ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
––––––
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರ್ಕು
ಹರಿದು ಹೆದ್ದೊರೆಯು ಕೆರೆ ತುಂಬಿದಂತಯ್ಯಾ;
ನೆರೆಯದ ವಸ್ತು ನೆರೆವುದು ನೋಡಯ್ಯಾ;
ಅರಸು ಪರಿವಾರ ಕೈವಾರ ನೋಡಯ್ಯಾ!
ಪರಮ ನಿರಂಜನನ ಮರೆವ ಕಾಲಕ್ಕೆ
ತುಂಬಿದ ಹರವಿಯ ಕಲ್ಲು ಕೊಂಡಂತೆ ಕೂಡಲಸಂಗಮದೇವಾ.
ಭಗವಂತನ ಒಲುಮೆಯಾದರೆ ಎಲ್ಲವೂ ಸಾಧ್ಯವಾಗುತ್ತದೆ. ಆತ ಮನಸ್ಸು ಮಾಡಿದರೆ ಆಸ್ತಿ, ಅಂತಸ್ತು, ಸಿರಿ, ಸಂಪತ್ತು, ಐಶ್ವರ್ಯ, ಮಾನ, ಸಮ್ಮಾನ, ಗೌರವಗಳು ಪ್ರಾಪ್ತವಾಗುತ್ತವೆ. ಯಾವುದು ಅಸಾಧ್ಯ ಎನ್ನುತ್ತೇವೆಯೋ ಅದೂ ಸರಳವಾಗಿ ದೊರೆಯುತ್ತದೆ. ಭಿಕ್ಷುಕನು ಕೂಡ ಒಂದೇ ಕ್ಷಣದಲ್ಲಿ ಕೋಟ್ಯಾಧಿಪತಿ ಆಗುತ್ತಾನೆ. ಸಕಲವೂ ನಮ್ಮದಾಗುತ್ತದೆ. ಅಂತಹ ಸಂದರ್ಭದಲ್ಲಿ ನಾವು ಮೈಮರೆಯಬಾರದು. ಎಲ್ಲವೂ ಭಗವಂತನ ಕೃಪೆಯಿಂದಲೆ ಸಾಧ್ಯವಾಯಿತು ಎಂಬ ಮನೋಭಾವದಿಂದ ಕಿಂಕರ ಸ್ವಭಾವವನ್ನು ರೂಢಿಸಿಕೊಳ್ಳಬೇಕು. ಆದರೆ, ಬಹುಪಾಲು ಜನರು ಸಣ್ಣ ಪದವಿ ದೊರೆತರೂ ಗರ್ವದಿಂದ ಬೀಗುತ್ತಾರೆ. ಆ ಪದವಿ ಹೋಯಿತೆಂದರೆ ಗರ್ವವೆಲ್ಲ ಮಾಯವಾಗುತ್ತದೆ. ಭಗವಂತನನ್ನು ಮರೆತ ಮರುಕ್ಷಣವೆ ನಮ್ಮ ಆಸ್ತಿ, ಅಂತಸ್ತು, ಸಿರಿ, ಸಂಪತ್ತು, ಗೌರವ ಎಲ್ಲವೂ ಕಳೆದು ಹೋಗುತ್ತದೆ. ಹೀಗಾಗಿ, ಎಲ್ಲದಕ್ಕೂ ಕಾರಣಕರ್ತನೆ ಭಗವಂತ ಎಂಬ ಮನೋಭಾವ ಸದಾಕಾಲವೂ ನಮ್ಮಲ್ಲಿರಬೇಕು ಎನ್ನುವುದು ಈ ವಚನದ ಸಾರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.