ADVERTISEMENT

ದಿನದ ಸೂಕ್ತಿ: ಕ್ರಿಯಾಶಿಲರಾಗಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 9 ಸೆಪ್ಟೆಂಬರ್ 2021, 19:30 IST
Last Updated 9 ಸೆಪ್ಟೆಂಬರ್ 2021, 19:30 IST
ಬೆಕ್ಕುಗಳು
ಬೆಕ್ಕುಗಳು   

ಉದ್ಯೋಗಃ ಖಲು ಕರ್ತವ್ಯಃ ಫಲಂ ಮಾರ್ಜಾರವದ್ಭವೇತ್‌ ।

ಜನ್ಮಪ್ರಭೃತಿ ಗೌರ್ನಾಸ್ತಿ ಪಯಃ ಪಿಬತಿ ನಿತ್ಯಶಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಮನುಷ್ಯನು ಯಾವುದಾದರೊಂದು ಉದ್ಯೋಗವನ್ನು ಮಾಡಲೇಬೇಕು, ಬೆಕ್ಕಿನಂತೆ. ಅದೇನೂ ಹಸುವನ್ನು ಸಾಕುವುದಿಲ್ಲ; ಆದರೆ ನಿತ್ಯವೂ ಹಾಲನ್ನು ಕುಡಿಯುತ್ತದೆಯಷ್ಟೆ!’

ಇದೊಂದು ಸ್ವಾರಸ್ಯಕರವಾದ ಸುಭಾಷಿತ; ತಪ್ಪಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.

ನಾವೆಲ್ಲರೂ ಯಾವುದಾದರೊಂದು ಉದ್ಯೋಗದಲ್ಲಿರಲೇ ಬೇಕು; ಜೀವನದಲ್ಲಿ ನಾವು ಸೋಮಾರಿಗಳಾಗಬಾರದು. ಇದನ್ನು ಮುಖ್ಯವಾಗಿ ಸುಭಾಷಿತ ಹೇಳುತ್ತಿರುವುದು.

ಜೀವನದಲ್ಲಿ ಸಾಧನೆಯನ್ನು ಮಾಡಲು ನಮಗೆ ಸಲಕರಣೆಗಳು ಸಾಲವು ಎಂದು ಕೊರಗುತ್ತಲೇ ಇರುತ್ತೇವೆ. ಇಲ್ಲದ ಅವಕಾಶಗಳನ್ನು ನೆಪ ಮಾಡಿಕೊಂಡು ಜಡರಾಗುತ್ತೇವೆ; ಅಥವಾ ಕೊರಗಿ ಕೊರಗಿ ಹತಾಶರಾಗುತ್ತೇವೆ. ಸುಭಾಷಿತ ಇಲ್ಲೊಂದು ಸುಂದರವಾದ ಉದಾಹರಣೆಯೊಂದನ್ನು ಕೊಟ್ಟಿದೆ.

ಬೆಕ್ಕು ಕುಡಿಯವುದೇ ಹಾಲನ್ನು. ಹೀಗೆಂದು ಅದು ಹಸುವನ್ನು ಸಾಕಿದೆಯೆ? ಇಲ್ಲವಲ್ಲ! ಅದು ಹೇಗಾದರೂ ಹಾಲನ್ನು ಸಂಪಾದಿಸಿಕೊಳ್ಳುತ್ತದೆ, ಅಲ್ಲವೆ? ಇಲ್ಲೊಂದು ಸಮಸ್ಯೆಯುಂಟು. ಬೆಕ್ಕಿನಂತೆ ನಾವು ಕೂಡ ನಮಗೆ ಬೇಕಾಗಿರುವ ವಸ್ತುವಿಗಾಗಿ ಅಲ್ಲಿ ಇಲ್ಲಿ ಹೊಂಚುಹಾಕಿ ಕಾಯುತ್ತ, ಸಮಯ ಸಿಕ್ಕಾಗ ಮೋಸದಿಂದ ಅದನ್ನು ಲಪಟಾಯಿಸಬೇಕೆ – ಎಂಬ ಪ್ರಶ್ನೆ ಎದುರಾಗಬಹುದು. ಆದರೆ ಇದು ಸುಭಾಷಿತವನ್ನು ವಿಪರೀತವಾಗಿ ಅರ್ಥಮಾಡಿಕೊಳ್ಳುವ ಬಗೆಯಷ್ಟೆ. ಇಲ್ಲಿ ತಾತ್ಪರ್ಯ ಇರುವುದು, ಕ್ರಿಯಾಶೀಲತೆಯ ಬಗ್ಗೆ.

ನಾವು ಜೀವನದಲ್ಲಿ ಯಶಸ್ಸನ್ನು ಸಂಪಾದಿಸಲು ನಮಗೆ ಬೇಕಿರುವುದು ಉತ್ಸಾಹ–ಕ್ರಿಯಾಶೀಲತೆಗಳೇ ಹೊರತು ಸಾಧನ–ಸಲಕರಣಗಳು ಅಲ್ಲ. ಅದಿಲ್ಲ, ಇದಿಲ್ಲ – ಎಂದು ಕೊರಗಿ, ಸೋಮಾರಿಗಳಾದುವುದರಲ್ಲಿ ಅರ್ಥವೇ ಇಲ್ಲ; ನಿರಂತರ ಪ್ರಯತ್ನ ಪಡುತ್ತಲೇ ಇರಬೇಕು; ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಆಗ ನಾವು ಗುರಿಯನ್ನು ಮುಟ್ಟಲು ಸಾಧ್ಯ. ಇದು ಸುಭಾಷಿತದ ಸಂದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.