-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
***
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ!
ನಾಯಿಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ!
ನಮ್ಮ ಕೂಡಲಸಂಗನ ಶರಣರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.
ಮಾನವನು ಸದಾ ಕಾಲ ತನ್ನ ಜೀವನ ನಡೆಸುವದರ ಕುರಿತಾಗಿಯೇ ಚಿಂತಿಸುತ್ತಾನೆ. ಮೊದಲು ತನಗೆ ಸಾಕಾಗುವಷ್ಟನ್ನು ಮಾತ್ರ ಗಳಿಸಬೇಕೆಂದು, ಗಳಿಕೆಯಲ್ಲಿ ತೊಡಗುತ್ತಾನೆ. ನಂತರದಲ್ಲಿ ಆಸೆಯ ಪಾಶದಲ್ಲಿ ಸಿಲುಕಿ ಗಳಿಸುವ ಮಾರ್ಗಗಳು ಭ್ರಷ್ಟಾಚಾರದಿಂದ ಕೂಡುತ್ತವೆ. ಅನ್ಯಾಯ, ಅಕ್ರಮದಿಂದ ಗಳಿಸಿದ ಹಣವನ್ನು ಆತ ಕೇವಲ ತನಗೆ ಬಂದ ರೋಗಗಳನ್ನು ವಾಸಿ ಮಾಡಿಕೊಳ್ಳಲು, ತನಗಾದ ನೋವುಗಳಿಗೆ ಮಾತ್ರ ಖರ್ಚು ಮಾಡುತ್ತಾನೆಯೇ ವಿನಃ ಒಳ್ಳೆಯ ಕಾರ್ಯಗಳಿಗೆ ಬಳಸುವುದಿಲ್ಲ.ಅದಕ್ಕಾಗಿಯೇ ಬಸವಣ್ಣನವರು ಅಂತಹ ವ್ಯಕ್ತಿಗಳನ್ನು ಪಾಪಿಗಳು ಎಂದು ಕರೆದಿದ್ದಾರೆ.
ನಾಯಿಯ ಹಾಲು ನಾಯಿಯ ಮರಿಗೆ ಮಾತ್ರ ಮೀಸಲಾಗಿರುತ್ತದೆಯೋ ಹಾಗೆಯೇ ಪಾಪಿಗಳು ಗಳಿಸಿದ ಹಣ ಅದು ಪ್ರಾಯಶ್ಚಿತ್ತಕ್ಕೆ ಮಾತ್ರ ಸಲ್ಲುತ್ತದೆ. ಭಗವಂತನಿಗೆ ಸಲ್ಲಿಸದ ನಮ್ಮ ಹಣ ಅದು ಇದ್ದರೂ ವ್ಯರ್ಥ. ಆದ್ದರಿಂದ ನಾವು ಸದಾ ಕಾಲ ಕಾಯಾ, ವಾಚಾ, ಮನಸಾ, ತನು–ಮನ– ಧನದಿಂದ ಭಗವಂತನಿಗೆ ಭಕ್ತಿಯನ್ನು ಸಲ್ಲಿಸಬೇಕು. ಆಗ ಅವನ ಕೃಪೆ ಸಾಧ್ಯವಾಗುತ್ತದೆ. ಸ್ವಾರ್ಥಕ್ಕಾಗಿ, ಅಸೆಯ ಪಾಶಕ್ಕೆ ಸಿಲುಕಬಾರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.