ADVERTISEMENT

ದಿನದ ಸೂಕ್ತಿ: ಯೋಚಿಸಿ ಯೋಚಿಸಿ ಯೋಚಿಸಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 20 ಜನವರಿ 2021, 1:17 IST
Last Updated 20 ಜನವರಿ 2021, 1:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಿಂ ನು ಮೇ ಸ್ಯಾದಿದಂ ಕೃತ್ವಾ ಕಿಂ ನು ಮೇ ಸ್ಯಾದಕುರ್ವತಃ ।

ಇತಿ ಸಂಚಿಂತ್ಯ ಮನಸಾ ಪ್ರಾಜ್ಞಃ ಕುರ್ವಿತ ವಾ ನವಾ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಈ ಕಾರ್ಯವನ್ನು ಮಾಡಿದರೆ ನನಗೆ ಯಾವ ಪ್ರಯೋಜನ ಆದೀತು? ಇದನ್ನು ಮಾಡದಿದ್ದರೆ ಏನಾಗುವುದು? – ಎಂದು ವಿಮರ್ಶಿಸಿ, ಆಮೇಲೆ ಪ್ರಾಜ್ಞನಾದವನು ಅದನ್ನು ಮಾಡಬೇಕು, ಇಲ್ಲವೆ ಬಿಟ್ಟುಬಿಡಬೇಕು.’

ಆತುರಗಾರನಿಗೆ ಬುದ್ಧಿ ಮಟ್ಟ – ಎಂಬ ಗಾದೆಯನ್ನು ನಾವೆಲ್ಲರೂ ಬಲ್ಲೆವು. ಸುಭಾಷಿತದ ಉದ್ದೇಶ ಕೂಡ ಈ ಗಾದೆಯ ವಿಷಯವನ್ನು ಹೇಳುವುದೇ ಹೌದು.

ನಾವೆಲ್ಲರೂ ಪ್ರತಿ ಕ್ಷಣವೂ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತೇವೆ. ಆದರೆ ಆ ಕೆಲಸವನ್ನು ಮಾಡುವುದರಿಂದ ಮುಂದೆ ಏನಾಗುವುದು ಎಂಬ ಆಲೋಚನೆಯನ್ನು ಮಾಡುವುದಿಲ್ಲ. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು. ಇಂಥ ಪ್ರವೃತ್ತಿ ನಮ್ಮ ಕಾಲಕ್ಕೆ ಅಥವಾ ನಮ್ಮ ಜನಾಂಗಕ್ಕೆ ಮಾತ್ರ ಸೇರಿದ ನಡೆವಳಿಕೆ ಅಲ್ಲ; ಇತಿಹಾಸದುದ್ದಕ್ಕೂ ನಾವು ಇಂಥದೇ ಮನೋಧರ್ಮವನ್ನು ನೋಡುತ್ತೇವೆ.

ನಮ್ಮ ದೇಶದ ಇತಿಹಾಸವನ್ನೇ ನೋಡಬಹುದು. ನಮ್ಮ ರಾಜರು ಪರಸ್ಪರ ಜಗಳದಲ್ಲಿದ್ದರು. ಈ ಆವಕಾಶವನ್ನು ಬಳಸಿಕೊಂಡು ಹೊರಗಿನ ಆಕ್ರಮಣಕಾರರು ದೇಶದೊಳಕ್ಕೆ ನುಸುಳಿದರು. ನಮ್ಮ ರಾಜರೂ ಕೆಲವರು ಅವರ ಪರವಾಗಿಯೇ ನಿಂತರು. ಅವರು ಆಗ ಯೋಚಿಸಬೇಕಿತ್ತು, ‘ನಾಳೆ ಈ ಆಕ್ರಮಣಕಾರರು ಈ ನೆಲವನ್ನು ಏನು ಮಾಡುತ್ತಾರೆ‘ ಎಂದು. ಆದರೆ ಅವರು ಹಾಗೆ ಯೋಚಿಸಲಿಲ್ಲ. ನಮ್ಮ ದೇಶ ಹಂತಹಂತವಾಗಿ ಸ್ವಾತಂತ್ರ್ಯವನ್ನೇ ಕಳೆದುಕೊಂಡಿತು.

ಇವತ್ತು ನಾವು ಪಕ್ಕದ ಮನೆಯವರೊಂದಿಗೆ ಹಗೆಯನ್ನು ಸಾಧಿಸಿ ಮೂರನೆಯ ವ್ಯಕ್ತಿಯನ್ನು ಅವರ ಮೇಲೆ ಛೂ ಬಿಡುತ್ತೇವೆ ಎಂದು ಇಟ್ಟುಕೊಳ್ಳಿ. ನಾಳೆ ಆ ಮೂರನೆಯ ವ್ಯಕ್ತಿ ನಮ್ಮ ಮೇಲೂ ದಾಳಿ ಮಾಡಬಹುದು. ಏಕೆಂದರೆ ಅವನಿಗೆ ಗೊತ್ತು, ಪಕ್ಕದ ಮನೆಯವರು ಇವರೊಂದಿಗೆ ಸೌಹಾರ್ದವಾಗಿಲ್ಲ; ಅವರು ಇವನ ಸಹಾಯಕ್ಕೆ ಬರುವುದಿಲ್ಲ ಎಂದು.

ಹೀಗಾಗಿ ನಾವು ಈ ಕ್ಷಣದ ಬಗ್ಗೆ ಮಾತ್ರ ಯೋಚಿಸದೆ, ಮುಂದೆ ಏನಾಗುತ್ತದೆ ಎಂದು ಸಮಾಧಾನದಿಂದ ಯೋಚಿಸಿ, ಆ ಬಳಿಕವಷ್ಟೆ ಆ ಕೆಲಸದಲ್ಲಿ ತೊಡಗಬೇಕು.

ಇಂದು ಕೋವಿಡ್‌ನ ಹಾವಳಿ ಕಡಿಮೆ ಇದೆ ಎಂದು ಎಚ್ಚರಿಕೆಯಿಲ್ಲದೆ ನಡೆದುಕೊಂಡರೆ ನಾಳೆ ಅನಾಹುತ ಹೆಚ್ಚಾಗಬಹುದಲ್ಲವೆ – ಎಂಬ ಆಲೋಚನೆ ನಮಗೆ ಬರಬೇಕು. ಇದೇ ವಿವೇಕದ ಲಕ್ಷಣ.

ಇನ್ನೊಂದು ಸುಭಾಷಿತ ಪಾತ್ರ–ಆಪಾತ್ರಗಳ ಬಗ್ಗೆ ಸೊಗಸಾಗಿ ಹೇಳಿದೆ, ಹೀಗೆ:

ಪಾತ್ರಾಪಾತ್ರವಿವೋಕೋsಸ್ತಿ ಧೇನುಪನ್ನಗಯೋರಿವ ।

ತೃಣಾತ್‌ ಸಂಜಾಯತೇ ಕ್ಷೀರಂ ಕ್ಷೀರಾತ್‌ ಸಂಜಾಯತೇ ವಿಷಮ್‌ ।।

ಎಂದರೆ, ‘ಇದು ಪಾತ್ರ, ಇದು ಅಪಾತ್ರ – ಎಂಬ ವಿವೇಕ ಇರಬೇಕು. ಹಸು, ಹಾವುಗಳೇ ಇದಕ್ಕೆ ಉದಾಹರಣೆ. ಹಸುವಿಗೆ ಹುಲ್ಲನ್ನು ತಿನಿಸಿದರೆ ಹುಲ್ಲಿನಿಂದ ಹಾಲು ಬರುತ್ತದೆ; ಹಾಲನ್ನು ಹಾವಿಗೆ ಕೊಟ್ಟರೆ ಹಾಲಿನಿಂದ ವಿಷ ಹುಟ್ಟುತ್ತದೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.