚರ್ಚೆಯ ಕುರಿತ ಗೊಂದಲಗಳಿಗೆ ಈ ತೀರ್ಪು ತೆರೆ ಎಳೆದಿದೆ. ಪ್ರತಿಭಟನೆ ಮಾಡುವಾಗ ಸಾರ್ವಜನಿಕ ರಸ್ತೆಗಳ ಮೇಲೆ ಆಕ್ರಮಣ ಮಾಡುವುದನ್ನು ಒಪ್ಪಿಕೊಳ್ಳಲಾಗದು ಎಂಬುದು ಈ ತೀರ್ಪಿನ ಪ್ರಮುಖ ಅಂಶ.

ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿ ಗಳ ಪೀಠ ಈ ತೀರ್ಪು ನೀಡಿದೆ. ಸಂಜಯ್ ಕಿಷನ್ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಈ ಪೀಠದಲ್ಲಿದ್ದವರು. ಸಂವಿಧಾನದ ಮೂಲಾಧಾರಗಳಲ್ಲಿ 19ನೇ ವಿಧಿಯು ಒಂದು. ಇದು ಪ್ರಜೆಗಳಿಗೆ ಎರಡು ಅತ್ಯಮೂಲ್ಯ ಹಕ್ಕುಗಳನ್ನು ನೀಡುತ್ತದೆ. ಒಂದನೆಯದು, 19(1)(ಎ) ವಿಧಿಯಡಿ ವಾಕ್ ಸ್ವಾತಂತ್ರ್ಯದ ಹಕ್ಕು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು. ಎರಡನೆಯದು, 19(1)(ಬಿ) ವಿಧಿಯಡಿ ಶಸ್ತ್ರಾಸ್ತ್ರರಹಿತವಾಗಿ ಹಾಗೂ ಶಾಂತಿಯುತವಾಗಿ ಒಂದೆಡೆ ಸಮಾವೇಶ ಗೊಳ್ಳಲು ಇರುವ ಹಕ್ಕು. ‘ಈ ಎರಡೂ ಹಕ್ಕುಗಳನ್ನು ಸಂಯೋಜಿಸಿದಾಗ, ಪ್ರತೀ ಪ್ರಜೆಗೂ ಶಾಂತಿಯುತವಾಗಿ ಸಮಾವೇಶದಲ್ಲಿ ಪಾಲ್ಗೊಂಡು, ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮ ಅಥವಾ ಅದರ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟಿಸುವ ಅವಕಾಶ ಪ್ರಾಪ್ತವಾಗುತ್ತದೆ. ನಮ್ಮ
ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿ ಅಡಗಿರುವುದೇ ಇಲ್ಲಿ. ಆದ್ದರಿಂದ ಇಂತಹ ಪ್ರತಿಭಟನೆಯನ್ನು ಸರ್ಕಾರ ಕೂಡ ಗೌರವಿಸುವುದರ ಜೊತೆಗೆ ಪ್ರೋತ್ಸಾಹಿಸಬೇಕು’.

ಆದರೆ, ಈ ಹಕ್ಕುಗಳು ಸೂಕ್ತ ಕಟ್ಟುಪಾಡುಗಳಿಗೆ ಒಳಪಟ್ಟಿರುತ್ತವೆ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ. ‘ಪ್ರತಿಯೊಂದು ಮೂಲಭೂತ ಹಕ್ಕು, ಅದು ವ್ಯಕ್ತಿಗತವಾಗಿರಲಿ ಅಥವಾ ಜನವರ್ಗಕ್ಕೆ ಸಂಬಂಧಪಟ್ಟಿದ್ದಾಗಿರಲಿ, ಪ್ರತ್ಯೇಕವಾಗಿ ಅಸ್ತಿತ್ವದಲ್ಲಿ ಇರುವುದಿಲ್ಲ. ಅದನ್ನು ವ್ಯತಿರಿಕ್ತವಾದ ಮತ್ತೊಂದು ಹಕ್ಕಿನೊಂದಿಗೆ ಸರಿದೂಗಿಸ ಬೇಕಾಗುತ್ತದೆ. ಈ ಪ್ರಕರಣದಲ್ಲಿ, ಇದನ್ನು ಗಮನದಲ್ಲಿರಿಸಿಕೊಂಡು ನಾವು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದೆವು. ಅದರಂತೆ, ಪ್ರತಿಭಟನಕಾರರ ಹಕ್ಕುಗಳನ್ನು ಪ್ರಯಾಣಿಕರ ಹಕ್ಕುಗಳೊಂದಿಗೆ ಸರಿದೂಗಿಸಬೇಕಾಗಿತ್ತು’ ಎಂದೂ ಅಭಿಪ್ರಾಯಪಟ್ಟಿದೆ.

ADVERTISEMENT

‘ಪ್ರಜಾತಂತ್ರ ಮತ್ತು ಭಿನ್ನಾಭಿಪ್ರಾಯ ಒಟ್ಟೊಟ್ಟಿಗೇ ಇರುತ್ತವೆ. ಆದರೆ, ಭಿನ್ನಾಭಿಪ್ರಾಯವನ್ನು ಪ್ರಕಟಗೊಳಿಸುವ ಪ್ರತಿಭಟನೆಗಳು ನಿಯೋಜಿತ ಜಾಗದಲ್ಲೇ ನಡೆಯಬೇಕು’ ಎಂದು ಸ್ಪಷ್ಟವಾಗಿ ಹೇಳಿದೆ. ‘ಸದರಿ ಪ್ರಕರಣದಲ್ಲಿ ಪ್ರತಿಭಟನೆಯು ನಿಯೋಜಿತವಲ್ಲದ ಪ್ರದೇಶದಲ್ಲಿ ನಡೆದಿದೆ. ಇದು ಪ್ರಯಾಣಿಕರಿಗೆ ಹೇಳತೀರದ ಅನನುಕೂಲ
ವನ್ನು ಉಂಟುಮಾಡಿತು. ಪ್ರತಿಭಟನೆಯಲ್ಲಿ ತೊಡಗಲು ಮುಂದಾದಾಗ ಅನಿರ್ದಿಷ್ಟ ಸಂಖ್ಯೆಯ ಜನ ಸಮಾವೇಶ ಗೊಳ್ಳಬಹುದು ಎಂಬ ಅರ್ಜಿದಾರರ ವಾದವನ್ನು ಒಪ್ಪಲಾಗದು’ ಎಂದೂ ಸ್ಪಷ್ಟಪಡಿಸಿದೆ.

ಪ್ರತಿಭಟಿಸುವ ಹಕ್ಕು ಇತರ ಪ್ರಜೆಗಳ ಮುಕ್ತ ಸಂಚಾರದ ಹಕ್ಕಿಗೆ ಭಂಗ ತರಬಾರದು ಎಂಬುದು ಶಾಹೀನ್‌ಬಾಗ್ ಪ್ರತಿಭಟನೆಯ ವಿರುದ್ಧ ಆಕ್ಷೇಪ ಎತ್ತಿದವರ ಪ್ರಮುಖ ವಾದವಾಗಿತ್ತು. ಇದನ್ನು ಮಾನ್ಯ ಮಾಡಿದ ಕೋರ್ಟ್, ‘ಸದರಿ ದಾವೆಯಲ್ಲಿ ಪ್ರಶ್ನಿಸಲಾಗಿರುವ ರಸ್ತೆಯಲ್ಲಾಗಲೀ ಅಥವಾ ಬೇರೆಲ್ಲೇ ಆಗಲೀ ಪ್ರತಿಭಟನೆಗಾಗಿ ಸಾರ್ವಜನಿಕ ಸಂಚಾರ ಮಾರ್ಗ ಆಕ್ರಮಿಸುವುದನ್ನು ಒಪ್ಪಿಕೊಳ್ಳಲಾಗದು ಹಾಗೂ ಆಡಳಿತವು ಈ ಪ್ರದೇಶಗಳನ್ನು ಅತಿಕ್ರಮಣ ದಿಂದ ಅಥವಾ ಅಡಚಣೆಗಳಿಂದ ಮುಕ್ತವಾಗಿಸಲು ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಹೇಳಲು ನಾವು ಹಿಂದೇಟು ಹಾಕುವುದಿಲ್ಲ’ ಎಂದೂ ಸ್ಪಷ್ಟಪಡಿಸಿದೆ.

ಇದೇ ವೇಳೆ ಕೋರ್ಟ್, ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ನಡೆದ ಪ್ರತಿಭಟನೆಗಳ ಚರಿತ್ರೆ ಬಗ್ಗೆಯೂ ಉಲ್ಲೇಖಿಸಿದೆ. ‘ಈ ಹಿಂದೆ ವಸಾಹತುಶಾಹಿ ಆಡಳಿತದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ನಡೆಸಲಾಗಿದ್ದನ್ನು ಈಗಿನ ಸ್ವಯಂ-ಆಳ್ವಿಕೆಯ ಪ್ರಜಾತಂತ್ರ ವ್ಯವಸ್ಥೆಯೊಂದಿಗೆ ಹೋಲಿಸಲಾಗದು. ನಮ್ಮ ಸಂವಿಧಾನ ಸಂರಚನೆಯು ಪ್ರತಿಭಟನೆಯ ಹಕ್ಕು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳೊಟ್ಟಿಗೇ ಹೆಣೆದುಕೊಂಡಿದೆ. ಆದರೆ ಈ ದಿಸೆಯಲ್ಲಿ ಕೆಲವು ಕರ್ತವ್ಯಗಳೆಡೆಗಿನ ಬಾಧ್ಯತೆಗಳನ್ನು ಕೂಡ ಇದು ಒಳಗೊಂಡಿದೆ’. ಇದು ಸುಪ್ರೀಂ ಕೋರ್ಟ್ ಮಾಡಿರುವ ಪ್ರಮುಖ ಅವಲೋಕನವಾಗಿದೆ.

ಸಂವಿಧಾನ ಕರಡು ರಚನಾ ಸಮಿತಿಯ ನೇತೃತ್ವ ವಹಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್, 1949ರ ನವೆಂಬರ್ 25ರಂದು ಸಮಿತಿ ಸಭೆಯ ಸಮಾರೋಪದಲ್ಲಿ ಈ ಅಂಶದ ಕುರಿತೇ ಪ್ರಸ್ತಾಪಿಸಿದ್ದರು. ಅಂಬೇಡ್ಕರ್ ಅಂದು ಎರಡು ಅಂಶಗಳನ್ನು ಪರಾಮರ್ಶಿಸಿದ್ದರು. ಇವು, ಇದೀಗ ದೇಶದಲ್ಲಿ ನಡೆಯುತ್ತಿರುವ ಪ್ರಜಾತಂತ್ರ ಮತ್ತು ಭಿನ್ನಾಭಿಪ್ರಾಯ ಕುರಿತ ಚರ್ಚೆಗೆ ಸಂಬಂಧಪಟ್ಟಂತೆಯೂ ಪ್ರಸ್ತುತವಾಗಿವೆ. ಅವರು ಹೀಗೆ ಹೇಳಿದ್ದರು- ‘ಸಂವಿಧಾನಕ್ಕೆ ಪ್ರಮುಖವಾಗಿ ಎರಡು ವಲಯಗಳಿಂದ ಖಂಡನೆ ವ್ಯಕ್ತ ವಾಗುತ್ತದೆ. ಕಮ್ಯುನಿಸ್ಟ್ ಪಕ್ಷ ಮತ್ತು ಸಮಾಜವಾದಿ ಪಕ್ಷಗಳೇ ಈ ಎರಡು ವಲಯಗಳಾಗಿವೆ’ ಎಂದಿದ್ದರು. ‘ಕಮ್ಯುನಿಸ್ಟರಿಗೆ ಇದು ಏಕೆ ಇಷ್ಟವಿಲ್ಲವೆಂದರೆ, ಅವರಿಗೆ ಶ್ರಮಿಕವರ್ಗದ ಸರ್ವಾಧಿಕಾರತ್ವ ತತ್ವಗಳನ್ನು ಆಧರಿಸಿದ ಸಂವಿಧಾನ ಬೇಕಾಗಿದೆ. ಇದು ಸಂಸದೀಯ ಪ್ರಜಾಪ್ರಭುತ್ವ ಆಧಾರಿತವಾದ್ದರಿಂದ ಅವರು (ಕಮ್ಯುನಿಸ್ಟರು) ಇದನ್ನು ಖಂಡಿಸುತ್ತಾರೆ. ಇನ್ನು ಸಮಾಜವಾದಿಗಳು ಯಾವುದೇ ಪರಿಹಾರ ನೀಡದೆ ಎಲ್ಲಾ ಖಾಸಗಿ ಸ್ವತ್ತುಗಳ ರಾಷ್ಟ್ರೀಕರಣ ಆಗಬೇಕು ಎನ್ನುತ್ತಾರೆ. ಎರಡನೆಯದಾಗಿ, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಯಾವುದೇ ಮಿತಿಯಿಲ್ಲದೆ ನಿರಂಕುಶವಾಗಿರಬೇಕು ಎಂಬುದು ಅವರ ಅಪೇಕ್ಷೆಯಾಗಿದೆ. ಏಕೆಂದರೆ, ಒಂದೊಮ್ಮೆ ಅವರ ಪಕ್ಷ ಅಧಿಕಾರಕ್ಕೆ ಬರಲು ವಿಫಲವಾದರೆ ವೃಥಾ ಟೀಕಿಸುವ ಜೊತೆಗೆ ಸರ್ಕಾರವನ್ನು ಪದಚ್ಯುತಗೊಳಿಸಲು ಅವರಿಗೆ ಅನಿರ್ಬಂಧಿತ ಸ್ವಾತಂತ್ರ್ಯ ಇರುತ್ತದೆ’.

ಅಂಬೇಡ್ಕರ್ ಅವರು ಸಮಾಜವಾದಿ ಪಕ್ಷ ಎಂದು ಹೇಳಿದ್ದರ ಜಾಗದಲ್ಲಿ ಈಗ ಕಾಂಗ್ರೆಸ್ ಪಕ್ಷ ಎಂದು ಬದಲಾಯಿಸಿ ಅಷ್ಟೆ. ಆಗ, ಅಂಬೇಡ್ಕರ್ ಅವರು 2020 ರಲ್ಲಿ ಭಾರತದಲ್ಲಿ ಏನು ನಡೆಯಲಿಕ್ಕಿದೆ ಎಂಬುದರ ಬಗ್ಗೆ ಅಂದೇ ಹೇಳಿದ್ದರೇನೋ ಎಂಬಂತೆ ಭಾಸವಾಗುತ್ತದೆ.

ಡಾ. ಅಂಬೇಡ್ಕರ್ ಅವರು ಹೇಳಿದ ಎರಡನೆಯ ವಿಷಯವು ಪ್ರತಿಭಟನೆಯ ಸ್ವರೂಪಗಳಿಗೆ ಸಂಬಂಧಿ ಸಿದ್ದಾಗಿದೆ. ದೇಶವೊಂದರ ಪ್ರಜೆಗಳು ಪ್ರಜಾಪ್ರಭುತ್ವವನ್ನು ತಾತ್ವಿಕವಾಗಿ ಮಾತ್ರವಲ್ಲದೆ ವಾಸ್ತವಿಕವಾಗಿಯೂ ಕಾಪಿಟ್ಟುಕೊಳ್ಳಬೇಕಾದರೆ ಏನು ಮಾಡಬೇಕು ಎಂದು ಹೇಳಿದ್ದಾರೆ. ನಾವು ಇದಕ್ಕಾಗಿ ಮೊದಲಿಗೆ ಏನು ಮಾಡಬೇಕೆಂದರೆ, ನಮ್ಮ ಸಾಮಾಜಿಕ ಮತ್ತು ಆರ್ಥಿಕ ಧ್ಯೇಯಗಳನ್ನು ಸಾಧಿಸಲು ಸಾಂವಿಧಾನಿಕ ಕ್ರಮಗಳಿಗೆ ಅಚಲ ಬದ್ಧತೆಯಿಂದ ಇರಬೇಕು. ‘ಅಂದರೆ, ನಾವು ರಕ್ತಕ್ರಾಂತಿ ವಿಧಾನಗಳನ್ನು ಕೈಬಿಡಬೇಕು. ಹಾಗೆಂದರೆ, ನಾಗರಿಕ ದಂಗೆ, ಅಸಹಕಾರ ಮತ್ತು ಸತ್ಯಾಗ್ರಹಗಳನ್ನು ಕೈಬಿಡಬೇಕು’ ಎಂಬುದು ಇದರ ಅರ್ಥವಾಗಿದೆ. ಸಾಂವಿಧಾನಿಕ ವಿಧಾನದಲ್ಲಿ ಪ್ರತಿಭಟಿಸಲು ಅವಕಾಶ ಇಲ್ಲದಿದ್ದಾಗ ಈ ವಿಧಾನಗಳನ್ನು ಅನುಸರಿಸಬೇಕಾಗು ತ್ತದೆ. ‘ಆದರೆ ಸಾಂವಿಧಾನಿಕ ವಿಧಾನಗಳು ಮುಕ್ತವಾಗಿರುವಾಗ ಈ ಅಸಾಂವಿಧಾನಿಕ ವಿಧಾನಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಈ ವಿಧಾನಗಳೆಲ್ಲವೂ ಅರಾಜಕತೆಯ ಮಾರ್ಗಗಳಾಗಿವೆ. ಇವನ್ನು ಎಷ್ಟು ಬೇಗ ನಿಷೇಧಿಸುತ್ತೇವೋ ಅಷ್ಟರಮಟ್ಟಿಗೆ ನಮಗೆ ಒಳ್ಳೆಯದು’.

ಶಾಹೀನ್‌ಬಾಗ್ ಪ್ರತಿಭಟನೆಯು ಅಂಬೇಡ್ಕರ್ ಪ್ರಸ್ತಾಪಿಸಿದ ಮಾದರಿಗೆ ಹೋಲುತ್ತದೆ. ಇಂತಹ ಅರಾಜಕತೆಯ ವಿಧಾನಕ್ಕೆ ಕುಮ್ಮಕ್ಕು ನೀಡಿದವರ ಮೂಲ ಉದ್ದೇಶದ ಬಗ್ಗೆ ಯಾವ ಗೊಂದಲಕ್ಕೂ ಆಸ್ಪದವೇ ಇಲ್ಲ. ಇದು ದೇಶದ ಜನ 2019ರ ಚುನಾವಣೆಯಲ್ಲಿ ನೀಡಿದ ತೀರ್ಪಿನ ವಿರುದ್ಧದ ಅಸಮಾಧಾನವಲ್ಲದೆ ಮತ್ತೇನೂ ಅಲ್ಲ.

ಆಯೋಜಕರು ಇಂತಹ ಗೊಂದಲವನ್ನು ಪ್ರಚೋದಿಸುವುದಕ್ಕೆ ಬದಲಾಗಿ, ಸಂಸತ್ತು ರೂಪಿಸಿದ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದು ಉತ್ತಮ ಆಯ್ಕೆಯಾಗಿದ್ದಿತು. ಅಂಬೇಡ್ಕರ್ ಆಶಯದಂತೆ ಅದು ಸೂಕ್ತ ಸಾಂವಿಧಾನಿಕ ಪ್ರತಿಕ್ರಿಯೆಯೂ ಆಗಿರುತ್ತಿತ್ತು.

ಸುಪ್ರೀಂ ಕೋರ್ಟ್ ಈಗ ಪ್ರಕಟಿಸಿರುವ ತೀರ್ಪು ಶಾಹೀನ್‌ಬಾಗ್ ಸ್ವರೂಪದ ಪ್ರತಿಭಟನೆಗಳಿಗೆ ಕೊನೆ ಹಾಡುತ್ತದೆಂದೂ ಹಾಗೂ ನಾವು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಬಗೆಯಲ್ಲಿ ಒಂದು ಕ್ರಮಬದ್ಧತೆಯನ್ನು ಪುನರ್ ಸ್ಥಾಪಿಸುತ್ತದೆ ಎಂದೂ ಆಶಿಸೋಣ.


ಸೂರ್ಯ ಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.