ADVERTISEMENT

ವಚನಾಮೃತ: ಸ್ವಾರ್ಥ ಬಿಡೋಣ, ಸಹಾಯ ಮಾಡೋಣ

ಡಾ.ಅಲ್ಲಮಪ್ರಭು ಸ್ವಾಮೀಜಿ
Published 16 ಜೂನ್ 2021, 7:28 IST
Last Updated 16 ಜೂನ್ 2021, 7:28 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

––––––

ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ

ADVERTISEMENT

ಬಂಧುಗಳು ಬಂದಾಗಳಿಲ್ಲೆನ್ನ;

ಲಿಂಗಕ್ಕೆ ಇಲ್ಲೆಂಬ, ಜಂಗಮಕೆ ಇಲ್ಲೆಂಬ

ಬಂದ ಪುರಾತರಿಗೆ ಇಲ್ಲೆಂಬ,

ಸಾವಾಗ ದೇಹವ ದೇಗುಲಕ್ಕೆ ಒಯ್ಯೆಂಬ,

ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ ಕೂಡಲಸಂಗಮದೇವಾ?

ಮಾನವನಷ್ಟು ಸ್ವಾರ್ಥ ಜೀವಿಯು ಈ ಜಗತ್ತಿನಲ್ಲಿ ಯಾವುದೂ ಇಲ್ಲವೆನಿಸುತ್ತದೆ. ಗಳಿಸಿದ ಆಸ್ತಿ, ಅಂತಸ್ತು, ಐಶ್ವರ್ಯದಿಂದ ತಾನು ಸುಖವನ್ನು ಅನುಭವಿಸುವುದಿಲ್ಲ. ಮತ್ತಷ್ಟು ಗಳಿಸಬೇಕೆಂಬ ಉದ್ದೇಶದಲ್ಲೇ ತನ್ನ ಜೀವನ ಕಳೆಯುತ್ತಾನೆ. ತನ್ನ ಹೊಟ್ಟೆಗೆ ಸರಿಯಾಗಿ ಹಾಕಿಕೊಳ್ಳದವನು, ಇನ್ನೊಬ್ಬರ ಹೊಟ್ಟೆಯನ್ನು ತಣ್ಣಗಿಡುತ್ತಾನೆಯೇ? ತಾನು ಚೆನ್ನಾಗಿ ಬಟ್ಟೆ ಹಾಕಿಕೊಳ್ಳದವನು ಬೇರೊಬ್ಬರಿಗೆ ಬಟ್ಟೆ ಕೊಡಿಸುತ್ತಾನೆಯೇ? ತನ್ನ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳದವನು ಬಂಧು–‌ಬಳಗದವರನ್ನು ನೋಡಿಕೊಳ್ಳುತ್ತಾನೆಯೇ? ಸ್ವಾರ್ಥಿಯಾದವನು ಇವ್ಯಾವುದನ್ನೂ ಮಾಡುವುದಿಲ್ಲ. ತನ್ನವರಿಗೆ ಏನೂ ಮಾಡದವ ಗುರು, ಲಿಂಗ, ಜಂಗಮರಿಗೆ ಮಾಡಿಯಾನೆ? ಸತ್ಪುರುಷರು, ಮಹಾತ್ಮರು ಕೂಡ ಅವನ ಕಣ್ಣಿಗೆ ಕಾಣುವುದಿಲ್ಲ. ಇಂತಹ ವ್ಯಕ್ತಿಯು ಸಾಯುವಾಗ ಭಗವಂತನ ನೆನೆದರೆ ಏನು ಸಾರ್ಥಕ? ಭಗವಂತನು ಭಕ್ತರನ್ನು ಅರೆದು, ಕೊರೆದು, ಪರೀಕ್ಷೆ ಮಾಡುವ ಈ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳು ಭಗವಂತನ ಕೃಪೆಗೆ ಪಾತ್ರರಾಗುವುದಿಲ್ಲ ಎನ್ನುವುದು ವಚನದ ಸಾರವಾಗಿದೆ. ಜೀವನದಲ್ಲಿ ಸ್ವಾರ್ಥ ಬಿಡಬೇಕು. ನಾಲ್ಕ ಜನರಿಗೆ ಒಳಿತು ಮಾಡಬೇಕು, ನೆರವಾಗಬೇಕು ಎಂಬ ಸಂದೇಶ ಇದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.